ಮುಂಬೈ, ಜೂ.6: ಮುಂಬೈ ಮಹಾನಗರದ ಹೊರವಲಯ ಪೊವಾಯ್ನ ಚಾಂದಿವಿಲಿಯಲ್ಲಿ, 21 ಅಂತಸ್ತಿನ ವಸತಿಕಟ್ಟಡವೊಂದರಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 7 ಮಂದಿ ಸಜೀವದಹನಗೊಂಡಿದ್ದಾರೆ ಹಾಗೂ 25ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಪೊವಾಯ್ ಸರೋವರಕ್ಕೆ ಸಮೀಪದಲ್ಲೇ ಇರುವ ‘ಲೇಕ್ ಲ್ಯೂಸೆರ್ನ್’ವಸತಿ ಕಟ್ಟಡದ 14ನೇ ಮಹಡಿಯಲ್ಲಿ ಸಂಜೆ 5:30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಆನಂತರ 15ನೆ ಅಂತಸ್ತಿಗೂ ಹರಡಿತು. ಶಾರ್ಟ್ ಸರ್ಕ್ಯೂನಿಂದಾಗಿಯೇ ಅಗ್ನಿ ಅನಾಹುತ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.
ಅಗ್ನಿಶಾಮಕದಳವು ಸ್ಥಳಕ್ಕೆ ಧಾವಿಸಿ, ಕಟ್ಟಡದೊಳಗೆ ಸಿಲುಕಿಕೊಂಡಿದ್ದ ಹಲವರು ಮಂದಿಯನ್ನು ರಕ್ಷಿಸಿದೆ. ಕಟ್ಟಡದೊಳಗೆ ಧಗಧಗನೆ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು 15 ಅಗ್ನಿಶಾಮಕವಾಹನಗಳು ಹರಸಾಹಸ ನಡೆಸುತ್ತಿವೆ. ಸಾವಿನ ಸಂಖ್ಯೆ ಇನ್ನೂ ಏರುವ ಭೀತಿಯಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಅಗ್ನಿದುರಂತಕ್ಕೀಡಾದ ಕಟ್ಟಡದ ಲಿಫ್ಟ್ನಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಅವರು ದಟ್ಟವಾದ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರು ವುದಾಗಿ ಉಪ ಪೊಲೀಸ್ ಆಯುಕ್ತ ವಿನಾಯಕ್ ದೇಶಮುಖ್ ತಿಳಿಸಿದ್ದಾರೆ. ಅಗ್ನಿದುರಂತದಲ್ಲಿ 25ಕ್ಕೂ ಅಧಿಕ ಮಂದಿಗೆ ಸುಟ್ಟಗಾಯಗಳಾಗಿದ್ದು, ಅವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ತಿಳಿದುಬಂದಿದೆ. ತನ್ಮಧ್ಯೆ ಬಾಂದ್ರಾ ಸಮೀಪದ ಕೊಳೆಗೇರಿ ಪ್ರದೇಶವೊಂದರಲ್ಲಿ ಸಂಭವಿಸಿದ ಇನ್ನೊಂದು ಅಗ್ನಿದುರಂತದಲ್ಲಿ ಓರ್ವ ವ್ಯಕ್ತಿಗಾಯಗೊಂಡಿದ್ದು, ಹಲವು ಜೋಪಡಿಗಳು ಅಗ್ನಿಗಾಹುತಿಯಾಗಿವೆ.


