
ಚೆನ್ನೈ/ತಿರುವನಂತಪುರ: ಹಿಂದೂ ಮಹಾ ಸಾಗರ ಮತ್ತು ಅರಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ತಮಿಳುನಾಡು, ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ದಿಢೀರ್ ಮಳೆ ಸುರಿಯುತ್ತಿದೆ. ತಮಿಳುನಾಡಿನಲ್ಲಿ ಮಳೆ ಸಂಬಂಧಿ ಘಟನೆಗಳಿಗೆ ಐವರು ಬಲಿಯಾಗಿದ್ದಾರೆ.
ಧಾರಾಕಾರ ಮಳೆ ತಮಿಳುನಾಡಿನಾದ್ಯಂತ ಜನ ಜೀವನವನ್ನು ತತ್ತರಿಸುವಂತೆ ಮಾಡಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನೂ 2 ದಿನಗಳ ಕಾಲ ವರುಣನ ಆರ್ಭಟ ಮುಂದುವರಿಯಲಿದ್ದು, ತಿರುವಳ್ಳೂರು, ವೆಲ್ಲೂರು, ತಿರುವಣ್ಣಾಮಲೈ, ತೂತುಕುಡಿ, ರಾಮನಾಥಪುರಂ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಚೆನ್ನೈ ಪ್ರಾದೇಶಿಕ ಕೇಂದ್ರ ಎಚ್ಚರಿಕೆ ನೀಡಿದೆ.
ಚೆನ್ನೈ ಹೊರವಲಯದಲ್ಲಿ 100ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಕಡಲೂರಿನಲ್ಲಿ ಸುಮಾರು 5 ಸಾವಿರ ಮನೆಗಳು ಮುಳುಗಿವೆ. ಕೆಎಸ್ ಪೆಟ್ಟಾಯ್ ಪ್ರದೇಶದ 500ಕ್ಕೂ ಹೆಚ್ಚು ಮಂದಿ ಮದುವೆ ಹಾಲ್ನಲ್ಲಿ ಆಶ್ರಯ ಪಡೆಯುವಂತಾಗಿದೆ. ಚೆನ್ನೈಗೆ ನೀರೊದಗಿಸುವ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ.
ರಾಜ್ಯದಲ್ಲಿ 2-3 ದಿನ ಮಳೆ ಸಾಧ್ಯತೆ
ಬೆಂಗಳೂರು: ಚಂಡಮಾರುತದ ಪರಿಚಲನೆಯಿಂದ ರಾಜ್ಯ ದಲ್ಲಿ ಮುಂದಿನ ಎರಡು-ಮೂರು ದಿನ ಸಾಧಾ ರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. 2 ದಿನಗಳಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ವಿದ್ದು, ರವಿವಾರ ಬೆಂಗಳೂರು ಸಹಿತ ಹಲವೆಡೆ ತುಂತುರು ಮಳೆ ಯಾಗಿದೆ. ಮುಂದಿನ 2-3 ದಿನ ಕರಾ ವಳಿ, ದ.ಒಳನಾಡು ಮತ್ತು ಉ. ಒಳನಾಡಿ ನಲ್ಲಿ ಮೋಡದ ವಾತಾ ವರಣ, ಚಳಿಗಾಳಿ ಜತೆಗೆ ಅಲ್ಲಲ್ಲಿ ಮಳೆಯಾಗಲಿದೆ.
ಕರಾವಳಿಯಲ್ಲಿ ಹಠಾತ್ ಮಳೆ; ಕೃಷಿಗೆ ತೊಂದರೆ
ಮಣಿಪಾಲ: ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಏಕಾಏಕಿ ಸುರಿದ ಮಳೆ ಸಮಸ್ಯೆ ಉಂಟುಮಾಡಿದೆ. ಅಕಾಲಿಕ ಮಳೆಯಿಂದ ಒಣಗಲು ಹಾಕಿದ್ದ ಅಡಿಕೆ ಫಸಲು ಒದ್ದೆಯಾ ಗಿದೆ. ಕೊಡಗಿನಲ್ಲಿ ಕಾಫಿ ಕೊಯ್ಲು ನಡೆಯು ತ್ತಿದ್ದು ಬೆಳೆಗಾರರು ಕೊಯ್ದ ಕಾಫಿ ಬೀಜ ವನ್ನು ಒಣಗಿಸಲು ಪರದಾಡುವಂತಾಗಿದೆ.
ಕೇರಳದ 3 ಜಿಲ್ಲೆಗಳಿಗೆ ಎಚ್ಚರಿಕೆ
ರವಿವಾರದಿಂದ 48 ಗಂಟೆಗಳ ಕಾಲ ಕೇರಳದಲ್ಲೂ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎರ್ನಾಕುಳಂ, ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅರಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದ ಉತ್ತರ ಭಾಗವು ಪ್ರಸಕ್ತ ವರ್ಷ ಅತ್ಯಧಿಕ ಚಂಡಮಾರುತ ಪರಿಚಲನೆಗೆ ಸಾಕ್ಷಿಯಾಗಿದೆ.
Comments are closed.