ಮೂಡಬಿದಿರೆ,ನ.14 : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ವತಿಯಿಂದ ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದ ರತ್ನಾಕರವರ್ಣಿ ವೇದಿಕೆ, ದಿ. ಡಾ.ಯು.ಆರ್.ಅನಂತಮೂರ್ತಿ ಸಭಾಂಗಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ “ಆಳ್ವಾಸ್ ನುಡಿಸಿರಿ – 2014′ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳಕ್ಕೆ `ಕಾದಂಬರಿಕಾರ, ಮಕ್ಕಳ ಸಾಹಿತಿ, ಡಾ.ನಾ.ಡಿ.ಸೋಜರವರು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು.
ಖ್ಯಾತ ಕವಿ, ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯನವರ ಸರ್ವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.ಪ್ರಧಾನ ಸಾಹಿತ್ಯ ಗೋಷ್ಠಿ, ಇಶೇಷೋಪನ್ಯಾಸಗಳು, ಶತಮಾನದ ನಮನ, ಸಂಸ್ಮರಣೆ, ಕವಿಸಮಯ ಕವಿನಮನ, ಸಾಂಸ್ಕೃತಿಕ ವೈಭವ, ವಿವಿಧ ಪ್ರದರ್ಶನಗಳು ಆರಂಭಗೊಂಡಿವೆ.
ಮೊದಲಿಗೆ ಮುಂಜಾನೆ ಅದ್ದೂರಿ ಮೆರವಣಿಗೆ ಮೂಲಕ ಅಥಿತಿಗಳನ್ನು ವೇದಿಕೆಗೆ ಕರೆತರಲಾಯತು. 6 ವೇದಿಕೆಗಳಲ್ಲಿ ನಡೆಯುವ ಕಲಾ ಕಾರ್ಯಕ್ರಮಗಳಲ್ಲಿ 2,000 ವಿದ್ಯಾರ್ಥಿಗಳನ್ನು ಹೊರತುಪಡಿಸಿ 150 ಕಲಾತಂಡಗಳ 3,000ಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದರು.
ಈ ಬಾರಿ ತುಳು, ಕೊಂಕಣಿ, ಬ್ಯಾರಿ ಭಾಷಾ ನುಡಿ ವೈಭವವನ್ನು ಸಂಯೋಜಿಸಲಾಗಿರುವುದು ವಿಶೇಷ. ಆಳ್ವಾಸ್ನ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು ಫಲಪುಷ್ಪ ಪ್ರದರ್ಶನ, ತರಕಾರಿಗಳಿಂದ ರೂಪಿತ ಕಲಾ ಕೃತಿಗಳು, 22 ಅಡಿ ಎತ್ತರದ ಮಣಿಪುರದ ಬಾಳೆಗಿಡ ಜನಮನ ಸೆಳೆಯುತ್ತಿವೆ. ಅಲ್ಲಲ್ಲಿ ಸಾಹಸ ಕ್ರೀಡೆ, ಧಾರವಾಡ, ಹುಬ್ಬಳ್ಳಿಯ ಮಲ್ಲ ಕಂಬ, ಅದರಲ್ಲೂ ಗದಗದ ಅಂಧ ಮಕ್ಕಳ ಮಲ್ಲಕಂಬ, ಹಕ್ಕಿ ಪಿಕ್ಕಿ ಹಾಡು, ಸುಡುಗಾಡು ಸಿದ್ದರ ಜಾದೂ ಸೇರಿದಂತೆ ಹಲವಾರು ಜನಪದ ಕಲಾವಿದರು ಆವರಣದಲ್ಲಿ ಅಲ್ಲಲ್ಲಿ ಕಲೆತು ದಿನವಿಡೀ ಜನರನ್ನು ರಂಜಿಸಲಿದ್ದಾರೆ.
ನುಡಿಸಿರಿಗೆ ಹರಿದು ಬರುತ್ತಿದೆ ಜನಸಾಗರ…
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ನುಡಿಸಿರಿ ಕಾರ್ಯಕ್ರಮದ ರೂವಾರಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಮಾತನಾಡಿ, ಈಗಾಗಲೇ 5,000 ಮಂದಿ ರಾಜ್ಯದ ವಿವಿಧೆಡೆಗಳಿಂದ ಪ್ರತಿನಿಧಿಗಳಾಗಿ ಆಗಮಿಸಿದ್ದು ನುಡಿಸಿರಿಗೆ ಜನಸಾಗರ ಹರಿದು ಬರುತ್ತಿದೆ. ಸಮಯಕ್ಲಪ್ತತೆ, ಸೌಂದರ್ಯ ಪ್ರಜ್ಞೆಯೊಂದಿಗೆ ಶುಚಿತ್ವಕ್ಕೆ ಒತ್ತು ನೀಡಲಾಗಿದೆ. 9 ಕಡೆ 45 ಕೌಂಟರ್ಗಳಲ್ಲಿ ಸಮಾನ ಊಟೋಪಚಾರಕ್ಕೆ ವ್ಯವಸ್ಥೆಯಾಗಿದೆ. ಪುಟ್ಟ ಮಕ್ಕಳಿಂದ ವಿವಿಧ ವಯೋಮಾನದವರನ್ನು “ನುಡಿಸಿರಿ’ ಸೆಳೆಯಲಿದೆ’ ಎಂದು ತಿಳಿಸಿದರು.
ಶುಕ್ರವಾರ ಸಂಜೆ 5.30ಕ್ಕೆ ತುಳು ಸಿರಿ, ಶನಿವಾರ ಕೊಂಕಣಿ ಸಿರಿ ಹಾಗೂ ರವಿವಾರ ಬ್ಯಾರಿ ಸಿರಿ ಕಾರ್ಯಕ್ರಮ ಆಯಾ ಭಾಷಿಗರ ಸಾಹಿತ್ಯ ಸಾಂಸ್ಕೃತಿಕ ಕಲಾಪಗಳು, ಪರಂಪರೆ ಪ್ರತೀಕಗಳ ಪ್ರದರ್ಶನ, ತಿಂಡಿತಿನಿಸು, ಪುಸ್ತಕ ಪ್ರದರ್ಶನ /ಮಾರಾಟ ಮೊದಲಾದ ಆಕರ್ಷಣೆಗಳೊಂದಿಗೆ ನಡೆಯಲಿವೆ.
ತುಳು-ಕೊಂಕಣಿ-ಬ್ಯಾರಿ ಭಾಷೆಗಳ ಸಮ್ಮೇಳನ:
ಸಾಂಸ್ಕೃತಿಕ ನೆಲೆಯಲ್ಲಿ ಎಲ್ಲ ಧರ್ಮದವರನ್ನು ಪರಸ್ಪರ ಅರಿತುಕೊಳ್ಳುವ ಉದ್ದೇಶದಿಂದ ಈ ವರ್ಷ ಸಮಾನಾಂತರ ವೇದಿಕೆಯಲ್ಲಿ ದಿನವೊಂದರಂತೆ ತುಳು-ಕೊಂಕಣಿ-ಬ್ಯಾರಿ ಭಾಷೆಗಳ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಮುಸ್ಸಂಜೆ 5.30ಕ್ಕೆ ಪ್ರಾರಂಭವಾದ ಸಮ್ಮೇಳನದಲ್ಲಿ ಒಂದು ಗಂಟೆಯ ಸಭಾ ಕಾರ್ಯಕ್ರಮದಲ್ಲಿ ಆಯಾಭಾಷೆಗಳಿಗೆ ದುಡಿದ ಮಹನೀಯರನ್ನು ಸನ್ಮಾನಿಸುವ ಹಾಗೂ ಉಪನ್ಯಾಸದ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು. ಸಂಜೆ ೬:೩೦ರಿಂದ 10 ಗಂಟೆಯವರೆಗೆ ಆಯಾ ಸಾಂಸ್ಕೃತಿಯನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸುಮಾರು ಇನ್ನೂರಕ್ಕೂ ಅಧಿಕ ಕನ್ನಡ ಪುಸ್ತಕಗಳ ಮಾರಾಟ ಮಳಿಗೆಗಳು, ತಿಂಡಿ ತಿನಸುಗಳ ಹಾಗೂ ಇನ್ನಿತರ ಮಳಿಗೆಗಳಿಗೆ ಈ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ. ಕೇವಲ 500 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಸಂಸ್ಥೆಯ ಗುರುತುಚೀಟಿಯೊಂದಿಗೆ ಬಂದು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಾದರೆ ಸಂಪೂರ್ಣ ಉಚಿತವಾಗಿ ವಸತಿ ಮತ್ತು ಊಟ ಉಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಕರ್ನಾಟಕ ವರ್ತಮಾನದ ತಲ್ಲಣಗಳು : ನಾಲ್ಕು ಪ್ರಧಾನ ಗೋಷ್ಠಿ
ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಪರಿಕಲ್ಪನೆಯಾಗಿ `ಕರ್ನಾಟಕ ವರ್ತಮಾನದ ತಲ್ಲಣಗಳು’ ಎಂಬ ವಿಷಯವನ್ನು ಆರಿಸಲಾಗಿದೆ. ಈ ವಿಚಾರವಾಗಿ ನಾಲ್ಕು ಪ್ರಧಾನ ಗೋಷ್ಠಿಗಳಿದ್ದು ಶಿವಾನಂದ ಕಳವೆ, ನಾಗೇಶ ಹೆಗಡೆ, ಡಾ.ಮೋಹನ ಚಂದ್ರಗುತ್ತಿ, ಡಾ.ಗುರುರಾಜ ಕರ್ಜಗಿ, ಎ.ಈಶ್ವರಯ್ಯ ಮಣಿಪಾಲ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಪ್ರತಿಭಾ ನಂದಕುಮಾರ್, ಡಾ.ಪಿ.ಎನ್.ರಾಮಚಂದ್ರನ್ರವರು ಈ ವಿಷಯದಲ್ಲಿ ಪ್ರಬಂಧ ಮಂಡಿಸಲಿದ್ದಾರೆ.
ಶತಮಾನದ ಸಂಭ್ರಮವನ್ನು ಹಂಚಿಕೊಳ್ಳುವ, ಗೌರವಿಸುವ ಶತಮಾನದ ನಮನ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಜಾನಪದ ತಜ್ಞರಾಗಿದ್ದ ನಾಡೋಜ ಡಾ.ಎಚ್.ಎಲ್.ನಾಗೇಗೌಡರಿಗೆ ನುಡಿನಮನವನ್ನು ಡಾ.ಚಿಕ್ಕೆರೆ ಶಿವಶಂಕರ ಸಲ್ಲಿಸಲಿದ್ದಾರೆ. ಶತಾಯುಷಿ ನಾಡೋಜ ಕಯ್ಯಾರ ಕಿಂಞಣ್ಣ ರೈಯವರಿಗೆ ಡಾ.ಸದಾನಂದ ಪೆರ್ಲರವರು ನುಡಿನಮನ ಸಲ್ಲಿಸಲಿದ್ದಾರೆ.
ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ
ನವೆಂಬರ್ 14, 15 ಮತ್ತು 16 ನೇ ದಿನಾಂಕಗಳಂದು ನಡೆಯುವ ಆಳ್ವಾಸ್ ನುಡಿಸಿರಿ 2014 ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 80 ಮಂದಿ ಖ್ಯಾತನಾಮರ ಹೆಸರುಗಳನ್ನು ಪ್ರಕಟಿಸಲಾಗಿದೆ. ಅನನ್ಯ ಸಂಶೋಧಕ, ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ, ಸಾಹಿತಿ, ಸಂಶೋಧಕ ಪ್ರೊ. ವಸಂತ ಕುಷ್ಠಗಿ, ಖ್ಯಾತ ಕವಿ, ಅಂಕಣಕಾರ ಪ್ರೊ. ಎಚ್.ಎಸ್. ಶಿವಪ್ರಕಾಶ್, ಸಂಶೋಧಕ ಪ್ರೊ ಷ. ಶೆಟ್ಟರ್, ಕವಯಿತ್ರಿ ಡಾ. ಮಾಲತಿ ಪಟ್ಟಣಶೆಟ್ಟಿ, ನಟ, ನಿರ್ದೇಶಕ ಶ್ರೀ ಟಿ.ಎಸ್.ನಾಗಾಭರಣ, ಸಂಘಟಕ ಪ್ರೊ. ಹೆರಂಜೆ ಕೃಷ್ಣಭಟ್ಟ, ಜಾನಪದ ವಿದ್ವಾಂಸ, ಖ್ಯಾತ ಗಾಯಕ ಬಾನಂದೂರು ಕೆಂಪಯ್ಯ, ಯಕ್ಷಗಾನ ಸವ್ಯಸಾಚಿ ಶ್ರೀ ಮಂಟಪ ಪ್ರಭಾಕರ ಉಪಾಧ್ಯ, ನೃತ್ಯ ವಿದುಷಿ ಡಾ. ವಸುಂಧರಾ ದೊರೆಸ್ವಾಮಿ, ಪ್ರಖ್ಯಾತ ರಥ ಶಿಲ್ಪಿ ಶ್ರೀ ಅಶ್ವತ್ಥಪುರ ಬಾಬುರಾಯ ಆಚಾರ್ಯರನ್ನು ಆಳ್ವಾಸ್ ನುಡಿಸಿರಿ ೨೦೧೪ರ ಗೌರವಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಮೋಹನ್ ಆಳ್ವ ವಿವರಿಸಿದರು.























































