ಕರ್ನಾಟಕ

ಶೃಂಗೇರಿ, ಹೊರನಾಡು ದೇವಸ್ಥಾನಗಳಿಗೆ ಸದ್ಯಕ್ಕಿಲ್ಲ ಪ್ರವೇಶ!

Pinterest LinkedIn Tumblr


ಚಿಕ್ಕಮಗಳೂರು: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿದ್ದ ಲಾಕ್‌ಡೌನ್‌ನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದೆ. ಸದ್ಯ ದೇಶ ಅನ್‌ಲಾಕ್‌ ಪರಿಸ್ಥಿತಿಯಲ್ಲಿದ್ದು, ಸ್ಥಗಿತಗೊಂಡಿದ್ದ ಎಲ್ಲಾ ಚಟುವಟಿಕೆಗಳನ್ನು ಪುನರಾರಂಭಿಸಲಾಗುತ್ತಿದೆ.

ಪ್ರಮುಖವಾಗಿ ಧಾರ್ಮಿಕ ಕ್ಷೇತ್ರಗಳೂ ತೆರೆಯುತ್ತಿದ್ದು, ಎರಡು ತಿಂಗಳಿಗೂ ಅಧಿಕ ಕಾಲ ದೇವರ ದರ್ಶನವಿಲ್ಲದೇ ಕೊರಗುತ್ತಿದ್ದ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಬಹುದಾಗಿದೆ.

ಅದರಂತೆ ದೇವಸ್ಥಾನಗಳು, ಚರ್ಚ್ ಹಾಗೂ ಮಸೀದಿಗಳಿಗೆ ಭೇಟಿ ನೀಡಲು ಕೇಂದ್ರ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಈ ನಿಯಮಾವಳಿಗನ್ನು ಪಾಲಿಸುವುದು ಕಡ್ಡಾಯವಾಗಿದೆ.

ಇನ್ನು ರಾಜ್ಯದಲ್ಲೂ ಇಂದಿನಿಂದ ಪ್ರಮುಖ ದೇವಸ್ಥಾನಗಳು, ಚರ್ಚ್ ಹಾಗೂ ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳು ತೆರೆಯಲಿವೆ. ಧಾರ್ಮಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಆದರೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಗಳನ್ನು ತೆರೆಯದಿರುವ ನಿರ್ಧಾರ ಮಾಡಲಾಗಿದೆ.

ಶೃಂಗೇರಿ ಶಾರದಾಂಬೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ರಾಜ್ಯದ ಪ್ರಮುಖ ದೇವಸ್ಥಾನಗಳಾಗಿದ್ದು, ಇಲ್ಲಿಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದಲೂ ಭಕ್ತರು ಬರುತ್ತಾರೆ.

ಹೀಗಾಗಿ ಸದ್ಯಕ್ಕೆ ಈ ಎರಡೂ ದೇವಸ್ಥಾನಗಳನ್ನು ತೆರೆಯದಿರುವ ಕುರಿತು ಆಡಳಿತ ಮಂಡಳಿ ನಿರ್ಧರಿಸಿದೆ. ಈ ದೇವಸ್ಥಾನಗಳನ್ನು ತೆರೆಯಲು ಇನ್ನೂ ಸ್ವಲ್ಪ ದಿನಗಳ ಕಾಲಾವಕಾಶವನ್ನು ಕೋರಲಾಗಿದೆ.

ಈ ಮಧ್ಯೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಪೂಜಾ ಕಾರ್ಯಕ್ರಮವನ್ನು ಫೇಸ್‌ಬುಕ್‌ನಲ್ಲಿ ಲೈವ್ ನೋಡಬಹುದಾಗಿದ್ದು, ಆನ್‌ಲೈನ್ ಮೂಲಕ ಪ್ರಸಾದ ಪಡೆಯಬಹುದಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

Comments are closed.