
ನವದೆಹಲಿ: ಮಾಜಿ ಉದ್ಯೋಗಿಗೆ ಲೈಂಗಿಕ ಕಿರುಕುಳ ಹಾಗೂ ಸಲಿಂಗಕಾಮಿ ಎಂದು ತಾರತಮ್ಯ ಮಾಡಿದ ಆರೋಪದ ಮೇರೆಗೆ ದೇಶದ ಸಾಪ್ಟ್ ವೇರ್ ಕಂಪನಿಗಳಲ್ಲಿ ಒಂದಾದ ಟೆಕ್ ಮಹೀಂದ್ರಾ ಕಂಪನಿಯ ಟೀಮ್ ಮ್ಯಾನೇಜರ್ ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ಮಾಜಿ ಉದ್ಯೋಗಿ ಗೌರವ್ ಪ್ರಾಮಾಣಿಕ್ ಒತ್ತಾಯಿಸಿದ ಬೆನ್ನಲ್ಲೇ, ಟೀಮ್ ಮ್ಯಾನೇಜರ್ ನನ್ನು ಕೂಡಲೇ ಜಾರಿಯಾಗುವಂತೆ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಟೆಕ್ ಮಹೀಂದ್ರಾ ಕಂಪನಿ ಶನಿವಾರ ರಾತ್ರಿ ಟ್ವಿಟ್ ಮಾಡಿತ್ತು.
ವೈವಿಧ್ಯತೆ ಹಾಗೂ ಒಳಗೊಳ್ಳುವಿಕೆಯಲ್ಲಿ ಕಂಪನಿ ನಂಬಿಕೆ ಹೊಂದಿದ್ದು, ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ಸಹಿಸುವುದಿಲ್ಲ ಎಂದು ಹೇಳಿಕೆ ನೀಡಿತ್ತು.
ಈ ಟ್ವೀಟ್ ಗೆ 400ಕ್ಕೂ ಅಧಿಕ ಸಂಖ್ಯೆಯ ಪ್ರತಿಕ್ರಿಯೆಗಳು ಬಂದಿದ್ದು, 900ಕ್ಕೂ ಹೆಚ್ಟು ಲೈಕ್ ಪಡೆದಿತ್ತು. ತಮ್ಮನ್ನು ಬೆಂಬಲಿಸಿದವರಿಗೆ ಪ್ರಾಮಾಣಿಕ್ ಧನ್ಯವಾದ ಹೇಳಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಟೆಕ್ ಮಹೀಂದ್ರಾ ಕಂಪನಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾನೆ.
ಸುಪ್ರೀಂಕೋರ್ಟ್ ಸಲಿಂಗಕಾಮವನ್ನು ಅಪರಾಧ ಅಲ್ಲ ಎಂದು ತೀರ್ಪು ನೀಡಿದ ನಂತರ 2015ರಲ್ಲಿ ತಂಡದ ಮ್ಯಾನೇಜರ್ ನೀಡಿದ ಲೈಂಗಿಕ ಕಿರುಕುಳ ಮತ್ತು ಸಲಿಂಗಕಾಮಿ ಎಂಬ ತಾರತಮ್ಯ ಕುರಿತು ತನಿಖೆ ನಡೆಸುವಂತೆ ಮಾಜಿ ಉದ್ಯೋಗಿ ನೀಡಿದ ದೂರಿಗೆ ಸ್ಪಂದಿಸಿದ ಕಂಪನಿ ತನಿಖೆ ನಡೆಸುವುದಾಗಿ ಕಳೆದ ವಾರ ತಿಳಿಸಿತ್ತು.
ಮ್ಯಾನೇಜರ್ ಲೈಂಗಿಕ ಕಿರುಕುಳ ನೀಡಿರುವುದಲ್ಲದೇ ಧರ್ಮದ ಆಧಾರದಲ್ಲಿಯೂ ನಿಂದಿಸಿದ್ದಾರೆ . ಸುಪ್ರೀಂಕೋರ್ಟ್ 377 ರದ್ದುಪಡಿಸಿದ್ದರೂ ಆತ ಸಲಿಂಗಕಾಮಿ ಎಂದು ತಾರತಮ್ಯ ಮಾಡಿದ್ದಾನೆ ಎಂಬ ಮಾಜಿ ಉದ್ಯೋಗಿ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ್ದ ಮಹೀಂದ್ರಾ ಸಮೂಹ ಅಧ್ಯಕ್ಷ ಅನಂದ್ ಮಹೀಂದ್ರಾ, ಮುಕ್ತ ಹಾಗೂ ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಸುವುದಾಗಿ ತಿಳಿಸಿದ್ದರು.
Comments are closed.