
ನವದೆಹಲಿ: ಪ್ರಸ್ತುತ ದೇಶದ ಮುಂದೆ ಕಳೆದ ವರ್ಷಕ್ಕಿಂತ ದೊಡ್ಡದಾದ ಸವಾಲಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೆ ಲಸಿಕೆ ಹಾಕಿಸುವ ಮೂಲಕ ಕೋವಿಡ್-19 ಸಾಂಕ್ರಾಮಿಕ ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಕರೆ ಹೇಳಿದ್ದಾರೆ.
ಕೊರೋನಾವೈರಸ್ ನಿರ್ವಹಣೆಯಲ್ಲಿ ವಿಶೇಷವಾಗಿ ಅರಿವು ಮೂಡಿಸುವಲ್ಲಿ ಪಂಚಾಯಿತಿಗಳ ಪಾತ್ರವನ್ನು ಶ್ಲಾಘಿಸಿರುವ ಪ್ರಧಾನಿ, ಆಗ್ಗಿಂದಾಗ್ಗೆ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವತ್ತಾ ಸ್ಥಳೀಯ ನಾಯಕರು ಕಾರ್ಯೋನ್ಮುಖರಾಗುವಂತೆ ಕರೆ ನೀಡಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ಸ್ವಾಮಿತ್ವ ಯೋಜನೆಯಡಿ ಇ-ಆಸ್ತಿ ಕಾರ್ಡ್ ವಿತರಣೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಸೋಂಕನ್ನು ತಡೆಗಟ್ಟಲಾಗಿತ್ತು. ಈ ಬಾರಿಯೂ ಅದೇ ರೀತಿ ಸ್ಥಳೀಯ ನಾಯಕತ್ವದಡಿ ಸೋಂಕು ಗ್ರಾಮೀಣ ಪ್ರದೇಶಗಳಿಗೆ ಹರಡದಂತೆ ತಡೆಗಟ್ಟುವ
ವಿಶ್ವಾಸವಿದೆ ಎಂದರು.
ಲಸಿಕೆ ಜೊತೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ದವಾಯಿ ಭಿ, ಕಡೈ ಭಿ (ಔಷಧಿಯಂತೆ ನಿರ್ಬಂಧಗಳು) ಪಂಚಾಯಿತಿಗಳ ಮಂತ್ರವಾಗಬೇಕು ಎಂದು ಸಲಹೆ ನೀಡಿದರು.
ಬಡವರಿಗೆ ನೆರವಾಗಲು ಮೇ ಹಾಗೂ ಜೂನ್ ತಿಂಗಳಲ್ಲಿ ಉಚಿತವಾಗಿ ಪಡಿತರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ 80 ಕೋಟಿ ಜನರಿಗೆ ನೆರವಾಗಲಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ಕುಟುಂಬ ಹಸಿವಿನಿಂದ ನರಳದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮೋದಿ ಹೇಳಿದರು.
Comments are closed.