ನವದೆಹಲಿ, ಅ.11-ಗೋಮಾಂಸ ತಿನ್ನುವುದು, ಗೋಹತ್ಯೆ ಮಹಾಪಾಪ ಎಂದು ಒಂದು ಪಕ್ಷ ಹೇಳಿದರೆ, ಇನ್ನೊಂದು ಪಕ್ಷ ಗೋಮಾಂಸ ತಿಂದರೆ ತಪ್ಪಿಲ್ಲ ಎನ್ನುತ್ತಾರೆ. ಇದು ಭಾರೀ ವಿವಾದವಾಗಿ ಹಿಂಸಾಚಾರಕ್ಕೂ ತಿರುಗಿದೆ. ದೇಶಾದ್ಯಂತ ಭಾರೀ ವಿವಾದವೂ ಆಗಿದೆ.
ಆದರೆ ಇದೇ ವೇಳೆ ಗೋಮಾಂಸ ತಿನ್ನುವುದು ಪರಿಸರದ ದೃಷ್ಟಿಯಿಂದಲೂ ಸಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಹೌದು, ವಿಶ್ವಸಂಸ್ಥೆಯ ಪರಿಸರದ ಕಾರ್ಯಕ್ರಮದ (ಯುಎನ್ಇಐ) ಪ್ರಕಾರ ಗೋಮಾಂಸ ಭಕ್ಷಣೆ ವಾತಾವರಣ ವಿರೋಧಿ. ಗೋಮಾಂಸದ ಪ್ರತಿ ಗ್ರಾಂ.ನಲ್ಲೂ ಅತಿ ಹೆಚ್ಚಿನ ಮತ್ತು ತೀವ್ರತರವಾದ ಶಕ್ತಿ ಇದೆ. ಗೋಮಾಂಸದ ಒಂದು ಗ್ರಾಂನಿಂದ ಸುಮಾರು ಮೂರು ಕೆ.ಜಿಯಷ್ಟು ಕಾರ್ಬನ್ ವಾತಾವರಣದಲ್ಲಿ ಸೇರುವುದನ್ನು ತಡೆಯುತ್ತದಂತೆ. ಆದರೆ ದುರದೃಷ್ಟವಶಾತ್ ಇಂದಿನ ದಿನಗಳಲ್ಲಿ ಪ್ರಾಣಿಗಳು (ಗೋವು ಸೇರಿ) ಭಾರೀ ಸಂಖ್ಯೆಯಲ್ಲಿ ಆಹಾರಕ್ಕೆ ಬಳಕೆಯಾಗುತ್ತಿವೆ.
ಆದರೆ ಇದರ ಪರಿಣಾಮ ಪರಿಸರದ ಮೇಲಾಗುತ್ತದೆ. ಸಾಮಾನ್ಯವಾಗಿ ಮಾಂಸ ತಿನ್ನುವವರು, ನಿರ್ದಿಷ್ಟವಾಗಿ ಗೋಮಾಂಸ ತಿನ್ನುವವರು ಪರೋಕ್ಷವಾಗಿ ನಿಸರ್ಗದ ವೈರಿಗಳಾಗುತ್ತಾರೆ. ವಿಶ್ವದಲ್ಲಿ ಗೋಮಾಂಸ ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬುದು ಎಷ್ಟು ಅಚ್ಚರಿಯೋ, ಇದರಿಂದ ವಾತಾವರಣ ನಾಶವಾ ಗುತ್ತದೆಂಬುದೂ ಅಷ್ಟೇ ಅಚ್ಚರಿ. ವಾತಾವರಣ ಬದಲಾವಣೆಯಲ್ಲಿ ಇದು ಹೆಚ್ಚಿನ ಪಾತ್ರ ವಹಿಸುತ್ತದೆ. ಮಾಂಸ ಉತ್ಪಾದನಾ ಉದ್ಯಮಕ್ಕೆ ಗೋಮಾಂಸ ಒಂದು ಸೈತಾನ್ (ಭೂತ) ಇದ್ದಂತೆ ಎಂದೂ ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಒಂದು ಮಾತನ್ನು ಗಮನಿಸಬೇಕು. ದೆಹಲಿ ಸಮೀಪದ ದಾದ್ರಿ ಎಂಬ ಗ್ರಾಮದಲ್ಲಿ ಗೋಮಾಂಸ ತಿಂದ ಎಂದು ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಿದ ಘಟನೆ ಯಾವುದೇ ಕಾರಣಕ್ಕೂ ಸಮರ್ಥನಾಯೋಗ್ಯವಲ್ಲ ಎನ್ನುತ್ತದೆ ರೋಮ್ನಲ್ಲಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್ಎಒ).
ಕಾರುಗಳ ಬಳಕೆ ತಗ್ಗಿಸುವುದಕ್ಕಿಂತಲೂ, ಪರಿಸರದಲ್ಲಿ ಕಾರ್ಬನ್ ಸೇರುವುದನ್ನು ತಡೆಯಲು ಜಾಗತಿಕವಾಗಿ ಗೋಮಾಂಸ ಭಕ್ಷಣೆ ಕಡಿಮೆ ಮಾಡುವುದು ಉಪಯುಕ್ತ ಎಂದಿದೆ ಎಫ್ಎಒ ವರದಿ. ಸಾರಿಗೆಯಿಂದಲೇ ಪರಿಸರ ಕಲುಷಿತವಾಗುತ್ತಿದೆ ಎಂಬ ವಾದಕ್ಕಿಂತ ಗೋಮಾಂಸ ಬಳಕೆ ಪರಿಣಾಮ ಬೀರುತ್ತಿದೆ. ಸಾರಿಗೆಯಿಂದ ಜಾಗತಿಕ ಹಸಿರು ಮನೆಗೆ ಶೇ.15ರಷ್ಟು ಧಕ್ಕೆಯುಂಟಾದರೆ, ಗೋಮಾಂಸ ಉತ್ಪಾದನೆಯಿಂದ ಶೇ.18ರಷ್ಟು ಹಾನಿಯಾಗುತ್ತದೆ. ಹಾಗಾಗಿ ಜಾಗತಿಕ ಹಸಿರು ಮನೆಯ ಉಳಿವಿಗೆ ಪಶು ಸಂಗೋಪನೆಯೇ ಪ್ರಮುಖ ಪರಿಹಾರ ಎನ್ನುತ್ತಾರೆ ಎಫ್ಎಒ. ಅತಿಯಾದ ಪ್ರಾಣಿಗಳ ಹತ್ಯೆ, ಮಾಂಸ ಸೇವನೆ ವಿಶ್ವಕ್ಕೆ ಮಾರಕವಾಗಲಿದ್ದು, ಜನ ಮಾಂಸ ತಿನ್ನುವುದನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಆಂದೋಲನ ನಡೆಯಬೇಕು, ಕಡೆಯ ಪಕ್ಷ ವಿಶ್ವದಾದ್ಯಂತ ಜನ ವಾರದಲ್ಲಿ ಒಂದು ದಿನವಾದರೂ ಮಾಂಸ ಸೇವನೆ ಬಿಡಬೇಕು ಎನ್ನುತ್ತಾರೆ ಫ್ರಾನ್ಸ್ನ ವಿಶ್ವಸಂಸ್ಥೆ ರಾಯಭಾರಿ ಲಾರೆನ್ಸ್ ಟುಬಿಯಾನಾ.