ರಾಷ್ಟ್ರೀಯ

ಕೇಂದ್ರದ ಪಾಲಿಗೆ ಆಂಧ್ರ ಪ್ರದೇಶ ಭಾರತದ ಭಾಗವಲ್ಲ: ಚಂದ್ರಬಾಬು ನಾಯ್ಡು ಆಕ್ರೋಶ

Pinterest LinkedIn Tumblr


ಹೊಸದಿಲ್ಲಿ/ವಿಜಯವಾಡ: ಆಂಧ್ರಪ್ರದೇಶಕ್ಕೆ ‘ಅಸಮರ್ಪಕ’ ಅನುದಾನಗಳ ಕುರಿತು ವಿತ್ತಸಚಿವ ಅರುಣ್‌ ಜೇಟ್ಲಿ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆ ಕುರಿತು ಟಿಡಿಪಿ ವರಿಷ್ಠ ಹಾಗೂ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆಂಧ್ರಪ್ರದೇಶದ ಜನತೆ ರಾಷ್ಟ್ರದ ಭಾಗವಾಗಿಲ್ಲ ಎಂಬ ಭಾವನೆ ಬರುವಂತೆ ಕೇಂದ್ರ ಸರಕಾರ ವರ್ತಿಸುತ್ತಿದೆ’ ಎಂದು ಟಿಡಿಪಿ ಸಂಸದರ ಜತೆ ನಾಯ್ಡು ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ ದುಬೈನಲ್ಲಿರುವ ನಾಯ್ಡು, ಕೇಂದ್ರದ ಇಬ್ಬರು ಸಚಿವರೂ ಸೇರಿದಂತೆ ಟಿಡಿಪಿ ಸಂಸದರ ಜತೆ ಗುರುವಾರ ತುರ್ತು ಸಭೆ ನಡೆಸಿ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.

ಬಿಜೆಪಿ ನಾಯಕತ್ವ ತಮ್ಮನ್ನು ಕಡೆಗಣಿಸಿದೆ ಎಂದು ಟಿಡಿಪಿ ಭಾವಿಸಿದೆ. ‘ರಾಜ್ಯದ ಬೇಡಿಕೆಗಳು ಈಡೇರುವ ವರೆಗೆ ಸಂಸತ್ತಿನಲ್ಲಿ ಶುಕ್ರವಾರವೂ ಪ್ರತಿಭಟನೆ ಮುಂದುವರಿಸುವಂತೆ ನಾಯ್ಡು ನಮಗೆ ಸೂಚಿಸಿದ್ದಾರೆ’ ಎಂದು ಟಿಡಿಪಿ ಸಂಸದೀಯ ಪಕ್ಷದ ನಾಯಕ ತೋಟಾ ನರಸಿಂಹನ್‌ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

ಟೆಲಿಕಾನ್ಫರೆನ್ಸ್‌ ಮೂಲಕ ಟಿಡಿಪಿ ಸಂಸದರು ಅರುಣ್‌ ಜೇಟ್ಲಿ ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ನಾಯ್ಡು ಅವರಿಗೆ ಓದಿ ಹೇಳಿದರು. ‘ಗಂಭೀರ ರೀತಿಯಲ್ಲಿ ಪ್ರತಿಭಟನೆ ನಡೆಸಿ ಎಂದು ಸಿಎಂ ನಮಗೆ ಸೂಚಿಸಿದ್ದಾರೆ. ಕಳೆದ 3-4 ದಿನಗಳಿಂದ ಕೇಂದ್ರ ಸರಕಾರ ಆಂಧ್ರದ ಕಡೆಗೆ ತೋರುತ್ತಿರುವ ವರ್ತನೆ ಬಗ್ಗೆ ಮುಖ್ಯಮಂತ್ರಿ ತೀವ್ರ ಅಸಮಾಧಾನಗೊಂಡಿದ್ದಾರೆ’ ಎಂದು ನರಸಿಂಹನ್ ತಿಳಿಸಿದರು.

Comments are closed.