ಕರಾವಳಿ

1.25 ಕೋಟಿ ರೂ. ವೆಚ್ಚದಲ್ಲಿ ವಂಡ್ಸೆ-ನೆಂಪುವಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಕೆಪಿಎಸ್) ಆವರಣದಲ್ಲಿ ನಿರ್ಮಾಣಗೊಂಡಿದೆ ‘ಬಹುಪಯೋಗಿ ಸಾಂಸ್ಕೃತಿಕ ಸಭಾ ಭವನ’ | ಮೇ.10ಕ್ಕೆ ಲೋಕಾರ್ಪಣೆ

Pinterest LinkedIn Tumblr

ಕುಂದಾಪುರ: ಅಂದಾಜು 63 ವರ್ಷಗಳ ಕಾಲ ಮಲೆನಾಡು ಭಾಗದ ಶಿಕ್ಷಣಾಸಕ್ತ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಸಾವಿರಾರು ಮಕ್ಕಳ ಜೀವನಕ್ಕೆ ಶಿಕ್ಷಣದ ಭದ್ರ ಬುನಾದಿಯನ್ನು ಒದಗಿಸಿದ ಶಿಕ್ಷಣ ದೇಗುಲವೊಂದರ ಅವಶ್ಯಕತೆಯನ್ನು ಮನಗಂಡು, ಶಾಲೆಯ ಪ್ರಾರ್ಥನ (ಹಳೆ) ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು ಒಂದಾಗಿ ಅಂದಾಜು 1.25 ಕೋಟಿಗೂ ಅಧಿಕ ಮೊತ್ತದ ಸುಸಜ್ಜಿತ ಬಹುಪಯೋಗಿ ಸಾಂಸ್ಕೃತಿಕ ಸಭಾ ಭವನದ ನಿರ್ಮಾಣ ಕಾರ್ಯ ತಾಲ್ಲೂಕಿನ ವಂಡ್ಸೆ-ನೆಂಪುವಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ( ಕೆಪಿಎಸ್ ) ಆವರಣದಲ್ಲಿ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಜ್ಜಾಗಿದೆ.

ಇತಿಹಾಸ ಪ್ರಸಿದ್ಧ ಶಾಲೆ: ಸಹ್ಯಾದ್ರಿಯ ತಪ್ಪಲು ಪ್ರದೇಶದ, ಮಲೆನಾಡಿನ ಪ್ರಕೃತಿ ರಮಣೀಯ ಪರಿಸರದ ವಂಡ್ಸೆ ಭಾಗದ ಸುತ್ತ-ಮುತ್ತಲಿನ 25 ಕ್ಕೂ ಅಧಿಕ ಹಳ್ಳಿಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಾಥಮಿಕ ನಂತದ ಶಿಕ್ಷಣಗಳಿಗಾಗಿ ದೂರದ ಕುಂದಾಪುರಕ್ಕೆ ಬರಬೇಕಾದ ಅನೀವವಾರ್ಯತೆ ಇತ್ತು. ಈ ಕಾಲಘಟ್ಟದಲ್ಲಿ ಶಿಕ್ಷಣಾಸಕ್ತಿಯ ಮನಸ್ಸುಗಳಿಗೆ ಸ್ಪಂದಿಸಿದ್ದ ಅಂದಿನ ಶಾಸಕರಾಗಿದ್ದ ಯಡ್ತರೆ ಮಂಜಯ್ಯ ಶೆಟ್ಟಿ ಅವರ ಪ್ರಯತ್ನದಿಂದಾಗಿ 1962 ರಲ್ಲಿ ಸರ್ಕಾರ ವಂಡ್ಸೆ-ನೆಂಪುವಿನ ಸುಮಾರು 10 ಎಕ್ರೆ ವಿಸ್ತೀರ್ಣದ ಪ್ರದೇಶದಲ್ಲಿ ‘ಮಲ್ನಾಡ್ ಹೈಸ್ಕೂಲ್’ ಪ್ರಾರಂಭಿಸಿತ್ತು.

ಅಂದಿನಿಂದ ಇಂದಿನವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣಾಭ್ಯಾಸವನ್ನು ಪಡೆದು, ಉನ್ನತ ಶಿಕ್ಷಣವನ್ನು ಪಡೆದುಕೊಂಡು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬದುಕಿನ ನೆಲೆಯನ್ನು ಕಟ್ಟಿಕೊಂಡಿದ್ದಾರೆ. ಈ ಶಾಲೆಯ ಪ್ರಾರ್ಥನ ವಿದ್ಯಾರ್ಥಿಗಳು ಶಾಸಕರಾಗಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಾಗಿ, ನಾಡಿನ ಪ್ರಸಿದ್ಧ ಉದ್ಯಮಿಗಳಾಗಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಮುಂದಾಳುಗಳಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ 1984-85 ನೇ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ವಿಭಾಗವನ್ನು ಆರಂಭಿಸಿದ್ದ ಈ ಜ್ಞಾನ ದೇಗುಲದಲ್ಲಿ ಪ್ರಸ್ತುತ ಎಲ್‌ಕೆಜಿ ಯಿಂದ ದ್ವಿತೀಯ ಪಿಯುಸಿ ವರೆಗೆ 800 ವಿದ್ಯಾರ್ಥಿಗಳು ಶಿಕ್ಷಣಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ.

ಸಾಂಸ್ಕೃತಿಕ ಸಭಾ ಭವನದ ನಿರ್ಮಾಣ: ಶಾಲೆಯ ಅಭಿವೃದ್ಧಿಯ ಕನಸುಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, 6 ದಶಕಗಳ ಹಿರಿತನ ಇರುವ ನಮ್ಮ ಶಿಕ್ಷಣ ದೇಗುಲಕ್ಕೆ ಅವಶ್ಯಕವಾಗಿರುವ ಹಾಗೂ ಪರಿಸರದ ಸಾಂಸ್ಕೃತಿಕ ಆಸಕ್ತರಿಗೆ ಅನುಕೂಲಕರವಾಗುವ ಸಾಂಸ್ಕೃತಿಕ ಸಭಾ ಭವನದ ನಿರ್ಮಾಣದ ಕನಸನ್ನು ಕಂಡಿದ್ದರು. ಈ ಕನಸನ್ನು ನನಸಾಗಿಸುವ ಜವಾಬ್ದಾರಿಯನ್ನು ಹೇಗಲಿಗೇರಿಸಿಕೊಂಡವರು ಪ್ರಸ್ತುತ ಹಳೆ ವಿದ್ಯಾರ್ಥಿ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ ಬಿ.ಎನ್.ಶೆಟ್ಟಿಯವರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಮಾರ್ಗದರ್ಶನದಲ್ಲಿ, ಶಾಲೆಯ ಹಳೆ ವಿದ್ಯಾರ್ಥಿಗಳ ತಂಡವನ್ನು ಕಟ್ಟಿಕೊಂಡು ಸುಸಜ್ಜಿತವಾದ ಸಾಂಸ್ಕೃತಿಕ ಭವನದ ನಿರ್ಮಾಣದ ಗುರಿಯನ್ನು ಇರಿಸಿಕೊಂಡು ಮುಂದಡಿ ಇಟ್ಟರು.

ಈ ಭವನ ನಿರ್ಮಾಣಕ್ಕೆ ಸ್ಪೂರ್ತಿ ತುಂಬಿ ಶಾಲೆಯ ಪ್ರಾರ್ಥನಾ ವಿದ್ಯಾರ್ಥಿನಿ ಹೊಳ್ಮಗೆ ವಿನೋದ ಶೆಟ್ಟಿಯವರ ಹೆಸರಿನಲ್ಲಿ 75 ಲಕ್ಷ ರೂ. ದೇಣಿಗೆಯನ್ನು ನೀಡಿದವರು ಯುಎಸ್‌ಎ ನಲ್ಲಿ ಇಂಜಿನಿಯರ್ ಹಾಗೂ ಸಂಶೋಧಕರಾಗಿದ್ದ ಅವರ ಪತಿ ಹಳ್ನಾಡು ರವಿ ಎಸ್ ಶೆಟ್ಟಿ ಅವರು. ಪ್ರಾರಂಭದಲ್ಲಿ ಶಾಲೆಯ ಸಾಂಸ್ಕೃತಿಕ ಚಟುವಟಿಕೆಯ ಉದ್ದೇಶಗಳಿಗೆ ಸೀಮಿತವಾದ ಭವನ ನಿರ್ಮಾಣಕ್ಕೆ ಮುಂದಾಗಿದ್ದ ಸಮಿತಿ, ರವಿ ಎಸ್ ಶೆಟ್ಟಿ ಅವರ ಪ್ರೋತ್ಸಾಹದಿಂದ ಉದ್ದೇಶಿತ ಯೋಜನೆಯನ್ನು ಇನ್ನಷ್ಟು ವಿಸ್ತಾರಗೊಳಿಸಿ 1.25 ಕೋಟಿ ರೂ. ವೆಚ್ಚದ 4,600 ಚ.ಅಡಿ ವಿಸ್ತೀರ್ಣದ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಯೋಜನೆಗೆ ತಗಲುವ ಒಟ್ಟು ವೆಚ್ಚದ ಬಹುಪಾಲನ್ನು ರವಿ ಎಸ್ ಶೆಟ್ಟಿಯವರು ನೀಡಿದ ಬಳಿಕ, ಅಗತ್ಯವಾಗಿರುವ ಉಳಿದ ಮೊತ್ತವನ್ನು ಶಾಲೆಯ 38 ಹಳೆ ವಿದ್ಯಾರ್ಥಿಗಳು ವೈಯಕ್ತಿಕ ದೇಣಿಗೆ ನೀಡುವ ಮೂಲಕ ಭರಿಸಿದ್ದಾರೆ.

ಈ ಭವನದಲ್ಲಿ ವಾಚನಾಲಯ, ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಇ-ಕಲಿಕೆ, ಯೋಗ, ಕಂಪ್ಯೂಟರ್, ಕೌಶಲಾಭಿವೃಧ್ಧಿ ತರಬೇತಿಗೆ ಅಗತ್ಯ ಸ್ಥಳವಕಾಶ ಒದಗಿಸಲಾಗಿದೆ. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಒಳಾಂಗಣ ಚಟುವಟಿಕೆಗೂ ಅವಕಾಶ ನೀಡುವ ಉದ್ದೇಶವಿದೆ. ಮಹಾದ್ವಾರ, ಕಂಬಗಳು, ಮೇಲ್ಛಾವಣೆ, ಪೇಟಿಂಗ್, ನೆಲ ಹಾಸುಗಳಿಗೆ ಇಂಟರ್‌ಲಾಕ್ ಅಳವಡಿಸುವುದರೊಂದಿಗೆ ಕಟ್ಟಡವನ್ನು ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯತೆಗಳಿಗಾಗಿ ತಜ್ಞರ ಸಲಹೆಯಂತೆ ಧ್ವನಿ-ಬೆಳಕು ವ್ಯವಸ್ಥೆಯನ್ನು ಆಧುನೀಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲಾಗಿದೆ.

ಹುಬ್ಬಳ್ಳಿಯ ಗೆಲಾಕ್ಸಿ ಕನ್ಸ್‌ಲ್ಟೆನ್ಸಿಯ ಬಿ.ಪ್ರೇಮಾನಂದ ಶೆಟ್ಟಿ ಕಟ್ಟಡ ವಿನ್ಯಾಸ ಮಾಡಿದ್ದಾರೆ. ಇಂಜಿನಿಯರ್ ಶಶಿಧರ ಶೆಟ್ಟಿ ಮೇಪು ಕಾಮಗಾರಿಯ ನಿರ್ವಹಣೆಯ ಮಾರ್ಗದರ್ಶನ ಮಾಡಿದ್ದಾರೆ.

ಮೇ.10 ಕ್ಕೆ ಲೋಕಾರ್ಪಣೆ: ನೂತನವಾಗಿ ನಿರ್ಮಾಣಗೊಂಡಿರುವ ಸಾಂಸ್ಕೃತಿಕ ಸಭಾ ಭವನಕ್ಕೆ ಹೊಳ್ಮಗೆ ವಿನೋದ ರವಿ ಶೆಟ್ಟಿ ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಮೇ.10 ರಂದು ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಹು ನಿರೀಕ್ಷಿತ ಈ ಕಟ್ಟಡವನ್ನು ಲೋಕಾರ್ಪಣೆ ಮಾಡಲು ಸಿದ್ದತೆಗಳು ನಡೆಯುತ್ತಿದೆ. ಇದೇ ಶುಭವಸರದಲ್ಲಿ ಶಾಲೆಯ ಸ್ಥಾಪನೆಗೆ ಕಾರಣರಾಗಿದ್ದ ಅಂದಿನ ಶಾಸಕ ಯಡ್ತರೆ ಮಂಜಯ್ಯ ಶೆಟ್ಟಿ ಅವರ ಪುತ್ಥಳಿ ಅನಾವರಣ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಚೇರಿ ಉದ್ಘಾಟನೆಗಳು ನಡೆಯಲಿದೆ.

ಭವನ‌ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ ಶಾಲೆಯ ಪ್ರಾರ್ಥನಾ ವಿದ್ಯಾರ್ಥಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಯಾಗಿ ನಿವೃತ್ತರಾದ ಬಳಿಕ, ಐದು ಶಿಕ್ಷಣ ಸಂಸ್ಥೆಗಳ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಿ.ಎನ್.ಶೆಟ್ಟಿ ಅವರು ಮಾತನಾಡಿ, ಎಲ್ಲದಕ್ಕೂ ಸರ್ಕಾರವನ್ನೇ ನಿರೀಕ್ಷೆ ಮಾಡಬಾರದು, ನಮ್ಮ ಬದುಕನ್ನು ರೂಪಿಸಿದ ಶಾಲೆ ಹಾಗೂ ಊರನ್ನು ಮರೆಯದೆ, ನಮ್ಮಿಂದಾದ ಸಹಾಯವನ್ನು ಮಾಡಬೇಕು. ನಾವು ಕಲಿತ ಶಾಲೆಯ ಅಭಿವೃದ್ಧಿಗೆ ಪ್ರತಿಯೊಬ್ಬ ಪ್ರಾರ್ಥನಾ ವಿದ್ಯಾರ್ಥಿಯೂ ಕಿಂಚಿತ್ ಸಹಾಯ ಮಾಡಿದರೂ, ಆ ಶಿಕ್ಷಣ ಸಂಸ್ಥೆಗಳು ನೂರಾರು ವರ್ಷಗಳ ಕಾಲ ಉಳಿಯುತ್ತದೆ. ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ಶಾಲೆಯ ಹಳೆ ವಿದ್ಯಾರ್ಥಿಗಳು ನಮ್ಮೂರು ಶಾಲೆಯ ಅವಶ್ಯಕತೆಗಳನ್ನು ಪೂರೈಸಲು ಕಾರ್ಯಯೋಜನೆ ಹಮ್ಮಿಕೊಂಡಿದ್ದೇವೆ. ಹಳೆ ವಿದ್ಯಾರ್ಥಿ ಸಂಘ ಮಾಡುತ್ತಿರುವ ಈ ಕಾರ್ಯ ನಾಡಿನ ಬೇರೆ ಊರಿನ ಶಿಕ್ಷಣಾಸಕ್ತ ಮನಸ್ಸುಗಳಿಗೂ ಪ್ರೇರಣೆಯಾಗಿ, ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶಗಳು ಇದೆ ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್‌ಕುಮಾರ ಶೆಟ್ಟಿ ನೆಂಪು, ಗೌರವಾಧ್ಯಕ್ಷರಾದ ಕೆ.ನಾರಾಯಣ ಶೆಟ್ಟಿ, ಕಾರ್ಯದರ್ಶಿ ರವಿರಾಜ್ ಶೆಟ್ಟಿ ಚಿತ್ತೂರು, ಖಜಾಂಜಿ ಸುಧಾಕರ ನೆಂಪು, ಸಲಹಾ ಸಮಿತಿ ಅಧ್ಯಕ್ಷರಾದ ಎನ್.ಆನಂದ ಶೆಟ್ಟಿ ಸಬ್ಲಾಡಿ, ಕಾರ್ಯದರ್ಶಿ ಎಚ್.ನವೀನ್‌ಚಂದ್ರ ಶೆಟ್ಟಿ ಅವರ ನೇತ್ರತ್ವದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆಗಳು ನಡೆಯುತ್ತಿದೆ.

ಊರಿನ ಶಾಲೆ ಹಾಗೂ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಯ ಜೊತೆ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಪ್ರತಿಯೊಬ್ಬರ ನಿವೃತ್ತಿಯ ಜೀವನವೂ ನೆಮ್ಮದಿಯಿಂದ ಇರುತ್ತದೆ.-ಬಿ.ಎನ್.ಶೆಟ್ಟಿ. ನಿವೃತ್ತ ಹಿರಿಯ ಅಧಿಕಾರಿ

ನಮ್ಮೂರ ಶಾಲೆ ಅಭಿವೃದ್ಧಿಯಾಗಬೇಕು ಎಂದು ಆಲೋಚನೆ ಮಾಡಿದ ಕೆಲವೇ ತಿಂಗಳ ಒಳಗೆ ಸಭಾ ಭವನದ ನಿರ್ಮಾಣ ಕಾರ್ಯ ಮುಗಿದಿರುವುದು. ಇತರ ಶಿಕ್ಷಣಾಸಕ್ತ ಮನಸ್ಸುಗಳಿಗೆ ಪ್ರೇರಣೆಯಾಗಲಿದೆ.-ಗುರುರಾಜ್ ಗಂಟಿಹೊಳೆ. ಶಾಸಕರು, ಬೈಂದೂರು

Comments are closed.