ಕುಂದಾಪುರ: ತಾಲೂಕಿನ ಅಮಾಸೆಬೈಲು ಸಮೀಪದ ಮಡಾಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಮನೆ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರದ ನಿವಾಸಿಯೋರ್ವರಿಗೆ ಸೇರಿದ ಪಾಳು ಬಾವಿಯಲ್ಲಿ ಕಡಿದ ದನಗಳ ತಲೆ ಭಾಗಗಳು ಮಂಗಳವಾರ ಸ್ಥಳೀಯರು ಪತ್ತೆ ಹಚ್ಚಿದ್ದಾರೆ.
ದನ ನಾಪತ್ತೆ ದೂರು: ಶೇಡಿಮನೆ ಗ್ರಾಮದ ಚನ್ನಕೋಡು ಗೋವಿಂದ ಪೂಜಾರಿ ಎನ್ನುವವರು ಭಾನುವಾರ ಬೆಳಗ್ಗೆ ಮೇಯಲು ಬಿಟ್ಟ ಎಂಟು ತಿಂಗಳ ದನವೊಂದು ನಾಪತ್ತೆಯಾಗಿದೆ. ಗೋವಿಂದ ಪೂಜಾರಿ ಹಾಗೂ ಮನೆಯವರು ಸೋಮವಾರ ದಿನವಿಡೀ ಹುಡುಕಾಡಿದರೂ ದನ ಪತ್ತೆಯಾಗಿಲ್ಲ. ಸೋಮವಾರ ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ದನವನ್ನು ಹುಡುಕುತ್ತಿರುವ ಸಮಯದಲ್ಲಿ ಶೇಡಿಮನೆ ಗ್ರಾಮದ ಸರ್ಕಾರಿ ಶಾಲೆಗೆ ಸಮೀಪದ ವ್ಯಕ್ತಿಯೋರ್ವರಿಗೆ ಸೇರಿದ ಪಾಳು ಬಾವಿಯ ಬಳಿ ಮೂರ್ನಾಲ್ಕು ಯುವಕರು ನಿಂತಿರುವುದು ಕಂಡು ಬಂದಿದೆ. ದನವನ್ನು ಹುಡುಕಲು ಹೋದ ಗೋವಿಂದ ಪೂಜಾರಿ ಮನೆಯ ಮಹಿಳೆಯರು ದನವನ್ನು ಕಡಿದ ಬಗ್ಗೆ ಸೋಮವಾರ ರಾತ್ರಿಯೇ ಸಂಶಯದಿಂದ ವಿಚಾರವನ್ನು ತಿಳಿಸಿದ್ದಾರೆ.
ರಾತ್ರಿ ಸ್ಥಳೀಯರು ಬಾವಿ ಬಳಿ ನಿಂತ ಯುವಕರ ಮೇಲೆ ಸಂಶಯಗೊಂಡಿದ್ದು ಮಂಗಳವಾರ ಬೆಳಿಗ್ಗೆ ಬಾವಿಯ ಸಮೀಪಕ್ಕೆ ಹೋದಾಗ ದನ ಕಡಿದು ಬಾವಿಗೆ ಹಾಕಿದ ಕುರುಹುಗಳು ಪತ್ತೆಯಾಗಿದೆ. ಅಲ್ಲದೇ ಕಾಣೆಯಾದ ದನದ ತಲೆಯ ಭಾಗ ಹಾಗೂ ಚರ್ಮ ಕೊಳೆತು ವಾಸನೆ ಬರುತ್ತಿರುವುದರಿಂದ ಸಂಶಯದಿಂದ ಬಾವಿಗಳಿದು ನೋಡಿದಾಗ ಚನ್ನಕೋಡು ಗೋವಿಂದ ಪೂಜಾರಿಗೆ ಸೇರಿದ ದನವಾಗಿತ್ತು ಎನ್ನಲಾಗಿದೆ. ಅಲ್ಲದೇ ಈ ಹಿಂದೆ ಕಡಿದು ಬಾವಿಗೆ ಎಸೆಯಲಾದ ೭-೮ ಜಾನುವಾರುಗಳ ತಲೆ ಭಾಗ ಪತ್ತೆಯಾಗಿವೆ.
ಆರೋಪಿ ಪತ್ತೆ-ವಿಚಾರಣೆ: ಶೇಡಿಮನೆ ಗ್ರಾಮದ ಸರ್ಕಾರಿ ಶಾಲೆಗೆ ಸಮೀಪದ ಅಬ್ದುಲ್ ಖಾದರ್ ಎನ್ನುವವರ ಮಗ ಮುದಸೀರ್ (೩೨) ಇವರು ಕೋಳಿ ಮಾರಾಟ ಅಂಗಡಿ ನಡೆಸುತ್ತಿದ್ದಾರೆ. ಇವರು ಅಂಗಡಿ ಸಮೀಪದ ಪಾಳು ಬಾವಿಗೆ ದನದ ಕಡಿದ ತಲೆ ಭಾಗವನ್ನು ಹಾಕಿದ ಬಗ್ಗೆ ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಆತನನ್ನು ಅಮಾಸೆಬೈಲು ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಂಗಳವಾರ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಾಯದಿಂದ ಬಾವಿಯಲ್ಲಿದ್ದ ದನದ ಕಡಿದ ತಲೆ ಭಾಗ ಹಾಗೂ ಹಿಂದೆ ಬಾವಿಗೆ ಹಾಕಲಾದ ದನದ ಕಡಿದ ತಲೆ ಭಾಗಗಳನ್ನು ಮೇಲೆತ್ತಿದ್ದಾರೆ. ವಿಚಾರಣೆ ಪ್ರಗತಿಯಲ್ಲಿದೆ.