
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಮತ್ತು ಬಿಜೆಪಿ ವಿರುದ್ಧ ವಿವಿಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನೇ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ವಿಶೇಷ ಉಪನ್ಯಾಸ ಸರಣಿಗೆ ಆಹ್ವಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಹುಲ್ ಜತೆಗೆ ಸಿಪಿಎಂ ಕಾರ್ಯದರ್ಶಿ ಸೀತಾರಾಮ್ ಯೆಚೂರಿಗೂ ಆಹ್ವಾನ ದೊರೆಯುವ ಸಾಧ್ಯತೆಯಿದೆ. ಸೆಪ್ಟೆಂಬರ್ 17ರಿಂದ 19ರವರೆಗೆ ವಿಜ್ಞಾನ ಭವನದಲ್ಲಿ ಭಾರತದ ಭವಿಷ್ಯ: ಆರ್ಎಸ್ಎಸ್ ದೃಷ್ಟಿಕೋನ ಎಂಬ ಹೆಸರಿನಲ್ಲಿ ಭಾಗ್ವತ್ ವಿಶೇಷ ಉಪನ್ಯಾಸ ಸರಣಿ ಇರಲಿದ್ದು, ಅದಕ್ಕೆ ಭಿನ್ನ ರಾಜಕೀಯ ನಿಲುವು, ಪಕ್ಷ ಮತ್ತು ಸಿದ್ಧಾಂತ ಹೊಂದಿರುವ ಪ್ರಮುಖರನ್ನು ಆರ್ಎಸ್ಎಸ್ ಆಹ್ವಾನಿಸಲಿದೆ.
ಯಾರನ್ನು ಕರೆಯಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ಅಂತಿಮವಾಗಿಲ್ಲ. ಆ ಬಗ್ಗೆ ಸಂಘ ನಿರ್ಧರಿಸಲಿದೆ. ಆದರೆ ಭಿನ್ನ ದೃಷ್ಟಿಕೋನ ಹೊಂದಿರುವ ನಾಯಕರಿಗೆ ಆಹ್ವಾನವಿರಲಿದೆ ಎಂದು ಆರ್ಎಸ್ಎಸ್ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ತಿಳಿಸಿದ್ದಾರೆ.
ಮೂರು ದಿನಗಳ ವಿಶೇಷ ಉಪನ್ಯಾಸ ಸರಣಿಯಲ್ಲಿ ಭಾಗ್ವತ್ ಅವರು ಜನರೊಂದಿಗೆ ಪ್ರಶ್ನೋತ್ತರ ಸಹಿತ ವಿವಿಧ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ದೇಶಕ್ಕೆ ಪ್ರಮುಖವಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
ಕಳೆದ ಜೂನ್ನಲ್ಲಿ ಆರ್ಎಸ್ಎಸ್ ನಾಗಪುರದ ಪ್ರಧಾನ ಕಚೇರಿಯ ಕಾರ್ಯಕ್ರಮಕ್ಕೆ ಪ್ರಣಬ್ ಮುಖರ್ಜಿಯನ್ನು ಆಹ್ವಾನಿಸಿತ್ತು. ಅದಕ್ಕೆ ಕಾಂಗ್ರೆಸ್ ನಾಯಕರಿಂದ ಟೀಕೆ ವ್ಯಕ್ತವಾಗಿತ್ತು.
Comments are closed.