ರಾಷ್ಟ್ರೀಯ

ಬಿಜೆಪಿ ನಾಯಕರಿಗೆ ಮೋಸ ಮಾಡಿದ ಅಮಿತ್​ ಷಾ ‘ಸೋದರಳಿಯ’

Pinterest LinkedIn Tumblr


ಆಗ್ರಾ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರ ಸೋದರಳಿಯ, ಅಹಮದಾಬಾದ್‌ನಿಂದ ಮಾತನಾಡುತ್ತಿದ್ದೇನೆ, ನಿಮ್ಮ ಬಳಿ ಮಾತನಾಡಬೇಕಿತ್ತು ಎಂದು ಬಿಜೆಪಿ ಶಾಸಕ ಯೋಗೇಂದ್ರ ಉಪಾಧ್ಯಾಯ ಅವರಿಗೆ ಕರೆ ಬಂದಿದೆ.

ಕರೆ ಸ್ವೀಕರಿಸಿದ ಯೋಗೇಂದ್ರ ಅವರು ಅಮಿತ್​ ಷಾ ಅವರ ಸೋದರಳಿಯ ಕರೆ ಮಾಡುತ್ತಿರುವುದರಿಂದ ಚೆನ್ನಾಗಿ ಮಾತನಾಡಿದ್ದಾರೆ. ವಿಷಯ ಕೇಳಿದಾಗ ವಿರಾಜ್​ ಷಾ, ಆಗ್ರಾದಲ್ಲಿ ಹೋಟೆಲ್ ಖರೀದಿಸಬೇಕಿತ್ತು. ಅದಕ್ಕಾಗಿ ನಿಮ್ಮ ಸಹಾಯ ಬೇಕಿತ್ತು, ನಿಮ್ಮನ್ನು ಭೇಟಿಯಾಗಿ ಸಂಪೂರ್ಣ ವಿಷಯ ತಿಳಿಸುವೆ ಎಂದಿದ್ದಾರೆ.

ನಾನೀಗ ಸದ್ಯ ದೆಹಲಿಯಲ್ಲಿ ಇದ್ದೇನೆ. ನೀವು ಬಂದರೆ ಸಿಗಬಹುದು ಎಂದು ಉಪಾಧ್ಯಾಯ ಅವರು ಹೇಳಿದ್ದಾರೆ. ಆದರೆ ವಿರಾಜ್​ ಷಾ ನೇರವಾಗಿ ಆಗ್ರಾಕ್ಕೆ ಹೋಗಿದ್ದಾರೆ. ನಂತರ ಆಗ್ರಾದಲ್ಲಿದ್ದು ಅಲ್ಲಿ ಸುತ್ತಾಟ ಮಾಡಿ ಹೋಟೆಲ್​ ನೋಡಬೇಕು, ಆದ್ದರಿಂದ ಕೆಲಸ ಮುಗಿಸಿ ಅಲ್ಲಿಗೇ ಬನ್ನಿ ಎಂದು ಉಪಾಧ್ಯಾಯರನ್ನು ವಿರಾಜ್​ ಕರೆದಿದ್ದಾರೆ.

ಆದರೆ ಉಪಾಧ್ಯಾಯ ಅವರು ತುಂಬಾ ಬಿಜಿ ಇದ್ದರು. ಆದರೆ ಖುದ್ದು ಗೃಹ ಸಚಿವರ ಸೋದರಳಿಯ ಸಹಾಯ ಕೇಳಿದಾಗ ಇಲ್ಲ ಎನ್ನಲು ಆಗುತ್ತದೆಯೆ? ಅದಕ್ಕಾಗಿ ಅವರು ತಮ್ಮ ಮಗ ವತ್ಸಾಲಯನನ್ನು ಆಗ್ರಾಕ್ಕೆ ಕಳುಹಿಸಿದರು. ಅಲ್ಲಿಲ್ಲಿ ಸುತ್ತಾಡಿದ ನಂತರ ವಿರಾಜ್​ ಷಾ 40 ಸಾವಿರ ರೂಪಾಯಿ ಬಟ್ಟೆ ಖರೀದಿಸಿ ಅದರ ಹಣವನ್ನು ಪಾವತಿ ಮಾಡುವಂತೆ ಉಪಾಧ್ಯಾಯ ಅವರ ಮಗನಿಗೆ ಹೇಳಿದ್ದಾರೆ.

ಅವರ ಮಗನ ಬಳಿ ಅಷ್ಟೊಂದು ಹಣವಿರಲಿಲ್ಲ. ಆದ್ದರಿಂದ ಆತ ತಂದೆಗೆ (ಉಪಾಧ್ಯಾರ ಅವರಿಗೆ) ಕರೆ ಮಾಡಿದ್ದಾನೆ. ಆಗಲೇ ಉಪಾಧ್ಯಾಯ ಅವರಿಗೆ ಈ ವ್ಯಕ್ತಿಯ ಬಗ್ಗೆ ಸಂದೇಹ ಶುರುವಾಗಿದೆ. ಕೂಡಲೇ ಅವರು ತಮ್ಮ ಇನ್ನೊಂದು ಮಗನಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸುವಂತೆ ಹೇಳಿದ್ದಾರೆ.

ಆ ಮಗ ಜಾಲತಾಣಗಳನ್ನೆಲ್ಲಾ ತಡಕಾಡಿದಾಗ ಅದೃಷ್ಟವಶಾತ್, ಅವನಿಗೆ ಹಿಂದೊಮ್ಮೆ ಇದೇ ರೀತಿಯ ವ್ಯಕ್ತಿ ಅಮಿತ್​ ಷಾ ಹೆಸರು ಹೇಳಿಕೊಂಡು 2016ರಲ್ಲಿ ಉಜ್ಜಯಿನಿ ಶಾಸಕರನ್ನು ವಂಚಿಸಿದ ವಿಷಯ ಮಾಧ್ಯಮಗಳಿಂದ ತಿಳಿದುಬಂದಿದೆ. ಕೂಡಲೇ ಆತ ತಂದೆಗೆ ವಿಷಯ ಮುಟ್ಟಿಸಿದ್ದಾನೆ. ಅಸಲಿಗೆ ಆ ಸುದ್ದಿಯಲ್ಲಿದ್ದ ವ್ಯಕ್ತಿ ಗಾಂಧಿನಗರ ನಿವಾಸಿ ಯಶ್ ಅಮೀನ್ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಇದನ್ನು ಉಪಾಧ್ಯಾಯ ಅವರು ಆಗ್ರಾದಲ್ಲಿರುವ ತಮ್ಮ ಹಿರಿಯ ಮಗನಿಗೆ ಈ ವಿಷಯವನ್ನು ತಿಳಿಸಿದ್ದಾರೆ. ನಂತರ ಆತ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ನಕಲಿ ಸೋದರಳಿಯನನ್ನು ಬಂಧಿಸಿದ್ದಾರೆ.

ನಂತರ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಈ ಹಿಂದೆ ಇದೇ ವ್ಯಕ್ತಿ ಉಜ್ಜಯಿನಿಯಲ್ಲಿ ಬಿಜೆಪಿ ಶಾಸಕ ಡಾ.ಮೋಹನ್ ಯಾದವ್ ಅವರ ಸಹವರ್ತಿ ನರೇಶ್ ಶರ್ಮಾ ಅವರನ್ನು ವಂಚಿಸಿದ್ದ ಎಂದು ತಿಳಿದುಬಂದಿದೆ.

Comments are closed.