
ಬೆಂಗಳೂರು: ಮೂಲಗಳನ್ನು ನಂಬುವುದಾದರೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಮತ್ತೇ ‘ಮಾಣಿಕ್ಯ’ ಮಂತ್ರಿಕತೆಯನ್ನು ಸೃಷ್ಟಿಸಲು ಒಂದಾಗಲಿದ್ದಾರಂತೆ. ಸುದೀಪ್ ಮುಖ್ಯನಟನಾಗಿರುವ ‘ಹೆಬ್ಬುಲಿ’ ಚಿತ್ರದಲ್ಲಿ ನಟಿಸಲು ನಿರ್ದೇಶಕ ಎಸ್ ಕೃಷ್ಣ ಅವರು ಕ್ರೇಜಿ ಸ್ಟಾರ್ ಅವರನ್ನು ಕೇಳಿದ್ದಾರಂತೆ.
“ನಿರ್ದೇಶಕರೇ ರಚಿಸಿರುವ ಹೆಬ್ಬುಲಿ ಕಥೆಯನ್ನು ರವಿಚಂದ್ರನ್ ಮೆಚ್ಚಿದ್ದಾರೆ ಮತ್ತು ಸಿನೆಮಾದ ಭಾಗವಾಗಲು ಆಸಕ್ತಿ ತೋರಿದ್ದಾರೆ. ಸಿನೆಮಾದ ಹಣಾಕಾಸು ವಿಷಯ ಸದ್ಯಕ್ಕೆ ಮಾತುಕತೆಯಲ್ಲಿದೆ” ಎನ್ನುತ್ತವೆ ಮೂಲಗಳು. ಇವರ ಪ್ರಕಾರ ಎಲ್ಲವೂ ನೆನೆದಂತೆ ನಡೆದರೆ ಸುದೀಪ್ ಅಣ್ಣನ ಪಾತ್ರಕ್ಕೆ ರವಿಚಂದ್ರನ್ ಬಣ್ಣ ಹಚ್ಚಲಿದ್ದಾರೆ.
೨೦೧೪ ರಲ್ಲಿ ತೆಲುಗು ಚಿತ್ರ ‘ಮಿರ್ಚಿ’ಯ ರಿಮೇಕ್ ‘ಮಾಣಿಕ್ಯ’ದಲ್ಲಿ ಈ ಇಬ್ಬರೂ ನಟರು ನಟಿಸಿದ್ದು ಬಾಕ್ಸ್ ಆಫೀಸ್ ನಲ್ಲಿ ಸಿನೆಮಾ ಒಳ್ಳೆಯ ಸದ್ದು ಮಾಡಿತ್ತು. ‘ಹೆಬ್ಬುಲಿ’ಯಲ್ಲಿ ಸುದೀಪ್ ಸೇನಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.