
ಮ೦ಗಳೂರು, ಮಾ.30: ಸುಮಾರು 56 ರ್ಷಗಳಿಂದ ಕೌಶಲ್ಯಭರಿತ ಮಾನವ ಸಂಪನ್ಮೂಲವನ್ನು ದೇಶ ವಿದೇಶಗಳಿಗೆ ಒದಗಿಸಿರುವ ಹೆಗ್ಗಳಿಕೆ ಈ ಸಂಸ್ಥೆಯದಾಗಿದ್ದು, ಐಟಿಐ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ವಿಫುಲವಾಗಿರುತ್ತದೆ. ತರಬೇತಿ ಮುಗಿದ ನಂತರ ಸ್ವಂತ ಉದ್ದಿಮೆಯನ್ನು ಸ್ಥಾಪಿಸುವ ನಿಲುವನ್ನೂ ವಿದ್ಯಾರ್ಥಿಗಳು ಹೊಂದಿರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಅವರು ಕದ್ರಿಹಿಲ್ಸ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ.ಆರ್ ಲೋಬೊ ಇವರು “ಮನಸ್ಸಿದ್ದರೆ ಮಾರ್ಗವಿದೆ. ತಮ್ಮ ವೃತ್ತಿಗಳಲ್ಲಿ ಉತ್ಕೃಷ್ಟತೆ ಪಡೆದಲ್ಲಿ ಹೇಗೆ ಯಶಸ್ಸು ಸಾಧಿಸಬಹುದು” ಎಂದು ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ವಿಶೇಷ ಆಹ್ವಾನಿತರಾದ ಜರ್ಮನ್ ಕೌಶಲ್ಯ ಅಭಿವೃದ್ದಿ ನಿಪುಣರಾದ ಅಂಟೋನಿಯಸ್ ಪೀಟರ್ ಜಾಕ್ಸ್ “ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ಆಧುನಿಕತೆಗೆ ತಕ್ಕಂತೆ ನಮ್ಮ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸುವುದು ಸ್ಪರ್ಧಾತ್ಮಕ ಜಗತ್ತಿನ ಇಂದಿನ ಅವಶ್ಯಕತೆಯಾಗಿದೆ” ಎಂದು ತಮ್ಮ ಅಭಿಪ್ರಾಯ ಮಂಡಿಸಿದರು. ಎನ್.ಎಸ್.ಎಸ್.ಅಧಿಕಾರಿ ಹಾಗೂ ಕಿರಿಯ ಶಿಶಿಕ್ಷು ಸಲಹೆಗಾರ ಜುಲಿಯನ್ ಆಲ್ವಿನ್ ಡಿಕುನ್ನಾ ಕಾರ್ಯಕ್ರಮ ನಿರೂಪಿಸಿದರು.