
ಕೊಯಂಬತ್ತೂರು: ಕಳ್ಪಟ್ಟಿಯ ಚರ್ಚ್ ಒಂದರ ಮೇಲೆ ನಡೆದ ದಾಳಿಯ ಪ್ರಕರಣದಲ್ಲಿ ಕೋವಿಲಪಾಳ್ಯಮ್ ಪೊಲೀಸರು ಹಿಂದು ಸಂಘಟನೆಗಳಿಗೆ ಸೇರಿದ ಐವರನ್ನು ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತರಾದವರು ಬಿಜೆಪಿಯ ಪ್ರಾದೇಶಕ ಕಾರ್ಯದರ್ಶಿ ಪಿ ಸಂಪತ್ (೪೩), ಮತ್ತು ಆರ್ ಕುಟ್ಟಿ (೩೪). ಎಸ್ ಶಕ್ತಿವೇಲ್ (೨೯), ಎನ್ ವಿಜ್ಞೇಶ್ (೨೫) ಮತ್ತು ಕೆ ದೇವರಾಜ್ (೬೦) ಎಂದು ಗುರುತಿಸಲಾಗಿದೆ.
ಚರ್ಚ್ ಉಸ್ತುವಾರಿ ನಡೆಸುತ್ತಿದ್ದವರು ನೀಡಿರುವ ದೂರಿನ ಆಧಾರದ ಮೇಲೆ ಈ ಎಲ್ಲರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಚರ್ಚ್ ಹತ್ತಿರವೇ ಒಂದು ದೇವಾಲಯವಿದ್ದಿದ್ದರಿಂದ ಚರ್ಚ್ ಚಟಿವಟಿಕೆಗಳನ್ನು ನಿಲ್ಲಿಸಲು ಈ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
೧೯೪೮ರಿಂದ ಅಸ್ತಿತ್ವದಲ್ಲಿರುವ ಈ ಚರ್ಚ್ ಅನ್ನು ಇತ್ತೀಚೆಗಷ್ಟೇ ನವೀಕರಿಸಿ ವಿಸ್ತರಣೆ ಮಾಡಲಾಗಿತ್ತು. ಇದರ ವಿರುದ್ಧವಾಗಿ ತಡೆ ನೀಡಲು ಕೋರ್ಟ್ ಗೆ ಈ ಹಿಂದೂ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಇದನ್ನು ತಿರಸ್ಕರಿಸಿದ್ದ ಕೋರ್ಟ್ ಚರ್ಚ್ ನವೀಕರಣಕ್ಕೆ ಅವಕಾಶ ನೀಡಿ, ಅದಕ್ಕೆ ಅಗತ್ಯ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಿತ್ತು.
ಬುಧವಾರ ನವೀಕರಣ ಕಾರ್ಯ ಮುಗಿದಿತ್ತು. ಆದರೆ ಇದರ ಮೇಲೆ ದಾಳಿ ಮಾಡಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಸ್ತಿಯನ್ನು ಧ್ವಂಸಗೊಳಿಸಿದ್ದರು. ಏಳು ಚರ್ಚ್ ಗಳಿಂದ ಭಾನುವಾರ ೧೦೦೦ಕ್ಕೂ ಹೆಚ್ಚು ಜನರು ಜಿಲ್ಲಾಧಿಕಾರಿಗಳಿಂದ ರಕ್ಷಣೆ ಕೋರಿ ಭಾನುವಾರ ಅರ್ಜಿ ಸಲ್ಲಿಸಿದ್ದರು.