ನವದೆಹಲಿ: ಆರುಷಿ ತಲ್ವಾರ್ ಪೋಷಕರು ಅಮಾಯಕರು ಎಂದು ತಮಗನ್ನಿಸುತ್ತದೆ ಎಂದು ಆರುಷಿ ಹತ್ಯಾ ಪ್ರಕರಣದ ತನಿಖಾಧಿಕಾರಿ ಸಿಬಿಐನ ಜಂಟಿ ನಿರ್ದೇಶಕ ಅರುಣ್ ಕುಮಾರ್ ಅವರು ಹೇಳಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.
ಮರ್ಯಾದಾ ಹತ್ಯೆ ಎಂಬ ಶಂಕೆಯ ಮೇರೆಗೆ ದೇಶಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಆರುಷಿ ತಲ್ವಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಅವರು, ಆರುಷಿ ಪೋಷಕರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ಮುಗ್ಧರೆಂದು ತಮಗನ್ನಿಸುತ್ತಿದೆ ಎಂದು ಹೇಳಿದ್ದಾರೆ ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.
“ರಾಜೇಶ್ ಮತ್ತು ನೂಪುರ್ ತಲ್ವಾರ್ ಅಮಾಯಕರು ಎಂದು ನನಗನ್ನಿಸಲು ಸಾಕಷ್ಟು ಕಾರಣಗಳಿವೆ. ಅದರಲ್ಲಿ ಪ್ರಪ್ರಥಮವಾಗಿ ಹೇಮರಾಜ್ ದೇಹ ಮೊದಲ ದಿನವೇ ದೊರೆಯುತ್ತದೆ ಎಂದು ಕೊಲೆಗಾರರು ಎಣಿಸಿರಲು ಸಾಧ್ಯವೇ ಇಲ್ಲ. ಆರುಷಿ ಮೃತ ದೇಹ ದೊರೆತ ಮಾರನೆಯ ದಿನ ಅದೇ ಕಟ್ಟಡದ ಮೇಲ್ಛಾವಣಿಯಲ್ಲಿ ಹೇಮರಾಜ್ ನ ಮೃತದೇಹ ನೊಯ್ಡಾ ಪೊಲೀಸರಿಗೆ ಪತ್ತೆಯಾಗಿರುತ್ತದೆ. ಘಟನಾ ಸ್ಥಳದಲ್ಲಿ ವಿಧಿವಿಜ್ಞಾನ ತಜ್ಞರು ಮಾದರಿಗಳನ್ನು ಸಂಗ್ರಹಿಸಲಿಲ್ಲ. ಒಂದು ವೇಳೆ ಅವರು ಆ ಕೆಲಸ ಮಾಡಿದ್ದರೆ, ಪ್ರಕರಣದ ತನಿಖೆ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತಿತ್ತು ಎಂದು ಅರುಣ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೈ ಪ್ರೊಫೈಲ್ ಪ್ರಕರಣವಾದ ಆರುಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಯಾವೊಬ್ಬ ತನಿಖಾಧಿಕಾರಿ ಕೂಡ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರಲಿಲ್ಲ. ಪ್ರಮುಖವಾಗಿ ಸಿಬಿಐ ಅಧಿಕಾರಿಗಳು ಪ್ರಕರಣದ ತನಿಖಾ ಅಂಶಗಳನ್ನು ಮಾಧ್ಯಮಗಳಿಂದ ರಹಸ್ಯವಾಗಿಯೇ ಇಟ್ಟಿದ್ದರು. ಇದೇ ಮೊದಲ ಬಾರಿಗೆ ಜಂಟಿ ನಿರ್ದೇಶಕ ಅರುಣ್ ಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
2008ರಲ್ಲಿ ನಡೆದಿದ್ದ ಈ ಪ್ರಕರಣ ಇದೀಗ ಬಾಲಿವುಡ್ ನಲ್ಲಿ ಚಿತ್ರವಾಗುತ್ತಿದ್ದು, ಅರುಣ್ ಕುಮಾರ್ ಅವರ ಪಾತ್ರದಲ್ಲಿ ನಟ ಇರ್ಫಾನ್ ಖಾನ್ ಅವರು ಅಭಿನಯಿಸುತ್ತಿದ್ದಾರೆ. ಆರುಷಿ ಹತ್ಯಾ ಪ್ರಕರಣ ಸಂಬಂಧ ಬಂಧಿತರಾಗಿರುವ ಪೋಷಕರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ಪ್ರಸ್ತುತ ದೆಹಲಿಯಲ್ಲಿರುವ ದಸ್ನಾ ಕಾರಾಗೃಹದಲ್ಲಿದ್ದಾರೆ.