ಕರಾವಳಿ

ಅವಧಿ ಮೀರಿದ ಔಷಧಿಗಳ ನಾಶ : ಸಚಿವ ಯು.ಟಿ.ಖಾದರ್

Pinterest LinkedIn Tumblr
kadar_health_meet_1
ಮಂಗಳೂರು, ಜೂ.14: ಸುಮಾರು 13 ವರ್ಷಗಳಿಂದ ರಾಜ್ಯದ ಜಿಲ್ಲೆಗಳ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಅವಧಿ ಮೀರಿದ ಔಷಧಿಗಳನ್ನು ಮುಂದಿನ 6 ತಿಂಗಳೊಳಗೆ ನಾಶಪಡಿಸಲಾಗುವುದು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಸೋಮವಾರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಧಿ ಮೀರಿದ ಔಷಧಿಗಳನ್ನು ನಾಶಪಡಿಸಲು ಆರು ತಿಂಗಳ ಹಿಂದೆ ನೀತಿಯನ್ನು ಜಾರಿಗೆ ತರಲಾಗಿದೆ.  ಇದಕ್ಕಾಗಿ ಸುಮಾರು ಒಂದು ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಅದರ ಆಧಾರದಲ್ಲಿ ಟೆಂಡರ್ ಕರೆದು ಪರಿಸರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ಆ ಎಲ್ಲಾ ಔಷಧಿಗಳನ್ನು ನಾಶಪಡಿಸಲಾಗುವುದು. ಬಳಿಕ ಪ್ರತಿ ವರ್ಷ ಈ ನಿಯಮದಡಿ ಅವಧಿ ಮೀರಿದ ಔಷಧಿಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಲಾಗುವುದು. ಇದರ ವೆಚ್ಚವನ್ನು ಆರೋಗ್ಯ ಇಲಾಖೆ ಭರಿಸಲಿದೆ ಎಂದು ಹೇಳಿದರು.
kadar_health_meet_2 kadar_health_meet_3 kadar_health_meet_4
ಹಿಂದೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಅವಧಿ ಮೀರಿದ ಔಷಧಿಗಳನ್ನು ಸಂಗ್ರಹಿಸಿ, ಜಿಲ್ಲಾ ಗೋದಾಮಿಗೆ ಕಳುಹಿಸಿ ಅಲ್ಲಿಂದ ರಾಜ್ಯ ಡ್ರಗ್ ಲಾಜಿಸ್ಟಿಕ್‌ಗೆ ಕಳುಹಿಸಿ ಬಳಿಕ ಕಂಪನಿಯಿಂದ ಬದಲಿ ಔಷಧಿಯನ್ನು ಪಡೆದುಕೊಳ್ಳಲಾಗುತ್ತಿತ್ತು. ಅವಧಿ ಮೀರಿದ ಔಷಧಿಗಳನ್ನು ಮಣ್ಣಿನಡಿ ಹೂಳುವ ವ್ಯವಸ್ಥೆ ಇತ್ತು. ಆದರೆ ಪರಿಸರ ಇಲಾಖೆಯ ವಿರೋಧದ ಹಿನ್ನೆಲೆಯಲ್ಲಿ 2000ನೆ ಇಸವಿಯಿಂದ ಅವಧಿ ಮೀರಿದ ಔಷಧಿಗಳನ್ನು ನಾಶಪಡಿಸಲು ಯಾವುದೇ ವ್ಯವಸ್ಥೆ ಇಲ್ಲದೆ ಹಾಗೇ ಇಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಇಂತಹ ಸುಮಾರು 1.5 ಕೋಟಿ ರೂ.ಗಳಷ್ಟು ಅವಧಿ ಮೀರಿದ ಔಷಧಿ ಸಂಗ್ರಹವಾಗಿದೆ ಎಂದು ಅವರು ಹೇಳಿದರು.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮೊಬೈಲ್ ಘಟಕ :
ಡೆಂಗ್, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ. ಜಿಲ್ಲೆಗೆ ಈ ಸಂಬಂಧ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಪ್ರತಿ ಜಿಲ್ಲೆಗಳಲ್ಲೂ ತಪಾಸಣೆ, ಸ್ಪ್ರೇಯರ್ ಹಾಗೂ ದಾದಿಯರನ್ನು ಒಳಗೊಂಡ ಪ್ರತ್ಯೇಕ ಸಂಚಾರಿ ಘಟಕವನ್ನು ಸನ್ನದ್ಧಗೊಳಿಸಲಾಗಿದೆ ಎಂದು ಸಚಿವ ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪದ್ಮನಾಭ ನರಿಂಗಾನ, ಕವಿತಾ ಸನಿಲ್, ಕುಂಞ ಮೋನು, ದಿನೇಶ್ ರೈ, ಸಂತೋಷ್ ಶೆಟ್ಟಿ, ಮುಹಮ್ಮದ್ ಮೋನು ಉಪಸ್ಥಿತರಿದ್ದರು.

 

Comments are closed.