ನವದೆಹಲಿ (ಪಿಟಿಐ): ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಐಎಸ್) ಭಾರತದ ಯುವಕರನ್ನು ತನ್ನ ತೆಕ್ಕೆಗೆ ಸೆಳೆಯುವ ಯತ್ನಗಳು ಹೆಚ್ಚಿದ ಬೆನ್ನಲ್ಲೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮುಸ್ಲಿಮ್ ಮುಖಂಡರೊಂದಿಗೆ ಮಂಗಳವಾರ ಸಭೆ ನಡೆಸಿದರು.
ಸುಮಾರು ಒಂದು ಗಂಟೆಯ ನಡೆದ ಮಾತುಕತೆಯ ವೇಳೆ, ಐಎಸ್ ಉಗ್ರ ಸಂಘಟನೆ ಮಧ್ಯಪ್ರಾಚ್ಯದಲ್ಲಿ ನಡೆಸುತ್ತಿರುವ ಕೃತ್ಯಗಳು ಹಾಗೂ ತನ್ನ ತೆಕ್ಕೆಗೆ ಭಾರತದ ಯುವಕರನ್ನು ಸೆಳೆಯಲು ಮಾಡುತ್ತಿರುವ ಯತ್ನಗಳ ಕುರಿತು ಮುಸ್ಲಿಮ್ ಧಾರ್ಮಿಕ ಮುಖಂಡರಿಗೆ ತಿಳಿಸಿದರು.
ಈ ವೇಳೆ, ಐಎಸ್ ಸೆಳೆತಕ್ಕೆ ಭಾರತೀಯ ಯುವಕರು ಒಳಗಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸಹಕರಿಸುವಂತೆ ಮೌಲ್ವಿಗಳಲ್ಲಿ ರಾಜನಾಥ್ ಕೋರಿದರು. ಈ ಸಂಬಂಧ ಸರ್ಕಾರಕ್ಕೆ ನೆರವಾಗುವುದಾಗಿ ಧಾರ್ಮಿಕ ಮುಖಂಡರು ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.
ಮಾತುಕತೆಯಲ್ಲಿ ರಾಜನಾಥ್ ಅವರೊಟ್ಟಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್ ಹಾಗೂ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.