
ಮಂಗಳೂರು,ಜ.೦6: ಸರ್ಕಾರವು ಬುದ್ಧಜಯಂತಿ, ಗಾಂಧಿಜಯಂತಿ, ಅಂಬೇಡ್ಕರ್ ಜಯಂತಿ, ಹುತಾತ್ಮರ ದಿನ, ಮಹಾವೀರ ಜಯಂತಿ, ಕೃಷ್ಣಾಷ್ಠಮಿ, ಗಣೇಶ ಚತುರ್ಥಿ, ಮಹಾ ಶಿವರಾತ್ರಿ, ರಾಮನವಮಿ , ಸಂಕ್ರಾತಿ, ರಾಮಲಿಂಗ ಅಡಿಕಲಾರ್ ಮೆಮೋರಿಯಲ್ ದಿನ ಹೀಗೆ ಕೆಲವು ದಿನಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧ ಆದೇಶವನ್ನು ಹೊರಡಿಸಲಾಗಿದೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಪ್ರಸ್ತಾಪಿಸಿದ್ದಾರೆ.
ಪ್ರಮುಖ ದಿನಗಳಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಕ್ಕೆ 1970ರಲ್ಲೇ ಆದೇಶ ಹೊರಡಿಸಲಾಗಿತ್ತು. ಆದರೆ, ದೇಶ ಹಾಗೂ ರಾಜ್ಯದಲ್ಲಿ ಹಲವಾರು ಜಾಗತಿಕ ಬದಲಾವಣೆಗಳಾಗಿರುವಾಗ ಮಾಂಸ ಮಾರಾಟ ನಿಷೇಧವನ್ನು ಮರು ಪರಿಶೀಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವೊಂದು ಹಬ್ಬಗಳು ಸ್ಥಳೀಯವಾಗಿ ಯಾವುದೇ ಮಹತ್ವ ಪಡೆದಿಲ್ಲ. ಉದಾಹರಣೆಗೆ ರಾಮಲಿಂಗ ಅಡಿಕಲಾರ್ ಬಗ್ಗೆ ರಾಜ್ಯದಲ್ಲಿ ತಿಳಿದವರೇ ಕಡಿಮೆ. ಆ ದಿನವನ್ನು ಯಾವ ಸಮುದಾಯದವರು ಆಚರಿಸುತ್ತಾರೆಂಬುದೇ ಗೊತ್ತಿಲ್ಲದಿರುವಾಗ ರಾಜ್ಯದಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿವಧೆಯನ್ನು ನಿಷೇಧಿಸುವು ದರಲ್ಲಿ ಯಾವ ಅರ್ಥವೂ ಇಲ್ಲವೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ದಕ್ಷಿಣ ಕನ್ನಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಬೌದ್ಧರು ವಾಸವಾಗಿಲ್ಲದಿರುವಾಗ ಇಲ್ಲಿ ಬುದ್ಧ ಜಯಂತಿಯಂದು ಮಾಂಸಮಾರಾಟ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು ಸೂಪರ್ ಮಾರುಕಟ್ಟೆ ವ್ಯವಸ್ಥೆಗಳಲ್ಲಿ ಹಾಗೂ ಮನೆಗಳಲ್ಲಿ ಅಂಗಡಿ ಹೋಟೆಲ್ಗಳಲ್ಲಿ ಶೀತಲೀಕರಣದ ವ್ಯವಸ್ಥೆಯಿದೆ. ಜೊತೆಗೆ ನಗರದ ಜನತೆ ಊಟಕ್ಕಾಗಿ ಹೊಟೇಲ್ಗಳನ್ನು ಆಶ್ರಯಿಸುವವರೇ ಹೆಚ್ಚು ಮಂದಿ. ಮಾಂಸ ಮಾರಾಟದ ನಿಷೇಧ ಮಾಡುವುದರಿಂದ ಕಷ್ಟಕರವಾಗುತ್ತದೆ.
ಅಲ್ಲದೆ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಆಹಾರದ ಹಕ್ಕು ಸಾಂವಿಧಾನಿಕ ಎಂದು ಮನಗಂಡಿರುವಾಗ ಮಾಂಸ ಮಾರಾಟ ನಿಷೇಧಿಸುವುದು ಅಸಂವಿಧಾನಿಕವೆಂದು ಪರಿಗಣಿಸಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.