ಬಂಟ್ವಾಳ,ಫೆ.19 : ತಾಲೂಕಿನ ಪಿಲಾತಬೆಟ್ಟು, ಕಾವಳ ಮೂಡೂರು, ಪಂಜಿಕಲ್ಲು , ಕೊಳ್ನಾಡು ಹಾಗೂ ಬಿಮೂಡ ಗ್ರಾಮದ ವಿವಿಧೆಡೆ ಉಂಟಾಗಿರುವ ಕಾಡ್ಗಿಚ್ಚಿಗೆ ರಬ್ಬರ್ ತೋಟಗಳ ಸಹಿತ ನೂರಾರು ಎಕ್ರೆ ಪ್ರದೇಶ ಗುರುವಾರ ಹಾಡುಹಗಲೇ ಬೆಂಕಿಗಾಹುತಿಯಾಯಿತು.
ತಾಲೂಕಿನ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ಮಣ್ಣೂರು ಜೋಕಿಂ , ಮೂರ್ಜೆ ಪೇಟೆಭಾಗ, ಕುಮಂಗಿಲ ರತ್ನಗಿರಿಯ ರಾಧಾಕೃಷ್ಣ ರಾವ್ ಅವರ ಸುಮಾರು 10 ಎಕ್ರೆ ಜಮೀನಿನಲ್ಲಿದ್ದ ರಬ್ಬರ್,ತೆಂಗು, ಗೇರು ತೋಟಗಳು ಬೆಣಕಿಗಾಹುತಿಯಾಗಿದೆ. ಕಾವಳ ಮೂಡೂರು ಗ್ರಾಮದ ಮಜಲು ಎಂಬಲ್ಲಿ ಟೋಮಿ , ಪಿಲಿಕುಡೇಲು ನಲ್ಲಿ ಜೋಯಿ, ಪಂಜಾಡಿ ಗೋವರ್ಧನ ಶೆಟ್ಟಿ , ಅಗತ್ಯರ್ಾರು ಶ್ರೀನಿವಾಸ್ ನಾಯಕ್ ಹಾಗೂ ನೆಲ್ಲಿಗುಡ್ಡೆ ಶಾಂತಾರಾಮ ಆಚಾರ್ಯ ಮುಚ್ಚಿಲೋಡಿ ಸೂರ್ಯಹಾಸ ಆಚಾರ್ಯ ರವರ ಒಟ್ಟು ಸುಮಾರು 20 ಎಕರೆಗಳಷ್ಟು ರಬ್ಬರ್ ಹಾಗೂ ಗುಡ್ಡಗಾಡು ಪ್ರದೇಶಗಳು ಬೆಂಕಿಗಾಹುತಿಯಾಗಿದೆ.
ಬಿಮೂಡ ಗ್ರಾಮದ ಚಿಕ್ಕಯ್ಯನ ಮಠದ ಬಳಿಯ ಬಳಕದ ಗುಡ್ಡೆ, ಗೂಡಿನಬಳಿ ಪರಿಸರದ ಗುಡ್ಡದಲ್ಲಿ ಏಕಾಏಕಿ ಬೆಂಕಿಗಾಹುತಿಯಾಗಿದ್ದು, ಖಾಲಿ ಗುಡ್ಡೆಯಲ್ಲಿದ್ದ ಮರಗಳು, ಕಳೆಗಿಡಗಳು ಉರಿದು ಆತಂಕಕ್ಕೆ ಕಾರಣವಾಯಿತು.
ಕಾವಳ ಮೂಡೂರಿನ ಮಜಲು, ಪಿಲಿಕುಡೇಲು , ಪಂಜಾಡಿ , ಪ್ರದೇಶಗಳೂ ಅಕ್ಕಪಕ್ಕದಲ್ಲಿದ್ದು ಬೆಳೀಗ್ಗೆ 11 ಗಂಟೆಯ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ಪ್ರದೇಶಗಳಿಗೂ ಹರಡಿತ್ತು. ಇತ್ತ ನೆಲ್ಲಿಗುಡ್ಡೆ, ಮತ್ತು ಮುಚ್ಚಲೋಡಿ ಪ್ರದೇಶಗಳಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದು ದಟ್ಟವಾದ ಹೊಗೆ ಆವರಿಸಿತ್ತು.
ಸುದ್ದಿ ತಿಳಿದ ಬಂಟ್ವಾಳ, ಮಂಗಳೂರು, ಬೆಳ್ತಂಗಡಿ , ಪುತ್ತೂರು ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಬೆಂಕಿನಂದಿಸುವ ಕಾರ್ಯದಲ್ಲಿ ನಿರತರಾದರು. ಇದೇ ವೇಳೆ ಕೊಳ್ನಾಡು ಗ್ರಾಮದ ಗುಡ್ಡ ಪ್ರದೇಶದಲ್ಲಿಯೂ ಹಾಗೂ ಬಿಮೂಡ ಗ್ರಾಮದ ಬಳಕದ ಗುಡ್ಡೆ, ಚಿಕ್ಕಯ್ಯನ ಮಠ ಹಾಗೂ ಗೂಡಿನಬಳೀಯ ಗುಡ್ಡ ಪ್ರದೇಶಗಳಲ್ಲಿಯೂ ಅಪರಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಬಂಟ್ವಾಳದ ಅಗ್ನಿಶಾಮಕ ದಳದ ವಾಹನಗಳು ಲಭ್ಯವಿಲ್ಲದ ಕಾರಣ ಪುತ್ತೂರಿನ ಅಗ್ನಿಶಾಮಕ ದಳದ ವಾಹನವನ್ನು ಕರೆಸಲಾಯಿತು. ಆದರೆ ಆ ವೇಳೆಗಾಗಲೇ ಬಹುಪ್ರದೇಶ ಬೆಂಕಿಗಾಹುತಿಯಾಗಿತ್ತು.
ಬಿಮೂಡ ಗ್ರಾಮದಲ್ಲಿ ಮನೆಗಳೂ ಹತ್ತಿರ ಇದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಬೆಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರೂ, ಬೆಂಕಿಯ ತೀವ್ರತೆ ಹೆಚ್ಚುತ್ತಲೇ ಇತ್ತು. ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ಪೂಂಜಾಳಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
