ಕನ್ನಡ ವಾರ್ತೆಗಳು

ಉಡುಪಿ ಪರ್ಯಾಯಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ, ನಾಡಹಬ್ಬದಂತೆ ಆಚರಿಸಲು ಸಕಲ ಸಿದ್ಧತೆ; ಸಚಿವ ಸೊರಕೆ

Pinterest LinkedIn Tumblr

ಉಡುಪಿ: ವೈಶಿಷ್ಟ್ಯಪೂರ್ಣ ಪರ್ಯಾಯ ಶ್ರೀ ವಿಶ್ವೇಶತೀರ್ಥರ ಪೇಜಾವರ ಶ್ರೀಗಳ ಐದನೇ ಪರ್ಯಾಯೋತ್ಸವಕ್ಕೆ ಸಿದ್ಧತೆಗಳು ಅಂತಿಮಗೊಂಡಿದ್ದು, ಸರ್ಕಾರದ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ಯಶಸ್ಸಿಗೆ ಎಲ್ಲ ಸಹಕಾರ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಉಡುಪಿ ಮಠದಲ್ಲಿ ಆಯೋಜಿಸಲಾದ ಪರ್ಯಾಯ ಪೊರ್ವಭಾವಿ ಸಭೆಯ ಅಂತಿಮ ಹಂತದ ಸಿದ್ಧತೆಯ ಸಂಬಂಧ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಈಗಾಗಲೇ ಜಿಲ್ಲಾಡಳಿತ ಮಹಾಮಸ್ತಕಾಭಿಷೇಕದಂತಹ ಕಾರ್ಯಕ್ರಮದ ವೇಳೆ ಮೂಲಸೌಕರ್ಯಗಳನ್ನು ಯಾವುದೇ ಲೋಪವಾಗದಂತೆ ನಿರ್ವಹಿಸಿದ ನಿದರ್ಶನಗಳಿದ್ದು, ಪರ್ಯಾಯವು ವ್ಯವಸ್ಥಿತವಾಗಿ ನಡೆಯಲಿದೆ ಎಂದು ಸಚಿವರು ನುಡಿದರು.

Udp_Paryaya_Programme (1) Udp_Paryaya_Programme (2)

ಪರ್ಯಾಯಕ್ಕೆ ಸಿ.ಎಂ.ಗೆ ಆಹ್ವಾನ: ಪರ್ಯಾಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಿ ಬೆಂಗಳೂರಿನಿಂದ ಉಡುಪಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸುವ ಬಗ್ಗೆ ಮನವಿ ಮಾಡಲಾಗುವುದು. ಜನವರಿ ಐದರಂದು ಸ್ಥಳೀಯ ಶಾಸಕ ಪ್ರಮೋದ್ ಮಧ್ವರಾಜ್ ಅವರೊಂದಿಗೆ ತೆರಳಿ ಮುಖ್ಯಮಂತ್ರಿಗಳನ್ನು ಪರ್ಯಾಯಕ್ಕೆ ಆಹ್ವಾನಿಸಲಾಗುವುದು. ಚಾರಿತ್ರಿಕವಾದ ಪೇಜಾವರ ಶ್ರೀಗಳ ಪರ್ಯಾಯವನ್ನು ನಾಡಹಬ್ಬದಂತೆಯೇ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಡಾ ವಿಶಾಲ್ ಆರ್. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಚಾರಿ ಮತ್ತು ಸುರಕ್ಷೆಯ ಹೊಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ವಹಿಸಿಕೊಂಡಿದ್ದು, ಮೈಕ್ರೋಪ್ಲಾನ್ ತಯಾರಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲವಾಗುವಂತೆ ಉಡುಪಿ ಉತ್ಸವವನ್ನು ಜನವರಿ 16ರ ಸಂಜೆಯಿಂದ 19ರ ಸಂಜೆಯವರೆಗೆ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಂಚಾರಿ ವ್ಯವಸ್ಥೆಯಿಂದ ಸ್ಥಳೀಯರಿಗೆ ತೊಂದರೆಯಾಗದಂತೆಯೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ ಎಂದರು.

ಪೌರಾಯುಕ್ತರಿಗೆ ಕುಡಿಯುವ ನೀರು, ಸ್ವಚ್ಛತೆಯ ಸಂಬಂಧ ಸಮಗ್ರ ಕ್ರಮಕ್ಕಾಗಿ ಮಾರ್ಗದರ್ಶನ ಮತ್ತು ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಶೌಚಾಲಯ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು, ಮೊಬೈಲ್ ಮತ್ತು ಹೊಸ 26 ಶೌಚಾಲಯವನ್ನು ನಿರ್ಮಿತಿ ಸಂಸ್ಥೆ ನಿರ್ಮಿಸಿದೆ. ಆರೋಗ್ಯ ಇಲಾಖೆಯಿಂದ ಪುತ್ತಿಗೆ ಮಠ, ರಾಜಾಂಗಣ ಹಾಗೂ ಜೋಡುಕಟ್ಟೆಯಲ್ಲಿ ಆರೋಗ್ಯ ಘಟಕ ಹಾಕಲಾಗುವುದು. ಜಿಲ್ಲಾ ಪಂಚಾಯಿತಿ ವತಿಯಿಂದ ಬೋರ್ಡ್ ಹೈಸ್ಕೂಲ್‌ನಲ್ಲಿ ಮಳಿಗೆಗಳನ್ನು ನಿರ್ಮಿಸಲಾಗುವುದು.

ಪೊಲೀಸ್ ಇಲಾಖೆ ಕಂಟ್ರೋಲ್ ರೂಂ ಸ್ಥಾಪಿಸಿ ಹೆಚ್ಚಿನ ಪ್ರಚಾರ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮೆರವಣಿಗೆ ವೇಳೆ ಟ್ಯಾಬ್ಲೊ ಬರುವ ದಾರಿಯಲ್ಲಿ ಕೇಬಲ್‌ಗಳಿಂದ ಅಡಚಣೆಯಾಗದಂತೆ ಮುನ್ನಾ ದಿನವೇ ಪೋಲ್‌ಗಳನ್ನು ಬಳಸಿ 15 ಮೀಟರ್‌ನಷ್ಟು ಎತ್ತರವಿರುವ ಟ್ಯಾಬ್ಲೊಗೆ ತಡೆ ಉಂಟು ಮಾಡುವ ಕೇಬಲ್ ಗಳನ್ನು ಪತ್ತೆ ಮಾಡಿ ಎಂದು ಟ್ರಾಫಿಕ್ ಮತ್ತು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾಹಿತಿ ಫಲಕಗಳನ್ನು ಪ್ರದರ್ಶಿಸುವಂತೆ, ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತೆ ಮಠದ ಸಮಿತಿಯವರು ವಿನಂತಿಸಿದರು. ಹೊರೆಕಾಣಿಕೆ ಮಾರ್ಗ ಹಾಗೂ ಊಟದ ವ್ಯವಸ್ಥೆ ಹಾಗೂ ವಿ‌ಐಪಿಗಳು ಆಗಮಿಸುವ ಮಾಹಿತಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿಗದಿತ ಸಮಯ ಮಿತಿಯೊಳಗೆ ನೀಡಲಾಗುವುದು ಎಂದು ಸಮಿತಿಯವರು ಹೇಳಿದರು.

ಜನವರಿ 4 ರಂದು ಸ್ವಾಮೀಜಿಗಳ ಪುರ ಪ್ರವೇಶದ ನಂತರ ರಥಬೀದಿಯಲ್ಲಿ ನಡೆಯುವ ಪೌರ ಸನ್ಮಾನ ಕಾಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಡಾ.ಜೆರಾಲ್ಡ್ ಲೋಬೋ ರವರು ಸ್ವಾಮೀಜಿರವರನ್ನು ಸನ್ಮಾನಿಸಲಿದ್ದಾರೆ ಎಂದು ರತ್ನಕುಮಾರ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಜಿ.ಪಂ. ಸಿ‌ಇ‌ಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮಾಜಿ ಶಾಸಕ ರಘುಪತಿ ಭಟ್, ಸಭಾಪತಿ, ಪರ್ಯಾಯ ಉತ್ಸವ ಸಮಿತಿಯ ಭುವನೇಂದ್ರ ಕಿದಿಯೂರು, ಪ್ರದಾನಕಾರ್ಯದರ್ಶಿ ಗಣೇಶ, ಮಠದ ದಿವಾನ ರಘುರಾಮ ಆಚಾರ್ಯ ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಗಣೇಶ್ ಮಾತನಾಡಿದರು. ರತ್ನ ಕುಮಾರ್ ಸ್ವಾಗತಿಸಿದರು.

Write A Comment