
ಬಂಟ್ವಾಳ, ಡಿ.23: ಇಲ್ಲಿನ ಕೈಕುಂಜೆ 13ನೇ ವಾರ್ಡಿನ ಪರಿಸರದ ಸುಮಾರು 160ಕ್ಕೂ ಹೆಚ್ಚಿನ ಮನೆಗಳಿಗೆ 15 ದಿವಸಗಳಿಂದ ನೀರಿಲ್ಲದೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕುಂಜೆ, ನಂದರಬೆಟ್ಟು, ಅಲೆತ್ತೂರು ಪರಿಸರದ ಸುಮಾರು 160 ಕ್ಕೂ ಹೆಚ್ಚು ಮನೆಗಳಿಗೆ15ದಿನಗಳಿಂದ ಪುರಸಭೆ ನೀರು ಪೂರೈಸದೆ ಸತಾಯಿಸುತ್ತಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ಸ್ಥಳಿಯ ಪುರಸಭೆ ಸದಸ್ಯೆ ಸುಗುಣಾ ಕಿಣಿ ಮನವಿ ನೀಡಿದರೂ ಕಿಮ್ಮತ್ತೂ ಬೆಲೆ ನೀಡಿಲ್ಲ.
15 ದಿನಗಳಿಂದ ಸುಗಣಾ ಕಿಣಿ ಖಾಸಗಿ ಟ್ಯಾಂಕರ್ಗಳ ಮೂಲಕ ನೀರನ್ನು ಒದಗಿಸುತ್ತಿದ್ದಾರೆ. ಆದರೂ ಪುರಸಭೆ ನೀರು ನೀಡುವ ಬಗ್ಗೆ ಈವರೆಗೆ ತಲೆಕೆಡಿಕೊಂಡಿಲ್ಲ. ಅಲೆತ್ತೂರು ಪರಿಸರದಲ್ಲಿ ಹೊಸ ಕೊಳವೆ ಬಾವಿಯನ್ನು ತೆರೆಯುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ ನೀರು ಕಡಿಮೆಯಾಗಿ ಪಂಪ್ ಹೊತ್ತಿ ಹೋದ ಮೇಲೂ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಇಲ್ಲಿನ ಅಧಿಕಾರಿಗಳು ಮತ್ತು ಆಡಳಿತ ಪಕ್ಷ ರಾಜಕೀಯ ಬಿಟ್ಟು, ತಕ್ಷಣವೇ 13ನೇ ವಾರ್ಡಿನ ಜನರಿಗೆ ಕುಡಿಯುವ ನೀರು ಕೊಡದಿದ್ದರೆ ಇಲ್ಲಿನ ಜನರನ್ನು ಸೇರಿಸಿಕೊಂಡು ಪುರಸಭೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ಸುಗುಣಾ ಕಿಣಿ ಎಚ್ಚರಿಕೆ ನೀಡಿದ್ದಾರೆ.