
ಮಂಗಳೂರು,ಮೇ.28: ದ.ಕ.ಜಿಲ್ಲೆಯ ನಾಲ್ವರು ಸಚಿವರು ಕಾಂಗ್ರೆಸ್ಸಿನ ರಾಜ್ಯ ಸರಕಾರದಲ್ಲಿದ್ದರೂ ಜಿಲ್ಲೆಯ ಅಭಿವೃದ್ಧಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ದ.ಕ. ಜನತೆಯ ಪಾಲಿಗೆ ಇದು ಸ್ಪಂದನ ಶೂನ್ಯ ಸರಕಾರವಾಗಿದೆ ಎಂದು ದ.ಕ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಟೀಕಿಸಿದ್ದಾರೆ.
ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯನ್ನು ಪ್ರತಿನಿಧಿಸುವಂತ ಕಾಂಗ್ರೆಸ್ನ ನಾಲ್ವರು ಸಚಿವರ ಕೊಡುಗೆಯೇನು – ಈ ಭಾಗದ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಜಿಲ್ಲೆಯ ಜನತೆ ಸಹಜವಾಗಿಯೇ ಖುಷಿಗೊಂಡಿದ್ದರು. ಜಿಲ್ಲೆಯ ಬಹುತೇಕ ಸಮಸ್ಯೆಗಳು ಬಗೆಹರಿಯಬಹುದು ಎಂಬ ತುಂಬು ವಿಶ್ವಾಸದಲ್ಲಿದ್ದರು. ಆದರೆ ವರ್ಷ ಮೂರು ಕಳೆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಯಾವೊಂದು ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ. ಸ್ವತಃ ಜಿಲ್ಲೆಯ ಜನತೆಯೇ ಮಂತ್ರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ. ನಾಲ್ವರು ಸಚಿವರಿದ್ದು, ಜಿಲ್ಲೆ ಅಭಿವೃದ್ಧಿ ಕಾರ್ಯದಲ್ಲಿ ಮಾದರಿಯಾಗಬೇಕಿತ್ತು ಆದರೆ ಆದದ್ದಾರೂ ಏನು ಎಂದವರು ಪ್ರಶ್ನಿಸಿದ್ದಾರೆ.

ಯಥಾ ರಾಜಾ ತಥಾ ಮಂತ್ರಿ ಎಂಬಂತೆ ನಿದ್ದೆ ಮಾಡುವ ಮುಖ್ಯಮಂತ್ರಿಗೆ ನಿದ್ದೆ ತೂಗುವ ಮಂತ್ರಿಗಳು. ಆದರೆ ಇವರ ನಿದ್ದೆಯಿಂದಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಂದ ಜನತೆ ಸಂತ್ರಸ್ತರಾದರೂ ಯಾರೂ ಸ್ಪಂದಿಸುತ್ತಿಲ್ಲ. ನುಡಿದಂತೆ ನಡೆಯುತ್ತೇವೆ ಎಂದು ಜನತೆಗೆ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವುದು ಬಿಡಿ, ಸಮಸ್ಯೆಗಳೇನು ಎಂದು ಕೇಳುವ ಗೋಜಿಗೂ ಹೋಗಿಲ್ಲ. ಟೇಕ್ ಆಫ್ ಆಗುವುದಲ್ಲ ರನ್ವೇಯಲ್ಲಿ ಬಾಕಿ ಆಗಿ ಅವಧಿ ಮುಗಿಯುವ ಮುನ್ನ ಪತನಕ್ಕೆ ಕಾಯುವ ನಿಷ್ಕ್ರಿಯ ,ಭ್ರಷ್ಟ ಸರಕಾರವಾಗಿದೆ ಎಂದು ದೂರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ಬಿಜೆಪಿ ಪ್ರಮುಖರಾದ ನಿತಿನ್ ಕುಮಾರ್, ಸಂಜೀವ,ಮಠಂದೂರು,ರವಿಶಂಕರ ಮಿಜಾರು, ದಿವಾಕರ ಸಾಮಾನಿ, ಸಂಜಯ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
Comments are closed.