ಹೊನ್ನಾಳಿ (ದಾವಣಗೆರೆ ಜಿಲ್ಲೆ): ಅಸ್ಸಾಂನ ಗುವಾಹಟಿ ನಗರದಲ್ಲಿ ಕಳೆದ ವರ್ಷದ ಅಕ್ಟೋಬರ್ನಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮಹ್ಮದ್ ಫಲ್ಬರ್ ಹುಸೇನ್ನನ್ನು ಹೊನ್ನಾಳಿ ತಾಲ್ಲೂಕಿನ ಸೊರಟೂರು ವ್ಯಾಪ್ತಿಯ ಮಾದೇನಹಳ್ಳಿ ಗ್ರಾಮದಲ್ಲಿ ಗುರುವಾರ ಬಂಧಿಸಲಾಗಿದೆ.
ಆರೋಪಿಯನ್ನು ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆತನನ್ನು ದಾವಣಗೆರೆ ಉಪ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ವಿವರ: ಜನವರಿ 27 ರಂದು ರಾತ್ರಿ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ ಹಾಗೂ ರಾಜ್ಯ ಗುಪ್ತ ವಾರ್ತೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಅಸ್ಸಾಮಿನ ಫಲ್ಬರ್ ಹುಸೇನ್ ಹುಡುಕಾಟ ಆರಂಭವಾಗಿತ್ತು.
ಈತ ಅಸ್ಸಾಂ ರಾಜ್ಯದ ಬಕ್ಸಾ ಜಿಲ್ಲೆಯ ಪೋಕಲಗಿ ಗ್ರಾಮದವನು. ಬಾಂಬ್ ಸ್ಫೋಟ ಹಾಗೂ ಇತರ ಪ್ರಮುಖ ಪ್ರಕರಣಗಳಲ್ಲಿ ಈತ
ಭಾಗಿಯಾಗಿದ್ದು, ಅಲ್ಲಿನ ಪೊಲೀಸರಿಗೆ ಬೇಕಾಗಿದ್ದ. ಆತ ಹೊನ್ನಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇರುವನೆಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸಲಾಯಿತು.
ದಾವಣಗೆರೆ ಡಿವೈಎಸ್ಪಿ ನ್ಯಾಮಗೌಡ, ಹೊನ್ನಾಳಿ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ಅಶ್ವಿನ್ ಕುಮಾರ್ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಯಿತು.
ಈತನ ಸಹೋದರ ನಜೀಂ ಉಲ್ ಹಕ್ ಹಲವು ದಿನಗಳಿಂದ ಹೊನ್ನಾಳಿ–ಶಿಕಾರಿಪುರ ರಸ್ತೆ ಕಾಮಗಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಅಸ್ಸಾಂ ಪೊಲೀಸರು ಫಲ್ಬರ್ ಹುಸೇನ್ನ ಹುಡುಕಾಟ ಆರಂಭಿಸಿದ್ದರಿಂದ ಆತ ತಲೆ ಮರೆಸಿಕೊಂಡು ಹೊನ್ನಾಳಿಯಲ್ಲಿರುವ ಸಹೋದರನ ಬಳಿ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಸ್ಸಾಂ ಪೊಲೀಸರು ನೀಡಿದ ಉಗ್ರನ ಚಹರೆಯು ಜ. 28 ರಂದು ಸೊರಟೂರು ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ ವ್ಯಕ್ತಿಯಲ್ಲಿ ಕಂಡುಬಂತು. ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ವಿಚಾರಣೆ ವೇಳೆ ಹೆಸರು, ವಿಳಾಸ, ಗುರುತಿನ ಚೀಟಿ, ಮತ್ತು ಮೊಬೈಲ್ ನಂಬರ್ ಪರಿಶೀಲಿಸಲಾಯಿತು. ಅಸ್ಸಾಂ ಪೊಲೀಸರೊಂದಿಗೆ ಸಂಪರ್ಕಿಸಿ, ಆರೋಪಿ ಎಂದು ಖಚಿತಪಡಿಸಿಕೊಳ್ಳ ಲಾಯಿತು ಎಂದು ಸಿಪಿಐ ನಾಗರಾಜ್ ಮಾಡಳ್ಳಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ವಿಶೇಷ ತನಿಖಾ ತಂಡದಲ್ಲಿ ಪೊಲೀಸ್ ಸಿಬ್ಬಂದಿಯಾದ ದೊಡ್ಡ ಬಸಪ್ಪ, ಫೈರೋಜ್ ಖಾನ್, ಕೊಟ್ರೇಶ್, ಹರೀಶ್, ವೆಂಕಟರಮಣ, ರಾಜಶೇಖರ್, ಶಂಕರಗೌಡ ಹಾಗೂ ಅರುಣ್ ಕುಮಾರ್ ಇದ್ದರು.
2008ರಲ್ಲಿ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದರು!
ಹೊನ್ನಾಳಿ: ತಾಲ್ಲೂಕಿನ ಎಚ್.ಕಡದಕಟ್ಟೆ ಗ್ರಾಮದಲ್ಲಿ 2008ರಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದರು.
ಆಕಸ್ಮಿಕವಾಗಿ ಕೆಟ್ಟುಹೋದ ಬೈಕ್ ದುರಸ್ತಿಗಾಗಿ ಕೆಳಗಿಳಿದು ಪರಿಶೀಲಿಸುತ್ತಿದ್ದಾಗ ಅಲ್ಲಿಯೇ ಇದ್ದ ಪೊಲೀಸರು ಸಂಶಯದಿಂದ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರ ಚಲನವಲನ ಹಾಗೂ ಅವರಿಂದ ದೊರೆತ ಸಂಶಯಾಸ್ಪದ ವಸ್ತುಗಳಿಂದ ಅವರು ಉಗ್ರರು ಇರಬಹುದು ಎಂದು ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು.
ಹೊಸಪೇಟೆಯ ಅಸಾದುಲ್ಲಾ ಹಾಗೂ ಹೈದರಾಬಾದ್ನ ರಿಯಾಜುದ್ದೀನ್ ನಾಸಿರ್ ಆ ಸಂದರ್ಭದಲ್ಲಿ ಬಂಧಿತರಾಗಿದ್ದ ಉಗ್ರರು.
ರಿಯಾಜುದ್ದೀನ್ ಪಾಕಿಸ್ತಾನದಲ್ಲಿ ಬಾಂಬ್ ತಯಾರಿಕೆಯಲ್ಲಿ ಪರಿಣತಿ ಪಡೆದು ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸಲು ಬಂದಿದ್ದ ಎನ್ನಲಾಗಿದೆ. ಹುಬ್ಬಳ್ಳಿಯ ನ್ಯಾಯಾಲಯದಲ್ಲಿ ಎರಡು ವರ್ಷಗಳಿಂದ ಇವರಿಬ್ಬರ ವಿಚಾರಣೆ ನಡೆಯುತ್ತಿದೆ.
