ಮಂಗಳೂರು,ಫೆ.09 : ಮುಂದಿನ ದಶಕ ಗಳಲ್ಲಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಯುವಜನತೆಯನ್ನು ಹೊಂದಿದ ದೇಶ ಭಾರತ ಎಂಬ ಹಿರಿಮೆ ಬರ ಬಹುದು. ಆದರೆ ಪ್ರಸ್ತುತ ನಾವು ಮಕ್ಕಳಿಗೆ ಯಾವ ರೀತಿಯಲ್ಲಿ ತರ ಬೇತಿ, ಶಿಕ್ಷಣ ನೀಡುತ್ತೇವೆ ಎಂಬುದು ಬಹುಮುಖ್ಯ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಹೇಳಿದರು. ಅವರು ಬಾಲ ನ್ಯಾಯ ಕಾಯ್ದೆ ಮತ್ತು ಮಕ್ಕಳ ರಕ್ಷಣೆ ಕುರಿತು ಒಂದು ದಿನದ ಕಾರ್ಯಾಗಾರ ಮತ್ತು ಸಂವಾದವನ್ನು ಉದ್ಘಾಟಿಸಿ ಮಾತನಾಡಿ ಇಂದು ಮಕ್ಕಳನ್ನು ಅತ್ಯುತ್ತಮವಾಗಿ ನಾವು ಬೆಳೆಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಅತೀ ಹೆಚ್ಚು ಯುವಶಕ್ತಿ ಯನ್ನು ಹೊಂದಿರುವುದು ದೇಶದ ಸಾಮರ್ಥ್ಯ ಎನಿಸಿಕೊಳ್ಳುತ್ತದೆ. ಅದಕ್ಕಾಗಿ ಮಕ್ಕಳ ಮತ್ತು ಹದಿಹರೆಯದವರಲ್ಲಿ ಇರುವ ಉತ್ಸಾಹವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವ ತರಬೇತಿ ನೀಡ ಬೇಕಾಗಿದೆ. ಅವರು ತಪ್ಪುಗಳನ್ನು ಮಾಡಿದಾಗ, ತಿದ್ದುವ ಪ್ರಯತ್ನ ಮಾಡಬೇಕೇ ವಿನಃ ಶಿಕ್ಷೆಗೇ ಆದ್ಯತೆ ನೀಡಬಾರದು ಎಂದು ಹೇಳಿದರು.
ಬ್ರಿಟಿಷರು ರೂಪಿಸಿದ ಕಾನೂನುಗಳು ದಮನಕಾರಿಯಾಗಿಯೇ ಇದ್ದವು. ಸ್ವಾತಂತ್ರ್ಯದ ಬಳಿಕವೂ ಅವು ಗಳನ್ನು ಬದಲಾಯಿಸುವ ಪ್ರಯತ್ನ ನಡೆಯಲಿಲ್ಲ. ಆದರೆ ಕ್ರಮೇಣ ಕಾನೂನುಗಳನ್ನು ದಮನಕಾರೀ ಉದ್ದೇಶದಿಂದ ಮಾನವೀಯ ಉದ್ದೇಶಕ್ಕಾಗಿ ಬದಲಾವಣೆ ಮಾಡುವ ಪ್ರಯತ್ನಗಳು ನಡೆದವು. ಮಹಿಳೆಯರ ಮತ್ತು ಮಕ್ಕಳ ಕುರಿತಾಗಿ ಅತ್ಯಂತ ಮಾನವೀಯವಾದ ಕಾನೂನುಗಳ ಅಗತ್ಯವನ್ನು ಮನಗಂಡು ಬಾಲ ನ್ಯಾಯ ಕಾಯ್ದೆಗಳನ್ನು ರೂಪಿಸಲಾಯಿತು ಎಂದು ಹೇಳಿದರು.
ಮಕ್ಕಳು ಕಾನೂನಿನೊಡನೆ ಸಂಘ ರ್ಷಕ್ಕೆ ಸಿಲುಕಿದಾಗ ಅವರಿಗೆ ನೀಡುವ ಶಿಕ್ಷೆಯು ಅವರ ಬದುಕನ್ನು ಉತ್ತಮ ಪಡಿಸುವ ಉದ್ದೇಶ ಹೊಂದಿರಬೇಕು. ಮಗುವಿನಲ್ಲಿರುವ ಕೆಲ ಅನಗತ್ಯ ಗುಣಗಳಿಂದಲೇ ಆ ಮಗುವನ್ನು ಬಚಾವ್ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಇದಾಗಿದೆ. ಮಕ್ಕಳ ಮನಸ್ಸು ಮತ್ತು ಹದಿಹರೆಯದವರ ಮನಸ್ಸು ಅವರ ನಿಯಂತ್ರಣದಲ್ಲಿರುವುದಿಲ್ಲ. ದೇಹವೇ ಅವರ ಮನಸ್ಸನ್ನು ನಿಯಂತ್ರಿಸುತ್ತದೆ. ಆದ್ದರಿಂದ ಅವರಲ್ಲಿರುವ ಉತ್ಸಾಹ, ಸಾಮರ್ಥ್ಯ ಸರಿಯಾದ ವಿಚಾರಕ್ಕೆ ಬಳಕೆಯಾಗುವಂತೆ ಹಿರಿಯರ ಮಾರ್ಗದರ್ಶನ, ತಿದ್ದುವಿಕೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ನ್ಯಾಯ ಮೂರ್ತಿ ಮತ್ತು ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಸಮಿತಿಯ ಅಧ್ಯಕ್ಷ ನ್ಯಾ. ಹುಲುವಾಡಿ ರಮೇಶ್ ಮಾತನಾಡಿ ಮಕ್ಕಳ ಲ್ಲಿರುವ ಕೆಲವು ಸ್ವಭಾವವನ್ನು ಸರಿ ಪಡಿಸುವ ಪ್ರಯತ್ನ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಮತ್ತು ಎಸ್ಪಿ ಡಾ. ಎಸ್.ಡಿ. ಶರಣಪ್ಪ ಮಾತನಾಡಿದರು. ಕರ್ನಾಟಕ ಹೈಕೋರ್ಟ್ನ ನ್ಯಾ. ಎ. ಎನ್. ವೇಣುಗೋಪಾಲ ಗೌಡ, ದಕ್ಷಿಣ ಕನ್ನಡ ಜಿ. ಪಂ ಸಿಇಒ ತುಳಸಿ ಮದ್ದಿನೇನಿ, ಡಿಸಿಪಿ ಸಂತೋಷ್ ಬಾಬು, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಪಿ.ಪಿ. ಹೆಗಡೆ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಇತರರು ಉಪಸ್ಥಿತರಿದ್ದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾ ಧೀಶರಾದ ಉಮಾ ಎಂ. ಜಿ. ಸ್ವಾಗತಿಸಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಜಿ. ನಿಜ ಗಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.








