ಮಂಗಳೂರು / ಕಟೀಲು, ಆ.29: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದ ಸರಸ್ವತಿ ಸದನ ಸಭಾ ಮಂಟಪದಲ್ಲಿ ಗೋಪಾಲಕೃಷ್ಣ ಅಸ್ರಣ್ಣ ವೇದಿಕೆಯಲ್ಲಿ 3 ದಿನಗಳ ಕಾಲ ನಡೆಯಲಿರುವ 20ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿಯಾಗಿ ಶುಕ್ರವಾರ ಬೆಳಗ್ಗೆ ನಡೆದ ಭುವನೇಶ್ವರಿಯ ಮೆರವಣಿಗೆಯಲ್ಲಿ ವಿವಿಧ ಕಲಾಪ್ರಕಾರಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೂರ್ಣ ಕುಂಭ ಹಿಡಿದ ಮಹಿಳೆಯರ ಸಡಗರದೊಂದಿಗೆ ಜರಗಿತು.
ಗಿಡಿಗೆರೆಯ ಶ್ರೀಮಹಾಕಾಳಿ ಬ್ರಹ್ಮಮುಗೇರ ದೈವಸ್ಥಾನದಲ್ಲಿ ಜಿಪಂ ಸದಸ್ಯ ಈಶ್ವರ ಕಟೀಲು ಮೆರವಣಿಗೆಗೆ ಚಾಲನೆ ನೀಡಿದರು. ಕೊಂಡೆಮಾಳ ಗ್ರಾಪಂ ಉಪಾಧ್ಯಕ್ಷ ಕಿರಣ್ಕುಮಾರ್ ಶೆಟ್ಟಿ ಭುವನೇಶ್ವರಿಗೆ ಪುಷ್ಪಾರ್ಚನೆ ಗೈದರು. ಎಕ್ಕಾರು ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿ ಎಕ್ಕಾರು ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.
ಸಮ್ಮೇಳನದ ಅಧ್ಯಕ್ಷ ಡಾ.ಎನ್.ಸುಕುಮಾರ ಗೌಡ, ಸಚಿವ ಕೆ.ಅಭಯಚಂದ್ರ ಜೈನ್, ಕಾರ್ಯಾ ಧ್ಯಕ್ಷ ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರರನ್ನು ಹೊತ್ತ ಪುಷ್ಪಾಲಂಕೃತ ವಿಶೇಷ ವಾಹನದೊಂದಿಗೆ ಬೇತಾಳಗಳು, ಅಂಬಾರಿಟ್ಯಾಬ್ಲೋ, ಭಾರತ ಸೇವಾದಳದ ಹುಲಿ ವೇಷ, ಸ್ಕೌಟ್ಸ್ ಮತ್ತು ಗೈಡ್ಸ್, ಪರಿಸರದ ಮಂಡಳಿಯ ತಾಲೀಮು, ಚಂಡೆಯ ತಾಳ, ಸ್ಯಾಕ್ಸೋಫೋನ್ ವಾದನ, ಭಗವದ್ಗೀತೆ ಮತ್ತು ತಾಳೆಗರಿಯ ಗ್ರಂಥ ಭಂಡಾರವನ್ನು ಹೊತ್ತ ರಥ, ಜ್ಞಾನಪೀಠ ಪುರಸ್ಕೃತ ಮತ್ತು ಸಮ್ಮೇಳನಾಧ್ಯಕ್ಷರ ಕೃತಿಗಳನ್ನು ಹೊತ್ತ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ರಾಷ್ಟ್ರಧ್ವಜರೋಹಣವನ್ನು ಕೊಂಡೆಮೂಲ ಗ್ರಾಪಂಯ ಅಧ್ಯಕ್ಷೆ ಗೀತಾ ಪೂಜಾರ್ತಿ, ಪರಿಷತ್ತಿನ ಧ್ವಜಾ ರೋಹಣವನ್ನು ಕಸಾಪ ಪ್ರದೀಪ್ಕುಮಾರ ಕಲ್ಕೂರ, ಸಮ್ಮೇಳನದ ಧ್ವಜಾರೋಹಣವನ್ನು ಮಂಗಳೂರು ತಾಪಂ ಸದಸ್ಯೆ ಬೇಬಿ ಸುಂದರ ಕೋಟ್ಯಾನ್ ನೆರವೇರಿಸಿದರು.
ಗಿಡಿಗೆರೆ ದೈವಸ್ಥಾನದಿಂದ ಆರಂಭಗೊಂಡ ಮೆರವಣಿಗೆ, ಪದವಿ ಕಾಲೇಜು ರಸ್ತೆ, ಅಜಾರು ರಸ್ತೆ, ಮುಖ್ಯ ಬಸ್ ನಿಲ್ದಾಣ, ದೇವಸ್ಥಾನದ ರಥಬೀದಿಯಾಗಿ ಕಟೀಲು ಪದವಿಪೂರ್ವ ಕಾಲೇಜು ಆವರಣದಲ್ಲಿ ಸಮಾಪನಗೊಂಡಿತು. ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಭುವನಾಭಿರಾಮ ಉಡುಪ, ಜಯರಾಂ ಪೂಂಜಾ, ಸಾಯಿನಾಥ ಶೆಟ್ಟಿ, ದಯಾನಂದ ಕಟೀಲು ಮತ್ತಿತರರು ಉಪಸ್ಥಿತರಿದ್ದರು.








