*ಯೋಗೀಶ್ ಕುಂಭಾಸಿ
ಉಡುಪಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಕೋಟ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ಕುಂದಾಪುರದ ಕೋಟ ಸಮೀಪದ ಚಿತ್ರಪಾಡಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಬಂಧಿತ ಆರೋಪಿಯನ್ನು ಗುಲ್ಬರ್ಗಾ ಮೂಲದ ಭೀಮಶಂಕರ್(49) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 1 ಕೆ.ಜಿ. 600 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ಮೂಲತಃ ಗುಲ್ಬರ್ಗದವನಾದ ಭೀಮಶಂಕರ್ ಕಳೆದ ಒಂದೆರಡು ವರ್ಷಗಳಿಂದ ಕೋಟ ಸಮೀಪದ ಪಡುಕೆರೆ ಎಂಬಲ್ಲಿ ವಾಸವಿದ್ದ ಎನ್ನಲಾಗಿದೆ. ಹೇಳಿಕೊಳ್ಳಲು ಅದೇನೋ ಕೆಲಸ ಕಾರ್ಯ ಮಾಡಿಕೊಂಡಿದ್ದ ಭೀಮಶಂಕರ್ ಆಗೀಗ ತನ್ನೂರಿಗೆ ತೆರಳಿ ಅಲ್ಲಿ ಕಡಿಮೆ ಹಣಕ್ಕೆ ಸಿಗುವ ಗಾಂಜಾವನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ ಮಣಿಪಾಲ ಹಾಗೂ ಕುಂದಾಪುರ, ಕೋಟೇಶ್ವರ ಆಸುಪಾಸಿಗೆ ಈತ ಗಾಂಜಾ ಸಪ್ಲೈ ಮಾಡುತ್ತಿದ್ದ ಎನ್ನುವ ವದಂತಿಗಳಿದೆ. ಆದರೇ ತಾನು ಇದು ಎರಡೇ ಬಾರೀ ಗಾಂಜಾ ಡೀಲಿಂಗ್ ಮಾಡಿದ್ದಾಗಿ ಬಂಧಿತ ಆರೋಪಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಕೋಟ ಠಾಣೆ ಎಸ್.ಐ. ಕಬ್ಬಾಳರಾಜ್ ಹಾಗೂ ತಂಡದವರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Comments are closed.