
ಮಂಗಳೂರು, ಜ.25: ರಾಮಕೃಷ್ಣ ಮಿಷನ್ ನೇತೃತ್ವದ ‘ಸ್ವಚ್ಛ ಮಂಗಳೂರು’ ಅಭಿಯಾನದ 36ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ನಗರದ ನವಭಾರತ ವೃತ್ತ- ಕೋಡಿಯಾಲ್ ಬೈಲ್ ಪರಿಸರದಲ್ಲಿ ಕೈಗೊಳ್ಳಲಾಯಿತು.
ನಿನ್ನೆ ಬೆಳಿಗ್ಗೆ ನವಭಾರತ ವೃತ್ತದ ಬಳಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿಜಿತ ಕಾಮಾನಂದಜಿ ಹಾಗೂ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತಿಯಲ್ಲಿ ಪೂರ್ವ ಶಾಸಕರಾದ ಎನ್.ಯೋಗಿಶ್ ಭಟ್ ಹಾಗೂ ಮನಪಾ ಸದಸ್ಯ ಪ್ರೇಮಾನಂದ ಶೆಟ್ಟಿ 36 ನೇ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಮನೋವೈದ್ಯಡಾ. ಸತೀಶ್ರಾವ್, ಪ್ರೋ. ಸತೀಶ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಚ್ಛತೆ : ನವಭಾರತ ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸ್ವಚ್ಛತಾ ಕೈಂಕರ್ಯ ನಡೆಯಿತು. ಪ್ರಪ್ರಥಮವಾಗಿ ಸ್ವಾಮಿಜಿ ಹಾಗೂ ಗಣ್ಯರು ಪೊರಕೆ ಹಿಡಿದು ಕಸಗೂಡಿಸಿದರು. ಸುಮಾರು 150ರಷ್ಟಿದ್ದ ಸ್ವಚ್ಛತಾ ಕಾರ್ಯಕರ್ತರ ಗುಂಪನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ ನಿಗದಿಪಡಿಸಿದ ಸ್ವಚ್ಛತಾ ಕಾರ್ಯಕ್ಕೆ ಕಳುಹಿಸಲಾಯಿತು. ಮೊದಲ ತಂಡಕ್ಯಾಪ್ಟನ್ ಬ್ರಿಜೇಶ್ ನೇತೃತ್ವದಲ್ಲಿ ವೃತ್ತವನ್ನು ಸ್ವಚ್ಛಗೊಳಿಸಿದರು.
ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಿದ್ದ ಎರಡನೇ ತಂಡವನ್ನು ಪ್ರಾಧ್ಯಾಪಕ ಅಲ್ವಿನ್ ಡೇಸಾ ಪಾಸ್ಪೋರ್ಟ್ ಕಚೇರಿಯಿಂದ ಬಿಷಪ್ ಹೌಸ್ ವರೆಗೆ ಮುನ್ನಡೆಸಿ ಸ್ವಚ್ಛಗೊಳಿಸಿದರು. ಡೊಂಗರಕೇರಿ ರಸ್ತೆಯಲ್ಲಿ ಮೂರನೇ ತಂಡವನ್ನು ಸದಾಶಿವ ಕಾಮತ್ ಹಾಗೂ ಆರ್ಟ್ಆಫ್ ಲೀವಿಂಗ ಸದಸ್ಯರು ಮಾರ್ಗದರ್ಶಿಸಿ ಶುಚಿಗೊಳಿಸಿದರು. ನಾಲ್ಕನೇ ಗುಂಪು ರಾಮಕುಮಾರ ಬೇಕಲ್ ಮುಂದಾಳುತನದಲ್ಲಿ ವೃತ್ತದ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯಕೈಗೊಂಡರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನಾಲ್ಕೂ ತಂಡಗಳು ಉಸ್ತುವಾರಿ ನೋಡಿಕೊಂಡರು.

ಸ್ವಚ್ಛ ಸರ್ಕಲ್: ಇತ್ತೀಚಿನ ಕೆಲ ವರ್ಷಗಳಿಂದ ನವಭಾರತ ವೃತ್ತ ಸಮರ್ಪಕ ನಿರ್ವಹಣೆ ಇಲ್ಲದೇ ಅಂದ ಕಳೆದುಕೊಂಡಿತ್ತು. ಕೇವಲ ಪ್ರಚಾರ ಸಾಮಗ್ರಿಗಳನ್ನು ಕಟ್ಟುವುದಕ್ಕೆ ಹಾಗೂ ಭಿತ್ತಿಚಿತ್ರಗಳನ್ನು ಅಂಟಿಸುವುದಕ್ಕೆ ಉಪಯೋಗಿಸಿ ಸೌಂದರ್ಯವನ್ನು ಕಳೆದುಕೊಂಡಿತ್ತು. ಸ್ವಚ್ಛ ಮಂಗಳೂರು ಕಾರ್ಯಕರ್ತರು ಅದನ್ನು ಸರಿಪಡಿಸಬೇಕೆಂದು ಸಂಕಲ್ಪಿಸಿ ಇಂದು ಪ್ರಥಮ ಹಂತದಲ್ಲಿ ಪೂರ್ವ ಶಾಸಕರಾದ ಶ್ರೀ ಎನ್ಯೋಗಿಶ್ ಭಟ್ ನೇತೃತ್ವದಲ್ಲಿ ಕಳೆ-ಕಸವನ್ನೆಲ್ಲ ಕಿತ್ತು ಶುಚಿಗೊಳಿಸಿದರು. ಅಲ್ಲಲ್ಲಿ ಅಂಟಿಸಿದ್ದ ಕರಪತ್ರಗಳನ್ನು ತೆಗೆದು, ನೀರಿನಿಂದ ತೊಳೆದರು. ನಂತರಇಡೀ ವೃತ್ತದಲ್ಲಿರುವ ಕಬ್ಬಿಣದ ಸರಳುಗಳಿಗೆ ಬಣ್ಣ ಹಚ್ಚಿ ಚೆಂದಗೊಳಿಸಲಾಗಿದೆ. ಸುಮಾರು ಒಂದು ಗಂಟೆಯ ಕಾಲ ಯೋಗಿಶ್ ಭಟ್ ಸರ್ಕಲ್ಗೆ ಬ್ರಷ್ನಿಂದ ಬಣ್ಣ ಹಚ್ಚಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಬಗೆದಷ್ಟೂ ಕಸ: ನವಭಾರತ ವೃತ್ತದಿಂದ ಡೊಂಗರಕೇರಿ ರಸ್ತೆಯಲ್ಲಿ ಅಲ್ಲಲ್ಲಿ ಹಾಕಿದ್ದಕಸದ ರಾಶಿಗಳನ್ನು ತೆರವುಗೊಳಿಸಲಾಗಿದೆ. ಮಂಗಳೂರಿನ ಆರ್ಟ್ಆಫ್ ಲೀವಿಂಗ್ನ ಉತ್ಸಾಹಿ ಸದಸ್ಯರು ಅನೇಕ ವರ್ಷಗಳಿಂದ ಬಿದ್ದುಕೊಂಡಿದ್ದ ರಾಶಿ ರಾಶಿ ಕಸ ಹಾಗೂ ಗಾಜುಗಳ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ. ಎಷ್ಟು ಬಗೆದ ಷ್ಟೂಕಸದ ರಾಶಿ ಕಣ್ಣಿಗೆರಾಚುತ್ತಿತ್ತು ಆದ್ದರಿಂದ ಅಂತಿಮವಾಗಿ ಈ ಕಾರ್ಯಕ್ಕೆ ಜೆಸಿಬಿಯನ್ನು ಬಳಸಿ ಸಂಪೂರ್ಣವಾಗಿ ಶುಚಿಗೊಳಿಸಲಾಗಿದೆ.
ತೋಡುಗಳ ಸ್ವಚ್ಛತೆ : ಮಳೆಯ ನೀರು ಹೋಗುವುದಕ್ಕೆಂದು ಮಾಡಲಾದ ತೋಡುಗಳ ಕಸದ ತೊಟ್ಟಿಗಳಾಗಿವೆ. ಒಶನ್ ಪರ್ಲ್ ಹೋಟೆಲ್ ಎದುರಿನ ತೋಡು ಇದಕ್ಕೊಂದು ನಿದರ್ಶನವಾಗಿತ್ತು. ಇಂದುಅದನ್ನು ಹೈಲ್ಯಾಂಡ್ ಲಯನ್ಸ ಕ್ಲಬ್ ಸದಸ್ಯರು ರಂಜನ್ ಕೆ.ಎಸ್. ಇವರ ನೇತೃತ್ವದಲ್ಲಿ ತೋಡಿಗಿಳಿದು ಸ್ವಚ್ಛಗೊಳಿಸಿದರು. ಅದರಂತೆ ಪಾಸಪೋರ್ಟ್ ಕಚೇರಿ ಮುಂಭಾಗದ ತೋಡನ್ನೂ ಕಸಮುಕ್ತವನ್ನಾಗಿಸಲಾಗಿದೆ.
ಸಾರ್ವಜನಿಕರಲ್ಲಿ ಜಾಗೃತಿ: ಬೀದಿಗಳಲ್ಲಿ ಸ್ವಚ್ಛತೆ ಮಾಡುವುದರೊಂದಿಗೆ ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ! ಅದರಂತೆ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಚತೆಯ ಮಹತ್ವವನ್ನು ಸಾರುವ ಕರಪತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ, ದಾರಿಹೋಕರಿಗೆ, ವ್ಯಾಪಾರಿಗಳಿಗೆ ಸ್ವಚ್ಚ ಪರಿಸರ ಕುರಿತ ಕರಪತ್ರ ನೀಡಿದರು.
ಈ ಭಾನುವಾರದ ಅಭಿಯಾನದಲ್ಲಿ ಕಾರ್ಪೊರೇಶನ್ ಬ್ಯಾಂಕಿನಎಜಿಎಂ ರವಿಶಂಕರ್, ಪತ್ರಕರ್ತ ಪ್ರಕಾಶ ಇಳಂತಿಲ, ಕಾರ್ಯಕರ್ತರಾದ ದಿಲ್ರಾಜ್ ಆಳ್ವ, ವಿಠಲದಾಸ ಪ್ರಭು, ಸುರೇಶ್ ಶೆಟ್ಟಿ, ಸತ್ಯನಾರಾಯಣ ಕೆ.ವಿ., ಉಮಾನಾಥಕೋಟೆಕಾರ್, ಪ್ರೋ. ರಾಧಾಕೃಷ್ಣ, ಪ್ರೋ. ಶೇಷಪ್ಪ ಅಮೀನ್, ಪ್ರೊ. ಮಹೇಶ್ ಕೆ.ಬಿ. ಮತ್ತಿತರರು ಸಕ್ರೀಯವಾಗಿ ಪಾಲ್ಗೊಂಡಿದ್ದರು. ಮಹಾಪೋಷಕರಾಗಿ ಈ ಅಭಿಯಾನಕ್ಕೆ ಎಂಆರ್ಪಿಎಲ್ ಸಂಸ್ಥೆ ಈ ಅಭಿಯಾನಕ್ಕೆ ಧನ ಸಹಾಯ ನೀಡುತ್ತಿದೆ.