ಬೆಂಗಳೂರು,ಜು.9- ಲೋಕಾ ಯುಕ್ತದಲ್ಲಿನ ಭ್ರಷ್ಟಾಚಾರ ವಿರೋಧಿಸಿ ವಕೀಲರು ನಡೆಸುತ್ತಿರುವ ಪ್ರತಿಭಟನೆ ಕಾವು ದಿನೇ ದಿನೇ ಹೆಚ್ಚತೊಡಗಿದೆ. ಬೆಂಗಳೂರು ವಕೀಲರ ಸಂಘಗಳ ಒಕ್ಕೂಟದ ವತಿಯಿಂದ ಇಂದು ರಾಜಭವನಕ್ಕೆ ಮುತ್ತಿಗೆ ಹಾಕಿದ ವಕೀಲರು, ಭ್ರಷ್ಟ ಲೋಕಾಯುಕ್ತರನ್ನು ತೊಲಗಿಸಲು ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.
ಭ್ರಷ್ಟಾಚಾರ ನಿಯಂತ್ರಣ ಮಾಡಬೇಕಾದ ಲೋಕಾಯುಕ್ತ ಸಂಸ್ಥೆಯಲ್ಲೇ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ರಾವ್ ಅವರ ಪುತ್ರ ಅಶ್ವಿನ್ರಾವ್ ಅವರು ಲೋಕಾಯುಕ್ತ ಕಚೇರಿಯಲ್ಲಿ ಮತ್ತು ಲೋಕಾಯುಕ್ತ ನಿವಾಸದಲ್ಲಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಈ ಬಗ್ಗೆ ವಕೀಲರು ಕಳೆದ ನಾಲ್ಕೈದು ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ರಾವ್ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿದ್ದಾರೆ. ಈ ಪರಿಸ್ಥಿತಿ ನೋಡಿ ರಾಜ್ಯಪಾಲರು ಕಣ್ಮುಚ್ಚಿ ಕುಳಿತಿದ್ದಾರೆಂದು ವಕೀಲರು ಆರೋಪಿಸಿದರು.
ವಕೀಲರ ಪರಿಷತ್ ಅಧ್ಯಕ್ಷ ರಮೇಶ್ಬಾಬು ಈ ಸಂಜೆಯೊಂದಿಗೆ ಮಾತನಾಡಿ, ಲೋಕಾಯುಕ್ತದಲ್ಲಿ ನಡೆದಿರುವ ಭ್ರಷ್ಟಾಚಾರ ಸಂಬಂಧ ಕ್ರಮ ಕೈಗೊಳ್ಳುವಂತೆ ದೂರು ನೀಡಲು ರಾಜ್ಯಪಾಲರಿಗೆ ಸಮಯ ಕೇಳಿ ನಾಲ್ಕು ದಿನಗಳಾದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಗರಣದಲ್ಲಿ ಅವರಿಗೂ ಕೂಡ ಪಾಲು ಹೋಗಿರಬಹುದೆಂಬ ಶಂಕೆ ಯಿದೆ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯಪಾಲರನ್ನು ಭೇಟಿ ಮಾಡಲು ವಕೀಲರಿಗೆ ಸಮಯ ನೀಡದಿರುವ ಉದಾಹರಣೆಗಳಿಲ್ಲ ಎಂದು ಹೇಳಿದರು.
ಈ ಬಗ್ಗೆ ಪತ್ರ ಬರೆದಿದ್ದೇವೆ, ಈ-ಮೇಲ್ ಕಳುಹಿಸಿದ್ದೇವೆ, ಖುದ್ದು ನಾವೇ ಬಂದರೂ ಅವಕಾಶ ನೀಡಿಲ್ಲ ಎಂದು ಹೇಳಿದರು. ವಕೀಲರ ಸಂಘದ ಒಕ್ಕೂಟದ ಅಧ್ಯಕ್ಷ ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ಭ್ರಷ್ಟ ಲೋಕಾ ಯುಕ್ತರನ್ನು ಕೆಳಗಿಳಿಸುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ. ಅವರು ರಾಜೀನಾಮೆ ನೀಡಬೇಕು ಇಲ್ಲವೆ ತನಿಖೆ ಮುಗಿಯುವವರೆಗೂ ಕಡ್ಡಾಯ ರಜೆ ಮೇಲೆ ತೆರಳಬೇಕು ಎಂದರು. ಲೋಕಾಯುಕ್ತರ ಪುತ್ರನ ಮೇಲಿನ ಪ್ರಕರಣವನ್ನು ತನಿಖೆ ಮಾಡುತ್ತಿರುವ ನ್ಯಾಯಮೂರ್ತಿ ಎನ್.ಕುಮಾರ್ ಅವರು ಪ್ರಕರಣದಿಂದ ಹಿಂದೆ ಸರಿಯಬೇಕೆಂದು ಹೇಳಿದರು.