ಕೋಲ್ಕತ: ಜನರ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಪಶಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಸಾತ್ ಉಪವಿಭಾಗದ ಕಾಮದುನಿ ಗ್ರಾಮದ 21ರ ಹರೆಯದ ಕಾಲೇಜು ವಿದ್ಯಾರ್ಥಿನಿ ಮೇಲೆ 2013ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣದ 8 ಆರೋಪಿಗಳ ಪೈಕಿ 8 ಮಂದಿ ತಪ್ಪಿತಸ್ಥರು ಎಂ ಕೋಲ್ಕತದ ಸೆಷನ್ಸ್ ನ್ಯಾಯಾಲಯವೊಂದು ಗುರುವಾರ ತೀರ್ಪು ನೀಡಿದೆ.
ಕಟ್ಟಡ ನಿರ್ಮಾಣ ಕಾರ್ಮಿಕನೊಬ್ಬನ ಪುತ್ರಿಯಾದ ಬಡ ವಿದ್ಯಾರ್ಥಿನಿ 2013ರ ಜೂನ್ 7ರಂದು ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಒಯ್ದ 9 ಜನರ ತಂಡ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಬರ್ಬರವಾಗಿ ಹತ್ಯೆಗೈದಿತ್ತು. ಮರುದಿನ ಆಕೆಯ ಶವ ಹೊಲವೊಂದರಲ್ಲಿ ಪತ್ತೆಯಾಗಿತ್ತು. ಸುದ್ದಿ ಹರಡುತ್ತಿದ್ದಂತೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯ ಅಲೆ ಎದ್ದಿತ್ತು. ಆರೋಪಿ ಅನ್ಸರ್ ಅಲಿಯನ್ನು ಜೂನ್ 8ರಂದೇ ಪತ್ತೆ ಹಚ್ಚಿದ ಗ್ರಾಮಸ್ಥರು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದರು. ಬಳಿಕ ಸೈಫುಲ್ ಅಲಿ, ಎಸ್ಕೆ ಎಮಾಮುಲ್ ಇಸ್ಲಾಂ, ಅಮೀನುರ್ ಇಸ್ಲಾಂ, ಭೋಲಾ ನಸ್ಕರ್, ಅಮಿನ್ ಅಲಿ, ನೂರ್ ಅಲಿ ಮತ್ತು ರಫೀಖುಲ್ ಇಸ್ಲಾಂ ಗಾಝಿ ಮತ್ತು ಗೋಪಾಲ್ ನಸ್ಕರ್ ಅವರನ್ನು ಬಂಧಿಸಲಾಗಿತ್ತು. ವಿಚಾರಣೆ ಮಧ್ಯೆ ಗೋಪಾಲ್ ನಸ್ಕರ್ ಸಾವನ್ನಪ್ಪಿದ್ದ.
ವಿಚಾರಣೆ ಎದುರಿಸುತ್ತಿದ್ದ ಉಳಿದ 8 ಮಂದಿಯ ಪೈಕಿ 6 ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳಲಿದೆ.