ಕುಂದಾಪುರ: ಅಕ್ರಮ ಜಾನುವಾರ ಸಾಗಾಟ ನಡೆಯುತ್ತಿದೆಯೆಂದು ಸಿಕ್ಕ ಸುಳ್ಳು ಸುದ್ದಿಯನ್ನೇ ನಂಬಿದ ಹಿಂದೂಪರಸಂಘಟನೆ ಕಾರ್ಯಕರ್ತರು ಯಾವುದೇ ಪರಾಮರ್ಷೆ ಮಾಡದೇ ಏಕಾಏಕಿ ಲಾರಿಯನ್ನು ಅಡ್ಡಗಟ್ಟಿ ಚಾಲಕ ಸಹಿತ ನಾಲ್ವರಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ಎಂಬಲ್ಲಿ ಮಂಗಳವಾರ ನಡೆದಿದೆ.
8 ಮಂದಿ ಬಂಧನ, ಹಲವು ಬೈಕ್ ವಶ
ಏಕಾಏಕಿ ಹೆದ್ದಾರಿಯಲ್ಲಿ ಲಾರಿಯನ್ನು ಅಡ್ಡಗಟ್ಟಿದವರನ್ನು ತಲ್ಲೂರು ಹಾಗೂ ಹೆಮ್ಮಾಡಿ ಭಾಗದ ಹಿಂದೂಪರ ಸಂಘಟನೆ ಕಾರ್ಯಕರ್ತರು ಎನ್ನಲಾಗಿದ್ದು ಅವರುಗಳ ಪೈಕಿ ಎಂಟಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಈ ವೇಳೆ ಹಲವರು ತಪ್ಪಿಸಿಕೊಂಡಿದ್ದು ಸ್ಥಳದಲ್ಲಿದ್ದ 10ಕ್ಕೂ ಅಧಿಕ ಬೈಕುಗಳನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.

ಪರವಾನಿಗೆ ಸಹಿತ ಸಾಗಣೆ!
ಪೂನಾದಿಂದ ಲಾರಿಯಲ್ಲಿ ಜಾನುವಾರುಗಳನ್ನು ತುಂಬಿಸಿಕೊಂಡು ಮಂಗಳೂರಿನ ಬಂಟ್ವಾಳದ ನೇರಳಕಟ್ಟೆಯ ಗೋಶಾಲೆಯೊಂದಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಯಾವುದೇ ಪರವಾನಿಗೆಯಿಲ್ಲದೇ ಅಕ್ರಮವಾಗಿ ಜಾನುವಾರು ಸಾಗಣಿಕೆ ನಡೆಸುತ್ತಿದ್ದಾರೆಮ್ದು ಆರೋಪಿಸಿ ಲಾರಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಆದರೇ ಲಾರಿಯಲ್ಲಿದ್ದ 15ಕ್ಕೂ ಅಧಿಕ ಜಾನುವಾರು ಸಾಗಣಿಕೆಗೆ ಪರವಾನಿಗೆ, ವೈದ್ಯಕೀಯ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ಬಗೆಯ ದಾಖಲೆ ಪತ್ರಗಳಿದ್ದರೂ ಕೂಡ ಈ ಅಮಾನುಷ ಘಟನೆ ನಡೆದೇ ಹೋಗಿತ್ತು.

ಪೊಲೀಸರಿಂದ ಲಾಠಿ ಪ್ರಹಾರ
ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಲಾರಿ ಅಡ್ಡಗಟ್ಟಿ ಲಾರಿಯಲ್ಲಿದ್ದವರಿಗೆ ಹಲ್ಲೆ ನಡೆಸಿದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆಯಾಗಿ ಹಲವು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರಿಗೆ ಮಾಹಿತಿ ಸಿಕ್ಕುತ್ತಿದ್ದಂತೆಯೇ ಖುದ್ದು ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್ ಸ್ಥಳಕ್ಕೆ ಭೇಟಿ ನೀಡಿದ್ದು ಈ ವೇಳೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದರೆನ್ನಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಯಿದ್ದ ಕಾರಣ ಪೊಲೀಸರು ಲಾಠಿಗೆ ಕೆಲಸ ನೀಡಿದ್ದಾರೆ. ಈ ವೇಳೆ ಗುಂಪು ಚದುರಿದ್ದು ಸ್ಥಳದಲ್ಲಿದ್ದ ಹಲವರನ್ನು ವಶಕ್ಕೆ ಪಡೆಯಲಾಗಿತ್ತು.

‘ಗೀರ್’ ತಳಿಯ ದನಗಳಿದ್ದವು!
ಲಾರಿಯಲ್ಲಿ 13 ಗೀರ್ ತಳಿಯ ದನಗಳು ಹಾಗೂ ಏಳೆಂಟು ಪುಟ್ಟ ಕರುಗಳಿದ್ದವು. ಇವು ವಿಶೇಷ ತಳಿಯ ದನಗಳಾಗಿದ್ದು ಪೂನಾ ಹಾಗೂ ವಿವಿದೆಡೆಗಳಿಂದ ಜಾನುವಾರು ಸಂಗ್ರಹಿಸಿ ಬಂಟ್ವಾಳಕ್ಕೆ ತರಲಾಗುತ್ತಿತ್ತು. ಇಲ್ಲಿನ ಘಟನೆಯಿಂದಾಗಿ ದನ ಹಾಗೂ ಕರುಗಳು ಲಾರಿಯೈಯೇ ಉರಿಬಿಸಿಲಿನಲ್ಲಿ ಒದ್ದಾಡುವಂತಾಗಿತ್ತು.
ಕುಂದಾಪುರ ಎಸ್ಸೈ ನಾಸೀರ್ ಹುಸೇನ್, ಕ್ರೈಮ್ ವಿಭಾಗದ ಎಸ್ಸೈ ದೇವರಾಜ್, ಅಮಾಸೆಬೈಲು ಎಸ್ಸೈ ಸುನೀಲ್ ಕುಮಾರ್ ಮೊದಲಾದವರು ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.