
ಹೊಸದಿಲ್ಲಿ: ಇಸ್ರೋದ ಮಾನವ ಸಹಿತ ಅಂತರಿಕ್ಷಯಾನ ಯೋಜನೆಯಲ್ಲಿ, ನೌಕೆ ಕೇವಲ 16ನಿಮಿಷದಲ್ಲಿ ಬಾಹ್ಯಾಕಾಶಕ್ಕೆ ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಸಿವನ್ ಹೇಳಿದ್ದಾರೆ.
ಯೋಜನೆ ಕುರಿತು ವಿಸ್ತೃತ ಮಾಹಿತಿ ನೀಡಿರುವ ಅವರು, ಯೋಜನೆಗೆ ಮೂವರು ಭಾರತೀಯರನ್ನು ಆಯ್ಕೆ ಮಾಡಲಾಗುತ್ತದೆ. ಶ್ರೀಹರಿಕೋಟಾದಿಂದ ನೌಕೆ ಉಡ್ಡಯನವಾಗಲಿದ್ದು, ಐದರಿಂದ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಭಾರತೀಯ ಅಂತರಿಕ್ಷಯಾನಿಗಳು ಇರಲಿದ್ದಾರೆ. 2022ರೊಳಗಾಗಿ ಗಗನಯಾನವನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆಗೆ ಈಗಾಗಲೇ ಡೆಡ್ಲೈನ್ ನಿಗದಿಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಅತ್ಯಾಧುನಿಕ ಜಿಎಸ್ಎಲ್ವಿ ಎಂಕೆ-3 ರಾಕೆಟ್ನ್ನು ಯೋಜನೆಗೆ ಬಳಸಲಾಗುವುದು. 300-400 ಕಿ.ಮೀ ದೂರದಲ್ಲಿರುವ ಲೊ ಅರ್ಥ್ ಆರ್ಬಿಟ್ನಲ್ಲಿ ವಿಜ್ಞಾನಿಗಳು ಗುರುತ್ವಾಕರ್ಷಣೆಗೆ ಸಂಬಂಧಿಸಿದಂತೆ ಪ್ರಯೋಗ ನಡೆಸಲಿದ್ದಾರೆ ಎಂದು ವಿವರಿಸಿದ್ದಾರೆ.
ಹಿಂದಿರುಗುವ ಪ್ರಯಾಣದಲ್ಲಿ ಸುಮಾರು 36 ನಿಮಿಷಗಳು ಬೇಕಾಗುತ್ತದೆ. ಗುಜರಾತ್ನ ಕರಾವಳಿ ಭಾಗದಲ್ಲಿ ನೌಕೆ ಇಳಿಯಲಿದೆ. ಒಂದು ವೇಳೆ ವಾಪಾಸ್ ಬರುವ ವೇಳೆ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಬಂಗಾಳಕೊಲ್ಲಿಯಲ್ಲಿ ಇಳಿಸಲು ಅಗತ್ಯ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಅಗತ್ಯವಾದ ಕ್ರ್ಯು ಮಾಡ್ಯುಲ್ ಸಿದ್ದಪಡಿಸಲಾಗಿದೆ ಎಂದು ಹೇಳಿದ್ದಾರೆ.
ಪರೀಕ್ಷಾರ್ಥವಾಗಿ ಮುಂದಿನ 30 ತಿಂಗಳೊಳಗಾಗಿ ಮೊದಲ ಮಾನವ ರಹಿತ ರಾಕೆಟ್ ಉಡ್ಡಯನವಾಗಲಿದೆ. ಅಂತೆಯೇ ಬಳಿಕದ ಆರು ತಿಂಗಳಲ್ಲಿ 2ನೇ ಮಾನವ ರಹಿತ ರಾಕೆಟ್ ಉಡ್ಡಯನ ಮಾಡಲಾಗುತ್ತದೆ. ಆ ಬಳಿಕ 40ನೇ ತಿಂಗಳಲ್ಲಿ ಮೊದಲ ಮಾನವ ಸಹಿತ ರಾಕೆಟ್ ನಭಕ್ಕೆ ನೆಗೆಯಲಿದೆ. ತೊಂದರೆಗಳಾದಲ್ಲಿ ವಿಜ್ಞಾನಿಗಳು ತಪ್ಪಿಸಿಕೊಳ್ಳಲು ಅಗತ್ಯವಾದ ಎಲ್ಲ ತಂತ್ರಜ್ಞಾನಗಳು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಅಂತರಿಕ್ಷಯಾನಕ್ಕಾಗಿ ಬಳಸುವ ಉಡುಪುಗಳು ಸಿದ್ಧವಾಗಿವೆ. ತರಬೇತಿಗಾಗಿ ಬೆಂಗಳೂರು ಹಾಗೂ ವಿದೇಶದಲ್ಲಿನ ಬಾಹ್ಯಾಕಾಶ ಕೇಂದ್ರಗಳಿಗೆ ವಿಜ್ಞಾನಿಗಳನ್ನು ಕಳಿಸಲಾಗುತ್ತದೆ. ಅಂತೆಯೇ 1984ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಸಾಗಿದ ಭಾರತೀಯ ರಾಕೇಶ್ ಶರ್ಮ ಅವರನ್ನೂ ಸಂಪರ್ಕಿಸುತ್ತಿದ್ದೇವೆ ಎಂದು ಸಿವನ್ ಹೇಳಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಪ್ರಧಾನಿ ಮೋದಿ, ಮೊದಲ ಬಾಹ್ಯಾಕಾಶ ಯಾನದಲ್ಲಿ ಮಹಿಳೆಯನ್ನೂ ಕಳಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸ್ವದೇಶಿ ಯೋಜನೆ ಇದಾಗಲಿದೆ. 2022ರ ವೇಳೆಗೆ ಭಾರತ, ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ನಾಲ್ಕನೇ ದೇಶವಾಗಲಿದೆ ಎಂದು ಹೇಳಿದ್ದಾರೆ.
10 ಸಾವಿರ ಕೋಟಿ ರೂ. ಕಡಿಮೆ ಮೊತ್ತವನ್ನು ಈ ಯೋಜನೆಗೆ ಮೀಸಲಿರಿಸಲಾಗಿದೆ. ಬಾಕಿ ದೇಶ ಖರ್ಚು ಮಾಡಿರುವುದಕ್ಕಿಂತ ಕಡಿಮೆ ಮೊತ್ತದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಪರೀಕ್ಷಾರ್ಥವಾಗಿ ಪ್ರಾಣಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಾಗುವುದಿಲ್ಲ. ಮಾನವರನ್ನು ಕಳಿಸಿದರೆ ಪ್ರಯೋಗಗಳನ್ನು ಮಾಡಬಹುದು. ಅಲ್ಲದೆ ಬಾಹ್ಯಾಕಾಶದಲ್ಲಿ ಮನುಷ್ಯನ ಮೇಲಾಗುವ ಜೈವಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಗಮನಿಸಬಹುದು ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
Comments are closed.