ಕರಾವಳಿ

ವಿಕಲಚೇತನ ಪ್ರತಿಭೆ ಕೌಶಿಕ್ ಆಚಾರ್ಯರಿಗೆ ಮುಂಬಯಿ ಉದ್ಯಮಿಯಿಂದ ಪ್ರೋತ್ಸಾಹ ನಿಧಿ ವಿತರಣೆ

Pinterest LinkedIn Tumblr

ಮಂಗಳೂರು / ಬಂಟ್ವಾಳ, ಆಗಸ್ಟ್. 26: ಹುಟ್ಟಿನಿಂದಲೇ ಅಂಗವಿಕಲತೆಯಿಂದ ಕೈಗಳಿಲ್ಲದಿದ್ದರೂ ಕಾಳ್ಬೆರಳುಗಳಿಂದಲೇ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಅತ್ಯುತ್ತಮ ಅಂಕಗಳಿಂದ ಉತ್ತೀರ್ಣರಾಗಿ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ರಾಷ್ಟ್ರದ ಜನತೆಯ ಗಮನ ಸೆಳೆದ ಅಂತೆಯೇ ಚೌತಿಹಬ್ಬಕ್ಕೆ ಕಾಲಲ್ಲೇ ಹಸಿನ ಎಲೆಯಲ್ಲಿ ಕೊಟ್ಟಿಗೆ ಕಟ್ಟುವ ಮೂಲಕ ತನ್ಮಯನಾದ ಬಂಟ್ವಾಳ ಕೌಶಿಕ್ ಆಚಾರ್ಯ ಇವರಿಗೆ ಮುಂಬಯಿನ ಸಹೃದಯಿ ಕೊಡುಗೈದಾನಿ ಸುರೇಶ್ ಎಸ್.ಸಾಲ್ಯಾನ್ ಅಂಧೇರಿ ಪ್ರೊತ್ಸಾಹನಿಧಿಯನ್ನಿತ್ತು ಶುಭಾರೈಸಿದರು.

ಬಂಟ್ವಾಳ ಉಪವಿಭಾಗದ ಪೋಲಿಸ್ ಉಪಾಧೀಕ್ಷಕ ವಲೈಂಟಾಯ್ನ್ ಡಿಸೋಜಾ ಅವರ ಸಲಹೆಯಂತೆ ಹ್ಯೂಮನಿಟಿ ಕ್ಲಬ್ ಬಂಟ್ವಾಳ ಸದಸ್ಯ, ಪತ್ರಕರ್ತ ಜೇಸಿ ಸಂದೀಪ್ ಎಲ್.ಸಾಲ್ಯಾನ್ ಸಹಯೋಗದಲ್ಲಿ ಬಂಟ್ವಾಳ ಕಸ್ಬಾ ಇಲ್ಲಿನ ಕಂಚಿಕಾರ ಪೇಟೆ ಇಲ್ಲಿನ ನಿವಾಸಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮತ್ತು ಸದಸ್ಯ ಪತ್ರಕರ್ತ ಅರೀಫ್ ಕಲ್ಕಟ್ಟ ಭೇಟಿಯನ್ನಿತ್ತು ಸುರೇಶ್ ಸಾಲ್ಯಾನ್ ಕೊಡಮಾಡಿದ ಪ್ರೊತ್ಸಾಹನಿಧಿಯನ್ನು ಕೌಶಿಕ್‌ಗೆ ಹಸ್ತಾಂತರಿಸಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಕೌಶಿಕ್‌ನ ಮಾತಾಪಿತರಾದ ರಾಜೇಶ್ ಆಚಾರ್ಯ, ಜಲಜಾಕ್ಷಿ ಆಚಾರ್ಯ ಹಾಜರಿದ್ದು ತಮ್ಮ ಸುಪುತ್ರನ ಸಾಧನೆ ಮತ್ತು ಭವಿಷ್ಯತ್ತಿನ ಯೋಚನೆಗಳನ್ನು ತಿಳಿಸಿ ಸುರೇಶ್ ಸಾಲ್ಯಾನ್ ಮತ್ತು ಸಹಾಯಸ್ತ ನೀಡಿದ ಸೇವಾಂಕ್ಷೆಗಳಿಗೆ ವಂದಿಸಿದರು.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಡಾ| ಎಂ.ಮೋಹನ್ ಆಳ್ವ ಸೇರಿದಂತೆ ಹಲವಾರು ಗಣ್ಯರ ಪ್ರಶಂಸೆಗೆ ಪಾತ್ರರಾದ ಕೌಶಿಕ್‌ಗೆ ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ ಅವರು ಆಳ್ವಾಸ್ ಕಾಲೇಜು ಮೂಡಬಿದಿರೆ ಇಲ್ಲಿ ಕಾಲೇಜು ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವರು.

Comments are closed.