ರಾಷ್ಟ್ರೀಯ

ಮೃತಪಟ್ವ 4 ಲಕ್ಷ ಮಂದಿ ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ!

Pinterest LinkedIn Tumblr


ಲಖನೌ: ಉತ್ತರ ಪ್ರದೇಶದ ಸಮಾಜವಾದಿ ಪೆನ್ಶನ್‌ ಯೋಜನೆಯಲ್ಲಿ ಸುಮಾರು 4 ಲಕ್ಷ ಮಂದಿ ಅಕ್ರಮವಾಗಿ ಫಲಾನುಭವಿಗಳಾಗಿದ್ದರು ಎಂದು ಸಮಾಜ ಕಲ್ಯಾಣ ಸಚಿವ ರಾಮಪತಿ ಶಾಸ್ತ್ರಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಯೋಜನೆಯನ್ನು ಬಿಜೆಪಿ ರದ್ದುಗೊಳಿಸಿರುವ ಬಗ್ಗೆ ಪ್ರಶ್ನೆ ಕೇಳಿದ ಸಮಾಜವಾದಿ ಪಾರ್ಟಿ ಶಾಸಕ ನರೇಂದ್ರ ವರ್ಮ ಅವರಿಗೆ ಶಾಸ್ತ್ರಿ ಉತ್ತರ ನೀಡಿದ್ದಾರೆ.

ಹಿಂದಿನ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಕಾಲದಲ್ಲಿ ಜಾರಿಗೆ ತಂದಿದ್ದ ಯೋಜನೆಯಲ್ಲಿ ಸುಮಾರು 50 ಲಕ್ಷ ಮಂದಿ ಫಲಾನುಭವಿಗಳಿದ್ದಾರೆ. ಈ ಪೈಕಿ 4 ಲಕ್ಷ ಮಂದಿ ಪಿಂಚಣಿ ಪಡೆಯಲು ಅನರ್ಹರು ಹಾಗೂ ಒಟ್ಟಾರೆ 43 ಸಾವಿರ ಮಂದಿ ಈಗಾಗಲೇ ಮೃತಪಟ್ಟಿರುವವರೂ ಪಿಂಚಣಿ ಪಡೆಯುತ್ತಿರುವುದು ತಿಳಿದು ಬಂದಿದೆ ಎಂದು ಅವರು ಯೋಜನೆಯಲ್ಲಿ ಅಕ್ರಮ ಫಲಾನುಭವಿಗಳ ಕುರಿತು ವಿವರಿಸಿದರು.

2012ರಲ್ಲಿ ಅಧಿಕಾರಕ್ಕೆ ಬಂದ ವೇಳೆ ಸಮಾಜವಾದಿ ಪಾರ್ಟಿಯ ಪ್ರಮುಖ ಆಶ್ವಾಸನೆಗಳ ಪೈಕಿ ಪಿಂಚಣಿ ಸೌಲಭ್ಯ ಒಂದಾಗಿತ್ತು. ಆರ್ಥಿಕವಾಗಿ ಕಷ್ಟದಲ್ಲಿದ್ದು, ನೌಕರಿ ಇಲ್ಲದ ಪ್ರತಿ ಕುಟುಂಬಕ್ಕೆ ಮಾಸಿಕ 500 ರೂ. ಪಿಂಚಣಿ ನೀಡಲಾಗುತ್ತಿತ್ತು. ಈ ಮೊತ್ತ 750 ರೂ. ತಲುಪುವ ವರೆಗೆ ಪ್ರತಿ ವರ್ಷ 50ರೂ. ಹೆಚ್ಚಳ ಮಾಡುವಂತೆ ಯೋಜನೆ ರೂಪಿಸಲಾಗಿತ್ತು.

ಸರಕಾರ ನೀಡಿದ ಮಾಹಿತಿ ಪ್ರಕಾರ, ಯೋಜನೆಯಲ್ಲಿ ಒಟ್ಟಾರೆ 50 ಲಕ್ಷ ಮಂದಿ ಫಲಾನುಭವಿಗಳಿದ್ದಾರೆ. ಇದರಲ್ಲಿ 22 ಲಕ್ಷ ಮಂದಿ ಒಬಿಸಿ, 10 ಲಕ್ಷ ಮಂದಿ ಮುಸಲ್ಮಾನರು, ಅಂದಾಜು 15 ಲಕ್ಷ ಮಂದಿ ದಲಿತರು, 4 ಲಕ್ಷ ಮಂದಿ ಶ್ರೀಮಂತ ವರ್ಗದವರೂ ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ.

ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ವೆ ಮಾಡಲಾಗಿದೆ. 62 ಜಿಲ್ಲೆಗಳು ಸಂಪೂರ್ಣ ಸರ್ವೇಯಾಗಿದ್ದು, ಇನ್ನುಳಿದ 13 ಜಿಲ್ಲೆಗಳಲ್ಲೂ ಫಲಾನುಭವಿಗಳ ಬಗ್ಗೆ ವಿವರ ಪಡೆಯಲಾಗುತ್ತಿದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.

ಎಸ್‌ಪಿ ಮುಖಂಡರು, 45 ಲಕ್ಷ ಜನರಿಗೆ ಇದರಿಂದ ಪ್ರಯೋಜನವಾಗುತ್ತಿದೆ. ಹೀಗಾಗಿ ಯೋಜನೆ ಸ್ಥಗಿತವಾಗಬಾರದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ ಖನ್ನ, ಸಂಪೂರ್ಣವಾಗಿ ಫಲಾನುಭವಿಗಳ ಪರಿಶೀಲನೆ ಆಗದೆ, ಯೋಜನೆಯನ್ನು ಮತ್ತೆ ಆರಂಭಿಸಲಾಗದು ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್‌ಪಿ ನಾಯಕರು ಸಭೆಯಿಂದ ಹೊರನಡೆದು ಬಹಿಷ್ಕರಿಸಿದರು.

Comments are closed.