ರಾಷ್ಟ್ರೀಯ

ಗೋಮಾಂಸ ಮಾರಾಟದ ಗಾಳಿ ಸುದ್ದಿ; ಉತ್ತರ ಪ್ರದೇಶದ ಮೈನ್ ಪುರಿ ಜಿಲ್ಲೆಯಲ್ಲಿ ಗಲಭೆ: ಅನೇಕ ಅಂಗಡಿ, ಎರಡು ಪೊಲೀಸ್ ವಾಹನಗಳಿಗೆ ಬೆಂಕಿ – 21 ಮಂದಿ ಬಂಧನ

Pinterest LinkedIn Tumblr

up

ಮೈನ್ ಪುರಿ: ಉತ್ತರ ಪ್ರದೇಶದ ಮೈನ್ ಪುರಿ ಜಿಲ್ಲೆಯಲ್ಲಿ ಉಂಟಾದ ಗಲಭೆಗೆ ಸಂಬಂಧಪಟ್ಟಂತೆ 21 ಮಂದಿಯನ್ನು ಬಂಧಿಸಲಾಗಿದೆ.

ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಗಾಳಿ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪೊಂದು ಗಲಾಟೆಯೆಬ್ಬಿಸಿತ್ತು, ಈ ಸಂದರ್ಭದಲ್ಲಿ ಗದ್ದಲ ತಾರಕಕ್ಕೇರಿ ಅನೇಕ ಅಂಗಡಿಗಳು ಮತ್ತು ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಮೈನ್ ಪುರಿ ಜಿಲ್ಲೆ ಇರುವುದು ರಾಜಧಾನಿ ಲಕ್ನೋದಿಂದ 200 ಕಿಮೀ ಮತ್ತು ಆಗ್ರಾದಿಂದ 100 ಕಿ.ಮೀ ದೂರದಲ್ಲಿ. ಇಲ್ಲಿನ ಗ್ರಾಮವೊಂದರ ಮೈದಾನದಲ್ಲಿ ಪ್ರಾಣಿಯ ಮೃತದೇಹವೊಂದರ ತುಂಡೊಂದು ಕಂಡದ್ದರಿಂದ ಉದ್ರಿಕ್ತ ಗುಂಪೊಂದು ಗಲಾಟೆ ಆರಂಭಿಸಿತು. ಆದರೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅದು ಹಸುವಿನದ್ದಲ್ಲ ಎಂದು ಗೊತ್ತಾಯಿತು. ನಂತರ ಪರಿಸ್ಥಿತಿ ಹತೋಟಿಗೆ ಬಂತು ಎಂದು ಮೈನ್ ಪುರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗಲಭೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಆ ಭಾಗದ ಉಪ ಪೊಲೀಸ್ ಮಹಾ ನಿರ್ದೇಶಕರನ್ನು ವಜಾ ಮಾಡಲಾಗಿದೆ. ಎರಡು ವಾರಗಳ ಹಿಂದೆ ಉತ್ತರ ಪ್ರದೇಶದ ದಾದ್ರಿ ಎಂಬಲ್ಲಿ ಮೊಹಮ್ಮದ್ ಅಕ್ಲಾಕ್ ಎಂಬ ಮುಸಲ್ಮಾನ ವ್ಯಕ್ತಿಯೊಬ್ಬ ಕರುವನ್ನು ಕೊಂದು ಮಾಂಸವನ್ನು ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದನು ಎಂಬ ಗಾಳಿಸುದ್ದಿ ಕೇಳಿ ಉದ್ರಿಕ್ತ ಗುಂಪು ಆತನನ್ನು ಮತ್ತು ಅವನ ಮಗನನ್ನು ಮನೆಯಿಂದ ಹೊರಗೆ ಎಳೆದುತಂದು ಇಟ್ಟಿಗೆಯಿಂದ ಹೊಡೆದಿದ್ದರು. ಘಟನೆಯಲ್ಲಿ ಇಕ್ಲಾಕ್ ಸಾವಿಗೀಡಾದರೆ ದನಿಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆ ಇನ್ನೂ ಹಚ್ಚಹಸಿರಾಗಿರುವಾಗಲೇ ಇದೀಗ ಮತ್ತೊಂದು ಘಟನೆ ನಡೆದಿರುವುದು ಉತ್ತರ ಪ್ರದೇಶ ರಾಜ್ಯದ ಜನತೆಯಲ್ಲಿ ಸುರಕ್ಷತೆ ಬಗ್ಗೆ ಆತಂಕಕ್ಕೀಡುಮಾಡಿದೆ.

Write A Comment