ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸಲಿರುವ ಬಹುನಿರೀಕ್ಷಿತ 150ನೇ ಚಿತ್ರ ಯಾವುದೆಂಬ ಪ್ರಶ್ನೆಗೆ ಶೀಘ್ರದಲ್ಲೇ ತೆರೆಬೀಳಲಿದೆ.
ಕಾಲಿವುಡ್’ನಲ್ಲಿ ಸೂಪರ್-ಡೂಪರ್ ಹಿಟ್ ಆಗಿದ್ದ ‘ಕತ್ತಿ’ ಚಿತ್ರದ ರಿಮೇಕ್’ನಲ್ಲಿ ಚಿರು ನಾಯಕರಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್’ನಿಂದ ಕೇಳಿ ಬಂದಿದೆ.
ರೈತರ ಸಂಕಷ್ಟವನ್ನು ಹಾಗೂ ಕಾರ್ಪೊರೇಟ್ ಕಂಪನಿಗಳ ದಬ್ಬಾಳಿಕೆಯನ್ನು ತಿಳಿಸಿದ್ದ ಎ.ಆರ್ ಮುರುಗದಾಸ್ ನಿರ್ದೇಶನದ ತಮಿಳು ಚಿತ್ರ ‘ಕತ್ತಿ’ ಬಾಕ್ಸಾಫೀಸ್’ನಲ್ಲಿ ಲೂಟಿ ಮಾಡಿತ್ತು. ಇದರ ರಿಮೇಕ್’ನಲ್ಲಿ ಮೆಗಾಸ್ಟಾರ್ ನಾಯಕನಾಗಿ ಅಭಿನಯಿಸಲು ಚಿರು ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ.
ಈ 150ನೇ ಚಿತ್ರಕ್ಕೆ ಪುತ್ರ ನಟ ರಾಮ್ ಚರಣ್ ಬಂಡವಾಳ ಹೂಡಲಿದ್ದಾರೆ. ತಮಿಳಿನ ‘ಕತ್ತಿ’ಯಲ್ಲಿ ಕೆಲ ಬದಲಾವಣೆಯನ್ನು ಮಾಡಿ ಚಿರು ಮ್ಯಾನರಿಸಂಗೆ ಹೊಂದುವಂತೆ ಚಿತ್ರಕಥೆ ರೂಪಿಸಲು ಮೂಲ ಚಿತ್ರದ ನಿರ್ದೇಶಕ ಮುರುಗದಾಸ್ ಸಹಾಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಚಿತ್ರದ ನಿರ್ದೇಶನಕ್ಕೆ ವಿ.ವಿ ವಿನಾಯಕ್’ರ ಹೆಸರು ಕೇಳಿ ಬರುತ್ತಿದ್ದು, ಇವರು ಮೆಗಾಸ್ಟಾರ್’ರನ್ನು ನಾಯಕರಾಗಿಸಿ ಮುರುಗದಾಸ್ ನಿರ್ದೇಶನದ ತಮಿಳಿನ ರಾಮಣ ಚಿತ್ರವನ್ನು ತೆಲುಗಿನಲ್ಲಿ ಟಾಗೋರ್ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿ ಯಶಕಂಡಿದ್ದರು.
ಈ ಹಿಂದೆ ಪೂರಿ ಜಗನ್ನಾಥ್ ನಿರ್ದೇಶಿಸಲಿರುವ ‘ಆಟೋಜಾನಿ’ ಚಿತ್ರವು ಚಿರಂಜೀವಿಯವರ 150ನೇ ಚಿತ್ರವೆಂದು ಹೇಳಲಾಗಿತ್ತು.
ಬಿಡುಗಡೆಗೆ ರೆಡಿಯಾಗಿರುವ ಬ್ರೂಸ್ ಲಿ ಚಿತ್ರದಲ್ಲಿ ಪುತ್ರನೊಂದಿಗೆ ಸಣ್ಣ ಪಾತ್ರದಲ್ಲಿ ಅಭಿನಯಿಸಿರುವ ಚಿರು ನಾಯಕರಾಗಿ ಕಾಣಿಸಲಿರುವ 150ನೇ ಚಿತ್ರವನ್ನು ಮೆಗಾಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
-ಕಪ್ಪು ಮೂಗುತ್ತಿ
-ಉದಯವಾಣಿ