ಕರಾವಳಿ

ಎತ್ತಿನಹೊಳೆ ಸಾಧಕ ಬಾಧಕದ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಪ್ರಮುಖರ ಜೊತೆ ಸಭೆ :  ಆಸ್ಕರ್ ಫೆರ್ನಾಂಡಿಸ್

Pinterest LinkedIn Tumblr
yettinahole_meet_1
ಮಂಗಳೂರು, ಜೂ.22: ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ‘ನೇತ್ರಾವತಿ ಬಚಾವೊ’ ಎಂಬ ಜಿಲ್ಲೆಯ ಜನಪ್ರತಿನಿಧಿ ಗಳೊಂದಿಗಿನ ಸಂವಾದ ಕಾರ್ಯಕ್ರಮ ಮಂಗಳವಾರ ನಗರದ ಸಹೋದಯ ಸಭಾಂಗಣದಲ್ಲಿ ನಡೆಯಿತು.
ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ, ಸಂಸದ ಆಸ್ಕರ್ ಫೆರ್ನಾಂಡಿಸ್ ಅವರು, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಸೂಕ್ತ ದಿನವೊಂದನ್ನು ನಿಗದಿಪಡಿಸಿ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಯೋಜನೆ ವಿರೋಧಿ ಹೋರಾಟಗಾರರು, ತಜ್ಞರನ್ನು ಒಳಗೊಂಡ ಪ್ರಮುಖ ಸಭೆಯನ್ನು ಕರೆಯಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ  ಶೀಘ್ರದಲ್ಲೇ ಸಭೆ ದಿನಾಂಕ ನಿಗದಿಪಡಿಸಿ, 15 ದಿನಗಳಿಗೆ ಮುಂಚಿತವಾಗಿ ತಿಳಿಸಲಾಗುವುದು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ಕುರಿತಂತೆ ಉಂಟಾಗಿರುವ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆ ಮಾಡಿದಾಗ ನಮ್ಮ ಪ್ರದೇಶದ ಜನರನ್ನು ಕರೆದು ಅವರ ಸಂದೇಹ, ಸೂಚನೆಗಳನ್ನು ಆಲಿಸಿ ಯೋಜನೆಯಲ್ಲಿ ಬದಲಾವಣೆ ತರಬಹುದು ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗಿತ್ತು. ಇದಕ್ಕಾಗಿ ಮುಖ್ಯಮಂತ್ರಿಯವರು ಎರಡು ಬಾರಿ ಸಭೆ ನಿಗದಿ ಮಾಡಿದ್ದರೂ ಕಾರಣಾಂತರಗಳಿಂದ ಮುಂದೂಡಬೇಕಾಯಿತು. ಇದೀಗ ಮತ್ತೆ ನೀರಾವರಿ ಸಚಿವರೂ ಸಭೆ ಕರೆಯಲು ಒಪ್ಪಿದ್ದಾರೆ. ಆದ್ದರಿಂದ ಎಲ್ಲಿ ಸಭೆ ನಡೆಸಬೇಕು, ಯಾರೆಲ್ಲಾ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಬಗ್ಗೆ ಪಟ್ಟಿಯನ್ನು ನೀಡುವಂತೆ ಅವರು ಹೋರಾಟ ಸಮಿತಿಗೆ ಸಲಹೆ ನೀಡಿದರು.
yettinahole_meet_2 yettinahole_meet_3 yettinahole_meet_4  yettinahole_meet_6 yettinahole_meet_7 yettinahole_meet_8 yettinahole_meet_9 yettinahole_meet_10 yettinahole_meet_11 yettinahole_meet_12 yettinahole_meet_13 yettinahole_meet_14
ಹಿರಿಯ ಜಲತಜ್ಞ ಪ್ರೊ.ಎಸ್.ಜಿ. ಮಯ್ಯ ಅವರು ಮಾತನಾಡಿ,  ಎತ್ತಿನಹೊಳೆ ಯೋಜನೆಯಡಿ ಸರಕಾರ ಹೇಳಿಕೊಂಡಿರುವಂತೆ ಯಾವುದೇ ಕಾರಣಕ್ಕೂ 24 ಟಿಎಂಸಿ ನೀರು ಲಭ್ಯವಾಗಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಸದ್ಯ ಈ ಯೋಜನೆಯಿಂದ ಯಾವುದೇ ತೊಂದರೆಯಾಗದಿದ್ದರೂ, ದೀರ್ಘಕಾಲೀನವಾಗಿ ಈ ಯೋಜನೆ ಪಶ್ಚಿಮಘಟ್ಟದ ತಪ್ಪಲಿನ ಎಲ್ಲಾ ಜಿಲ್ಲೆಗಳಿಗೂ ಮಾರಕವಾಗಿ ಪರಿಣಮಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ನದಿ ಜಲಾನಯನ ಪ್ರಾಧಿಕಾರ ರಚನೆಯಿಂದ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವೇ ಎಂದು ಸಭೆಯಲ್ಲಿ ಶಾಸಕ ಜೆ.ಆರ್. ಲೋಬೊ ಪ್ರಶ್ನಿಸಿದಾಗ, ಕರ್ನಾಟಕಕ್ಕೆ ಸಂಬಂಧಿಸಿ ಹಲವಾರು ಜಲನೀತಿ, ಪ್ರಾಧಿಕಾರಗಳಿವೆ. ಆದರೆ ಕರಾವಳಿಗೆ ಪ್ರತ್ಯೇಕವಾಗಿ ಜಲನೀತಿಯೊಂದೇ ಇಲ್ಲಿನ ಸಮಸ್ಯೆಗೆ ಪರಿಹಾರ ಎಂದು ಪ್ರೊ. ಮಯ್ಯ ಅಭಿಪ್ರಾಯಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಮಠದ ಈಶ ವಿಠ್ಠಲದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಸಚಿವ ಅಮರನಾಥ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್, ಎಮ್ ಎಲ್ ಸಿ  ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ವಿಪ ಸದಸ್ಯ ಮೋನಪ್ಪ ಭಂಡಾರಿ, ಬಾಲಕೃಷ್ಣ ಭಟ್, ಸಾಕ್ಷಚಿತ್ರ ಛಾಯಾಚಿತ್ರಗ್ರಾಹಕರಾಗಿರುವ ಸುಧೀರ್ ಶೆಟ್ಟಿ,   ಮೊದಲಾವದರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಘಟಿಸಿದ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ವಿಜಯ ಕುಮಾರ್ ಶೆಟ್ಟಿ, ಎಂ.ಜಿ. ಹೆಗಡೆ, ದಿನಕರ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಸತ್ಯಜಿತ್ ಸುರತ್ಕಲ್, ದಿನೇಶ್ ಹೊಳ್ಳ, ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯ ಮಂಡಿಸಿದರು.

Comments are closed.