
ಹೊಸದಿಲ್ಲಿ: ಕೆಲದಿನಗಳ ಹಿಂದೆ ಬಂಧನಕ್ಕೊಳಗಾದ ನಕ್ಸಲ್ ಪರ ಸಹಾನುಭೂತಿ ಹೊಂದಿದ್ದ ಐವರು ಚಳವಳಿಗಾರರ ವಿರುದ್ಧ ಸೂಕ್ತ ದಾಖಲೆ ಮತ್ತು ಸಾಕ್ಷ್ಯಗಳು ದೊರೆತ ಬಳಿಕವಷ್ಟೇ ಅವರನ್ನು ಬಂಧಿಸಲಾಯಿತು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಮಾವೋವಾದಿ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದ ಬಂಧಿತರು ವಿವಿಧ ಕಡೆ ದಾಳಿಗೆ ಸಂಚು ರೂಪಿಸಿದ್ದರು. ಅದಕ್ಕಾಗಿ ಬೇಕಾಗುವ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಕ್ಞಲರಿಗೆ ಹಣಕಾಸು ಸಹಾಯ ಮತ್ತು ಇತರ ಅವಶ್ಯಕತೆಗಳ ಪೂರೈಕೆ ಮಾಡುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸ್ ಹೆಚ್ಚುವರಿ ಡಿಜಿ ಪರಮ್ ವೀರ್ ಸಿಂಗ್ ಹೇಳಿದ್ದಾರೆ.
ಚಳವಳಿಗಾರರ ಬಂಧನ ಕುರಿತು ವಿಪಕ್ಷ ಮತ್ತು ಎಡಪರ ಸಂಘಟನೆಗಳು ಪೊಲೀಸರ ವಿರುದ್ಧ ಆರೋಪಿಸಿದ್ದು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಹಾಗೂ ಪೂವಾಗ್ರಹಪೀಡಿತರಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಆ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಂಧಿತರು ನಕ್ಸಲರ ಜತೆ ಸಂಪರ್ಕದಲ್ಲಿದ್ದು, ಅಪರಾಧಿ ಕೃತ್ಯಕ್ಕೆ ಸಂಚು ರೂಪಿಸಿರುವ ಬಗ್ಗೆ ಮತ್ತು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸೂಕ್ತ ದಾಖಲೆ ಲಭ್ಯವಾಗಿತ್ತು. ಹೀಗಾಗಿ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜತೆಗೆ ಬಂಧಿತರಿಂದ ವಶಪಡಿಸಿಕೊಂಡ ವಿವಿಧ ಸೊತ್ತುಗಳು ಕೂಡ ಅವರ ಕೃತ್ಯಕ್ಕೆ ಪೂರಕ ಸಾಕ್ಷ್ಯ ಒದಗಿಸಿವೆ. ಬುಧವಾರ ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿ ನಕ್ಸಲ್ ಪರ ಸಹಾನುಭೂತಿ ಹೊಂದಿದ್ದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ್ದರು.
Comments are closed.