
ಮಂಗಳೂರು,ಜೂನ್.24 : ಪಡೀಲು-ಬಜಾಲ್ ಮುಖ್ಯರಸ್ತೆಯಲ್ಲಿರುವ ರೈಲ್ವೇ ಕೆಳಸೇತುವೆಯ ಅವೈಜ್ಞಾನಿಕ ಕಾಮಗಾರಿಗಳನ್ನು ಖಂಡಿಸಿ ಹಾಗೂ ತಕ್ಷಣವೇ ತುರ್ತು ಪರಿಹಾರಕ್ಕಾಗಿ ಅಂಡರ್ ಪಾಸ್ ಬಳಕೆ ಆಗ್ರಹಿಸಿ ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಮತ್ತು ಜಲ್ಲಿಗುಡ್ಡೆ ಘಟಕವು ಅಂಡರ್ಪಾಸ್ನಲ್ಲಿ ಶುಕ್ರವಾರ ಗಾಳ, ಕುರುವೆ, ಬಲೆಗಳನ್ನು ಬಳಸಿ ಮೀನು ಹಿಡಿಯುವ ಮೂಲಕ ವಿನೂತನ ಮಾದರಿ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಂಗಳೂರು ನಗರ ಹೊರಭಾಗದ ಪಡೀಲು-ಬಜಾಲ್ ಮುಖ್ಯರಸ್ತೆ ಯಲ್ಲಿರುವ ರೈಲ್ವೇ ಕೆಳಸೇತುವೆ ನಿರ್ಮಾಣಗೊಂಡು ವರ್ಷ ಕಳೆದರೂ ಈ ಮಾರ್ಗವಾಗಿ ಹಲವು ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆಯನ್ನು ಈವರೆಗೂ ಸಂಪೂರ್ಣ ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಮ.ನ.ಪಾ ಒದಗಿಸಿಲ್ಲ. ಸೇತುವೆ ನಿರ್ಮಾಣದ ನಂತರ ಫೈಸಲ್ನಗರ ಹಾಗೂ ಜಯನಗರ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಮುಚ್ಚಲಾಗಿದ್ದು ಈ ಭಾಗದ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಮುಖ್ಯ ರಸ್ತೆಯಾದ ಪಡೀಲುವರೆಗೆ ನಡೆದುಕೊಂಡೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಮತ್ತೊಂದೆಡೆ ಈ ಕೆಳಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದ್ದು ಮಳೆಗಾಲದ ನೀರು ಸರಿಯಾಗಿ ಹರಿದು ಹೋಗುವಂತೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ. ಇದರಿಂದ ಮಳೆ ಪ್ರಾರಂಭವಾಗಿ ಒಂದು ವಾರದಲ್ಲೇ ಸೇತುವೆ ನೀರಿನಿಂದ ಮುಳುಗಡೆಗೊಂಡಿದ್ದು ಈ ಮಾರ್ಗವಾಗಿ ವಾಹನ ಸಂಚರಿಸಲು ಸಾಧ್ಯವಾಗದೆ, ಬದಲೀ ಮಾರ್ಗವಾಗಿ ಸಂಚರಿಸುವ ಪರಿಸ್ಥಿತಿ ಈ ಭಾಗದ ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ರೈಲ್ವೇ ಇಲಾಖೆ ಹಾಗೂ ಮ.ನ.ಪಾ.ದ ಹೊಂದಾಣಿಕೆ ಕೊರತೆಯಿಂದಾಗಿ ಈ ರೀತಿಯ ಅವ್ಯವಸ್ಥೆಗೆ ಕಾರಣವಾಗಿದೆ.
ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ, ನಗರ ಪಾಲಿಕೆ ಮಾತ್ರವಲ್ಲದೆ ಸ್ಥಳೀಯ ಶಾಸಕರು ಸಹ ಬೇಜಾವಾಬ್ದಾರಿಯಿಂದ ವರ್ತಿಸಿದ್ದು ಈ ಎಲ್ಲಾ ಅವ್ಯವಸ್ಥೆ ಸರಿಪಡಿಸಬೇಕೆಂದು ಅಗ್ರಹಿಸಿದರು.
Comments are closed.