ರಾಷ್ಟ್ರೀಯ

ಕಲಿಯುಗದಲ್ಲೂ ಶ್ರವಣ ಕುಮಾರರು

Pinterest LinkedIn Tumblr


ಫರೀದಾಬಾದ್‌: ಮಕ್ಕಳು ಹೆತ್ತವರನ್ನು ನಿರ್ಲಕ್ಷಿಸಿ ತೊರೆಯುತ್ತಿರುವ ಪ್ರಕರಣ ಹೆಚ್ಚುತ್ತಿರುವ ಈ ದಿನಗಳಲ್ಲಿ ಹರಿಯಾಣದ ಫರೀದಾಬಾದ್‌ನ ನಾಲ್ವರು ಯುವಕರು ತಮ್ಮ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹರಿದ್ವಾರಕ್ಕೆ ಹೋಗಿ ಕಾನ್ವಾರ್ ಯಾತ್ರೆ ಮುಗಿಸಿಕೊಂಡು ಬಂದಿದ್ದಾರೆ.

ಪಲ್ವಾಲ್‌ನ ಫುಲ್ವಾಡಿ ಗ್ರಾಮದ 32 ಮಂದಿ ಯಾತ್ರೆ ಹೋಗಿದ್ದರು. ಅವರಲ್ಲಿ ಮಹಿಳೆಯರು ಕೂಡ ಇದ್ದರು. ಅವರ ಪೈಕಿ ಭನ್ಸಿಲಾಲ್, ರಾಜು, ಮಹೇಂದ್ರ ಮತ್ತು ಜಗಪಾಲ್ ಎಂಬ 4 ಯುವಕರು ತಮ್ಮ ವೃದ್ಧ ಪಾಲಕರನ್ನು ಶ್ರವಣ ಕುಮಾರನಂತೆ ಹೆಗಲಿನಲ್ಲಿ ಹೊತ್ತುಕೊಂಡು ಯಾತ್ರೆಗೆ ಕರೆದುಕೊಂಡು ಹೋಗಿ ಬಂದಿದ್ದಾರೆ.

ಯುವಕರ ಪಾಲಕರಾದ ಚಂದ್ರಪಾಲ್‌ಗೆ 78 ವರ್ಷವಾಗಿದ್ದರೆ, ತಾಯಿಗೆ 66 ವರ್ಷವಾಗಿತ್ತು. ಅವರಿಗೆ ಯಾತ್ರೆ ಮಾಡುವ ಮನಸ್ಸಿದ್ದರೂ, ಸೂಕ್ತ ವ್ಯವಸ್ಥೆಯಿಲ್ಲದೆ ತೊಂದರೆಯಾಗಿತ್ತು. ಯಾತ್ರೆ ಕೈಗೊಳ್ಳಬೇಕು ಎಂಬ ಇಚ್ಛೆಯನ್ನು ಅವರ ಮಕ್ಕಳು ನೆರವೇರಿಸಿಕೊಟ್ಟಿದ್ದಾರೆ. ಮಕ್ಕಳ ಶ್ರದ್ಧೆ ನೋಡಿದ ಸೆಕ್ಟರ್‌ 28-29ರ ಶಿವ್ ಶಕ್ತಿ ಕಾನ್ವಾರ್ ಶಿವಿರ್ ಅವರಿಗೆ ಶಿವನ ಮೂರ್ತಿಯನ್ನು ನೀಡಿ ಗೌರವಿಸಿದ್ದಾರೆ.

ರಾಜು ಮತ್ತು ಸಹೋದರರು ಕಳೆದ 24 ವರ್ಷಗಳಿಂದ ಕಾಲ್ನಡಿಗೆಯಲ್ಲೇ ಹರಿದ್ವಾರಕ್ಕೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಈ ಬಾರಿ ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ನೀಡಬೇಕು ಎಂಬ ಉದ್ದೇಶದಿಂದ ತಂದೆ-ತಾಯಿಯನ್ನು ಜತೆಯಲ್ಲಿ ಕರೆದೊಯ್ಯುವ ನಿರ್ಧಾರ ಮಾಡಿದ್ದರು. ಮಕ್ಕಳು ತಮ್ಮನ್ನು ಯಾತ್ರೆಗೆ ಕರೆದೊಯ್ದ ಬಗ್ಗೆ ಪ್ರತಿಕ್ರಿಯಿಸಿದ ಪಾಲಕರು, ಎಲ್ಲ ಮಕ್ಕಳು ಹೀಗೆ ನಡೆದುಕೊಂಡರೆ ಸಮಾಜ ಉತ್ತಮವಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

Comments are closed.