ಕನ್ನಡ ವಾರ್ತೆಗಳು

ಚುನಾವಣಾ ಕರ್ತವ್ಯ ತಪ್ಪಿಸಿದರೆ ಶಿಸ್ತುಕ್ರಮ: ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಎಚ್ಚರಿಕೆ

Pinterest LinkedIn Tumblr

Dc_election_,atter

ಮ೦ಗಳೂರು ಫೆ,09: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಸಿಬ್ಬಂದಿಗಳಿಗೆ ಯಾವುದೇ ರೀತಿಯಲ್ಲಿ ಕರ್ತವ್ಯದಿಂದ ವಿನಾಯಿತಿ ನೀಡಲಾಗದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಅವರು ಚುನಾವಣೆ ಸಿದ್ಧತೆಗಳ ಬಗ್ಗೆ ತಮ್ಮ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಚುನಾವಣೆಯ ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂದಿಗಳಿಂದ ವಿನಾಯಿತಿ ಕೋರಿ ಭಾರೀ ಸಂಖ್ಯೆಯಲ್ಲಿ ಮನವಿಗಳು ಬರುತ್ತಿವೆ. ಯಾವುದೇ ನೈಜ ಕಾರಣಗಳಿಲ್ಲದೇ ಹಾಗೂ ಪೂರಕ ವೈದ್ಯಕೀಯ ದಾಖಲೆಗಳಿಲ್ಲದೆ ಆರೋಗ್ಯದ ನೆಪವೊಡ್ಡಿ ಚುನಾವಣಾ ಕರ್ತವ್ಯ ವಿನಾಯಿತಿ ನೀಡುವಂತೆ ಸರಕಾರಿ ನೌಕರರಿಂದ ಮನವಿಗಳು ಬರುತ್ತಿವೆ. ಸಮರ್ಪಕ ವೈದ್ಯಕೀಯ ಕಾರಣಗಳಿದ್ದರೆ, ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಖುದ್ದಾಗಿ ಬಂದು ಮನವಿ ನೀಡಬೇಕು, ನೈಜ ಪ್ರಕರಣಗಳನ್ನು ಪರಿಶೀಲಿಸಬಹುದು. ಆದರೆ, ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಆದೇಶವಾಗಿರುವ ಸಿಬ್ಬಂದಿಗಳು ಕುಂಟುನೆಪವೊಡ್ಡಿ ಚುನಾವಣಾ ಕರ್ತವ್ಯದಿಂದ ಹಿಂಜರಿಯಲು ಯತ್ನಿಸಿದರೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಚುನಾವಣಾ ಕರ್ತವ್ಯದಿಂದ ಕೈಬಿಡಲು ಕೋರಿ ಸಿಬ್ಬಂದಿಗಳು ಸಲ್ಲಿಸಿರುವ ಮನವಿಗಳನ್ನು ಸ್ವೀಕರಿಸಿರುವುದಕ್ಕೆ ತಹಶೀಲ್ದಾರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಕಾರಣಕ್ಕೂ ಇಂತಹ ಮನವಿಗಳನ್ನು ಸ್ವೀಕರಿಸದಂತೆ ಮತ್ತು ಪುರಸ್ಕರಿಸದಂತೆ ಸೂಚಿಸಿದರು.

ಚುನಾವಣೆಯ ಸೆಕ್ಟರ್ ಅಧಿಕಾರಿಗಳಿಗೆ ಫೆ.11ರಂದು ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಫೆಬ್ರವರಿ 13ರಂದು ತರಬೇತಿ ನಡೆಯಲಿದೆ. ಶೇಕಡಾ 25ರಷ್ಟು ಮತಗಟ್ಟೆಗಳ ವೀಡಿಯೋ ಚಿತ್ರೀಕರಣ ನಡೆಸಲಾಗುವುದು. ಚುನಾವಣೆಯಲ್ಲಿ ಮತದಾರರ ಬಲಗೈ ಹೆಬ್ಬೆರಳಿಗೆ ಶಾಯಿ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

ಚುನಾವಣೆಯ ಹೊಸ್ತಿಲಲ್ಲಿ ಜಿಲ್ಲೆಯ ಕೆಲವೆಡೆ ಮತದಾನ ಬಹಿಷ್ಕಾರದ ವರದಿಗಳು ಬರುತ್ತಿದ್ದು, ಈ ಬಗ್ಗೆ ತಹಶೀಲ್ದಾರ್‌ಗಳು ಕೂಡಲೇ ಅಲ್ಲಿಗೆ ಭೇಟಿ ನೀಡಿ, ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ತಾಲೂಕು ಚುನಾವಣಾಧಿಕಾರಿಗಳು, ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.

Write A Comment