ರಾಷ್ಟ್ರೀಯ

ಕೈರಾಣಾ: ಹಿಂದುಗಳ ವಲಸೆಗೆ ಮುಸ್ಲಿಮರು ಕಾರಣರಲ್ಲ; ಕ್ರಿಮಿನಲ್‌ ಗಳು !

Pinterest LinkedIn Tumblr

Kairana-700ಕೈರಾನಾ : ಉತ್ತರ ಪ್ರದೇಶದ ಕೈರಾನಾದಿಂದ ಹಿಂದುಗಳ ಸಾಮೂಹಿಕ ವಲಸೆ ನಡೆದಿರುವುದಕ್ಕೆ ಮುಸ್ಲಿಮರು ಕಾರಣರೇ ಅಲ್ಲ; ಅದಕ್ಕೆ ಕ್ರಿಮಿನಲ್‌ಗ‌ಳೇ ಕಾರಣ; ಕ್ರಿಮಿನಲ್‌ಗ‌ಳಿಗೆ ಮತ – ಧರ್ಮ ಯಾವುದೂ ಇಲ್ಲ; ಕೈರಾಣಾದ ಸಮಸ್ಯೆಗೆ ಕೋಮು ಬಣ್ಣ ನೀಡುವುದು ಶುದ್ಧ ತಪ್ಪು’ ಎಂದು ಹಿಂದೂ ಮಹಾಸಭಾದ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.

ಉತ್ತರ ಪ್ರದೇಶದ ಕೈರಾಣಾದಿಂದ ಹಿಂದುಗಳ ಬಲವಂತದ ಸಾಮೂಹಿಕ ವಲಸೆ ನಡೆದಿದೆ ಎಂಬ ಬಗ್ಗೆ ಬಿಜೆಪಿ ಈಗಾಗಲೇ ಸಿಬಿಐ ತನಿಖೆಯನ್ನು ಒತ್ತಾಯಿಸಿದೆ. ಆದರೆ ಇದೀಗ ಕೈರಾನಾಗೆ ಭೇಟಿ ನೀಡಿರುವ ಹಿಂದ ಸಾಧುಗಳ ತಂಡವೊಂದು “ಕೋಮು ದಾಳ ಎಸೆದು ರಾಜಕೀಯದಾಟ ಆಡುತ್ತಿರುವ ಕೇಸರಿ ಪಕ್ಷ’ವನ್ನು ತರಾಟೆಗೆ ತೆಗೆದುಕೊಂಡಿದೆ.

ಹಿಂದು ಸಭಾದ ನಾಯಕರಾಗಿರುವ ಸ್ವಾಮಿ ಚಕ್ರಪಾಣಿ, ಸ್ವಾಮಿ ಚಿನ್ಮಯಾನಂದ, ಆಚಾರ್ಯ ಪ್ರಮೋದ ಕೃಷ್ಣನ್‌, ನಾರಾಯಣ ಗಿರಿ ಮತ್ತು ಸ್ವಾಮಿ ಕಲ್ಯಾಣ ದೇವ್‌ಜೀ ಮಹರಾಜ್‌ ಅವರನ್ನು ಒಳಗೊಂಡ ತಂಡವು ಪಶ್ಚಿಮ ಉತ್ತರ ಪ್ರದೇಶದ ಕೈರಾನಾಗೆ ಭೇಟಿ ನೀಡಿ ಅಲ್ಲಿನ ಅನೇಕ ಕುಟುಂಬಗಳನ್ನು ಸಂದರ್ಶಿಸಿ ಸತ್ಯಶೋಧನೆ ನಡೆಸಿತು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರ ಸಹೋದರ ಹಾಗೂ ಉ.ಪ್ರದೇಶದ ಕ್ಯಾಬಿನೆಟ್‌ ಸಚಿವರಾಗಿರುವ ಶಿವಪಾಲ್‌ ಯಾದವ್‌ ಅವರು ಕೈರಾಣಾಗೆ ರಾಜಕೀಯೇತರ ಸಾಧುಗಳ ತಂಡ ಭೇಟಿ ಸತ್ಯ ಶೋಧನೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಮಾಧ್ಯಮದೊಂದಿಗೆ ಮಾತನಾಡಿದ ಸ್ವಾಮಿ ಚಕ್ರಪಾಣಿ ಅವರು, “ಕೈರಾಣಾದ ಸಮಸ್ಯೆಗೆ ಧಾರ್ಮಿಕ ಆಯಾಮ ಇದೆ ಎಂದು ಹೇಳುವುದು ತಪ್ಪು. ಬಿಜೆಪಿ ಮತ್ತು ಅದರ ಸಂಸದ ಹುಕುಂ ಸಿಂಗ್‌ ಅವರು ಕೋಮು ದಾಳವನ್ನು ಆಡುತ್ತಿದ್ದಾರೆ. ಈ ಪ್ರಾಂತ್ಯದಲ್ಲಿರುವ ಹಿಂದುಗಳ ಮನಸ್ಸಿನಲ್ಲಿ ಭಯದ ಬೀಜ ಬಿತ್ತಿ ಚುನಾವಣೆ ಗೆಲ್ಲುವುದು ಅವರ ಏಕೈಕ ಅಜೆಂಡಾ ಆಗಿರುವಂತೆ ತೋರಿ ಬರುತ್ತಿದೆ. ದ್ವೇಷ ಮತ್ತು ಭಯ ಹುಟ್ಟಿಸುವ ರಾಜಕಾರಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದರು.
=ಉದಯವಾಣಿ

Comments are closed.