ಮಂಗಳೂರು,ಮಾರ್ಚ್,24 : ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 11 ರಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತಾಗಿ ಮಾರ್ಚ್ 25ರಂದು ಬೆಳಿಗ್ಗೆ 9.05 ಕ್ಕೆ ಮಂಗಳೂರು ಆಕಾಶವಾಣಿ ಕೇಂದ್ರದಿಂದ ‘ಕಲ್ಯಾಣವಾಣಿ‘ ಜನಪರ ಯೋಜನೆಗಳ ಸರಣಿ ಕಾರ್ಯಕ್ರಮದಲ್ಲಿ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.
ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಅವರು ಶಿಕ್ಷಣ ಸಂದರ್ಶನದಲ್ಲಿ ಪಾಲ್ಗೊಳ್ಳಲಿರುವರು. ಶಿಕ್ಷಕರು ಏ.೧೧ರಿಂದ ಮನೆಮನೆಗೆ ಭೇಟಿ ನೀಡುವ ಜನಗಣತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಯಾವ ರೀತಿಯ ಮಾಹಿತಿಗಳನ್ನು ಒದಗಿಸಬೇಕೆಂಬ ಬಗ್ಗೆ ವಿವರವಾಗಿ ತಿಳಿಸಿದ್ದು ಜನಗಣತಿಯ ಪ್ರಮುಖ ಉದ್ದೇಶಗಳನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಾರ್ವಜನಿಕರು ಈ ಜನಗಣತಿಯಲ್ಲಿ ಪೂರ್ಣವಾಗಿ ಸಹಕರಿಸಿ ದೇಶಕ್ಕೆ ಮಾದರಿ ಜಿಲ್ಲೆಗಳಾಗಬೇಕೆಂದು ಅವರು ಆಶಿಸಿದ್ದಾರೆ. ಇವರನ್ನು ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ ಎಂದು ನಿಲಯ ನಿರ್ದೇಶಕರಾದ ಶ್ರೀಮತಿ ಬಿ.ವಿ. ಪದ್ಮ ತಿಳಿಸಿದ್ದಾರೆ.
