
ಮಂಗಳೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿವಾದ ಇನ್ನಷ್ಟು ತೀವ್ರಗೊಳ್ಳಲು ಜಿಲ್ಲಾಧಿಕಾರಿ ಹಾಗೂ ರಾಜ್ಯಸರಕಾರವೇ ಕಾರಣ. ಹಿಂದೂಗಳ ಜಾತ್ರೋತ್ಸವಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಿಲ್ಲಾಧಿಕಾರಿ ಹಾಗೂ ರಾಜ್ಯಸರಕಾರವೇ ಉಲ್ಲಂಘಿಸುತ್ತಿದ್ದು ಇದನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ತೀವ್ರವಾಗಿ ಖಂಡಿಸುವುದಾಗಿ ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಹೇಳಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಹಿಂದೂಯೇತರರಾದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರನ್ನು ನಮೂದಿಸುವುದು ಸರಿಯಲ್ಲ ಎಂಬುದನ್ನು ಧಾರ್ಮಿಕ ಇಲಾಖೆಯ ಕಾನೂನು ಸ್ಪಷ್ಟಪಡಿಸುತ್ತದೆ. ಆದರೂ ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಿಲ್ಲಾಧಿಕಾರಿ ಹಾಗೂ ರಾಜ್ಯಸರಕಾರವೇ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಈಗಾಗಲೇ ಹಲವಾರು ಹಿಂದೂಗಳ ಭಾವನೆಗಳಿಗೆ ಘಾಸಿಮಾಡಿದ್ದಾರೆ. ನಂದಿಗುಡ್ಡಯ ಸ್ಮಶಾನ ಹಿಂದೂಗಳಿಗೆ ಸೀಮಿತವಾಗಿದ್ದು, ಆ ಜಾಗವನ್ನು ಮುಸ್ಲಿಮರಿಗೂ ದಫನಕ್ಕೆ ಭೂಮಿಯನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಆದರೆ ನಮ್ಮ ಹೋರಾಟದಿಂದ ಅದು ಸಾಧ್ಯವಾಗಿಲ್ಲ. ಕುಕ್ಕೆಸುಬ್ರಮಣ್ಯ ದೇವಸ್ಥಾನದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಹೆಸರನ್ನು ಹಾಕಲಾಗಿದೆ. ಆದರೆ ಅದೇ ತಪ್ಪನ್ನು ಮತ್ತೊಮ್ಮೆ ಮಾಡಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ನ ಪ್ರಮುಖರಾದ ಮನೋಹರ್ ಸುವರ್ಣ,ಪುನೀತ್ ಅತ್ತಾವರ, ನಾಗೇಶ್ ಉಪಸ್ಥಿತರಿದ್ದರು.