ಮ೦ಗಳೂರು ಡಿ.04: ತಮಿಳುನಾಡು ರಾಜ್ಯದ ಚೆನ್ನೈಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಲಪ್ರಳಯ ಉದ್ಭವವಾಗಿದ್ದು ಸಂತ್ರಸ್ಥರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲವು ವ್ಯಕ್ತಿಗಳು ಹಾಗೂ ಕೆಲವು ಸಂಘಟನೆಗಳು ದೇಣಿಗೆ/ನಿಧಿ ಸಂಗ್ರಹಿಸಲು ಮುಂದೆ ಬಂದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ. ದೇಣಿಗೆ ಸಂಗ್ರಹಿಸುವ ಬಗ್ಗೆ ಸರಕಾರದಿಂದ ಅಥವಾ ಜಿಲ್ಲಾಡಳಿತದಿಂದ ಈವರೆಗೆ ಯಾವುದೇ ನಿರ್ದೇಶನವನ್ನು ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ನೀಡಿರುವುದಿಲ್ಲ.
ಇತರ ರಾಜ್ಯಗಳಿಂದ ಯಾವುದೇ ದೇಣಿಗೆ ಅವಶ್ಯಕತೆ ಇಲ್ಲ ಎಂದು ತಮಿಳುನಾಡು ಸರಕಾರ ಈಗಾಗಲೇ ಹೇಳಿರುವುದರಿಂದ ಜಿಲ್ಲಾಡಳಿತವು ಯಾವುದೇ ಆರ್ಥಿಕ ಅಥವಾ ಸಾಮಾಗ್ರಿಗಳ ದೇಣಿಗೆ ಸಂಗ್ರಹಿಸುತ್ತಿಲ್ಲ.
ಯಾವುದೇ ಸಂಘಟನೆಗಳಿಗೆ ಅಥವಾ ಸಂಘಸಂಸ್ಥೆಗಳಿಗೆ ಸಾರ್ವಜನಿಕರು ಯಾವುದೇ ಧನ ಸಹಾಯ ಅಥವಾ ದೇಣಿಗೆಗಳನ್ನು ನೀಡದಿರಲು ಸೂಚಿಸಲಾಗಿದೆ. ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ದೇಣಿಗೆ ಸಂಗ್ರಹಿಸುತ್ತಿರುವುದು ಕಂಡುಬಂದಲ್ಲಿ ಜಿಲ್ಲಾಡಳಿತದ ಗಮನಕ್ಕೆ ೧೦೭೭ (ಉಚಿತ ಕರೆ) ಮೂಲಕ ತರಲು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ತಮಿಳುನಾಡಿನಲ್ಲಿ ಜಲಪ್ರಳಯದಿಂದ ಕರ್ನಾಟಕ ನಿವಾಸಿಗಳು ಕಾಣೆಯಾಗಿದ್ದಲ್ಲಿ ಅಥವಾ ರಕ್ಷಣೆ ಮಾಡಬೇಕಾದವರ ವಿವರವನ್ನು ಕರ್ನಾಟಕ ರಾಜ್ಯ ತುರ್ತು ನಿವಾರಕ ಕೇಂದ್ರಕ್ಕೆ(ಬೆಂಗಳೂರು) ದೂರವಾಣಿ- 1070(ಉಚಿತ) ಅಥವಾ 080-22340676 ಮುಖಾಂತರ ತಿಳಿಸಿದ್ದಲ್ಲಿ ಈ ವಿವರವನ್ನು ತಮಿಳುನಾಡು ರಾಜ್ಯದ ಅಧಿಕಾರಿಗಳಿಗೆ ಕಳುಹಿಸಿ, ತೊಂದರೆಗೊಳಗಾದವರನ್ನು ರಕ್ಷಿಲಸು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
