ಮನೋರಂಜನೆ

ನಗಿಸುತ್ತಲೇ ಭಾವುಕ ಜಗತ್ತಿಗೆ ಕರೆದೊಯ್ಯುವ ರಾಜು: ರಾಜು ಕನ್ನಡ ಮೀಡಿಯಂ ಚಿತ್ರ ವಿಮರ್ಶೆ

Pinterest LinkedIn Tumblr

* ಶರಣು ಹುಲ್ಲೂರು


ಕನ್ನಡ ಎನ್ನುವುದು ಕೇವಲ ಭಾಷೆಯಲ್ಲ, ಅದು ಬದುಕು ಎನ್ನುವ ಮಾತನ್ನು ತಮ್ಮ ಸಿನಿಮಾದಲ್ಲಿ ಅಕ್ಷರಶಃ ನಿಜವಾಗಿಸಿದ್ದಾರೆ ‘ರಾಜು ಕನ್ನಡ ಮೀಡಿಯಂ’ ಚಿತ್ರದ ನಿರ್ದೇಶಕ ನರೇಶ್‌ ಕುಮಾರ್‌. ಈ ಸಿನಿಮಾದಲ್ಲಿ ಇವರು ಕನ್ನಡ ಅಭಿಮಾನದ ಜತೆಗೆ ಹೃದಯಕ್ಕೆ ನಾಟುವಂತಹ ಕಥೆಯನ್ನೂ ಹೇಳಿದ್ದಾರೆ. ಹಾಗಾಗಿ ಈ ಚಿತ್ರ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುತ್ತದೆ. ಹಾಗಂತ ಸಿನಿಮಾ ಬೋಧನೆಗೆ ಇಳಿಯುವುದಿಲ್ಲ, ಮನರಂಜನೆಯ ಮಸಾಲೆಯೊಂದಿಗೆ ನಾಟಿ ಭೋಜನ ಉಣಬಡಿಸುತ್ತದೆ.

ಜೀವನದಲ್ಲಿ ಯಾವುದು ಮುಖ್ಯ ಎನ್ನುವ ಹುಡುಕಾಟದೊಂದಿಗೆ ಶುರುವಾಗುವ ಸಿನಿಮಾ, ನಂತರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತ ನಮ್ಮದೇ ಜೀವನ ದರ್ಶನ ಮಾಡಿಸುತ್ತದೆ. ಅದು ಕಥಾ ನಾಯಕನ ಕಥೆಯಾಗಿದ್ದರೂ, ನಮ್ಮದೇ ಆತ್ಮಕಥೆಯ ಪುಟಗಳು ತೆರೆದುಕೊಳ್ಳುತ್ತವೆ. ರಾಜು ಎಂಬ ನಾಯಕ ಬದುಕಿನೊಂದಿಗೆ ನಮ್ಮ ಜೀವನದ ಸಮೀಕರಣ ಕೂಡ ನಡೆಯುತ್ತದೆ. ಅಷ್ಟರ ಮಟ್ಟಿಗೆ ಚಿತ್ರವನ್ನು ಗಾಢವಾಗಿ ಕಟ್ಟಿದ್ದಾರೆ ನಿರ್ದೇಶಕರು. ಮೇಲ್ನೋಟಕ್ಕೆ ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗನೊಬ್ಬನ ಸ್ಟೋರಿ ಅಂತ ಅನಿಸಿದರೂ, ಅದು ಎಲ್ಲರ ಕಥೆಯಾಗಿ ಬದಲಾಗುತ್ತದೆ.

ಕನ್ನಡ ಮೀಡಿಯಂನಲ್ಲಿ ಓದಿದ ರಾಜು (ಗುರುನಂದನ್‌) ಬೆಳೆದದ್ದು ಮಲೆನಾಡಿನಲ್ಲಿ. ಕೆಲಸ ಹುಡುಕಿಕೊಂಡು ಬರುವುದು ಬೆಂಗಳೂರಿಗೆ. ಸಿಟಿಗೆ ಬಂದವನು ಇಂಗ್ಲಿಷ್‌ ಬಾರದೇ ಕಷ್ಟ ಪಡುತ್ತಾನೆ. ಪಟ್ಟಣದಲ್ಲಿ ಸಿಗುವ ಸಾಧಕರ ಸ್ಫೂರ್ತಿಯಾಗಿ ಇಟ್ಟುಕೊಂಡು ಅವನಂತೆ ಆಗಲು ಪ್ರಯತ್ನಿಸುತ್ತಾನೆ. ಸ್ಕೂಲ್‌ ದಿನಗಳಲ್ಲಿ ಅರಳಿದ್ದ ಪ್ರೀತಿ ಮುದುರಿದ್ದರೂ, ತಾನು ಕೆಲಸ ಮಾಡುವ ಸ್ಥಳದಲ್ಲಿ ಮತ್ತೊಬ್ಬ ಹುಡುಗಿಯನ್ನು ಮೋಹಿಸುತ್ತಾನೆ. ಅವಳಿಗಾಗಿ ಶ್ರೀಮಂತನಾಗುವ ಕನಸು ಕಾಣುತ್ತಾನೆ. ಬಿಸ್ನೆಸ್‌ಗಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಿದಾಗ ಅಲ್ಲೊಂದು ಹುಡುಗಿಯ ಪರಿಚಯ ಆಗುತ್ತದೆ. ಅವಳು ಈತನನ್ನು ಇಷ್ಟಪಡುತ್ತಾಳೆ. ಜೀವನದಲ್ಲಿ ಯಾವುದು ಮುಖ್ಯ ಎಂಬ ನಿಗೂಢವನ್ನು ಭೇದಿಸಲು ಹೊರಟವನು ಕೊನೆಗೆ ಪ್ರೀತಿಯ ಸುಳಿಯಲ್ಲಿ ಸಿಲುಕುತ್ತಾನೆ. ನಂತರ ರಾಜು ಲೈಫ್‌ ಏನಾಗುತ್ತದೆ ಎನ್ನುವುದೇ ಸಿನಿಮಾ.

ಈ ಕಥೆಯಲ್ಲಿ ಅನೇಕ ತಿರುವುಗಳಿವೆ. ಮಲೆನಾಡಿನ ಸೊಬಗು ಮುದ ನೀಡುತ್ತದೆ. ಸಿಟಿ ಜೀವನದ ಸೋಗಲಾಡಿತನ ಎದುರುಗೊಳ್ಳುತ್ತದೆ. ಐಲ್ಯಾಂಡ್‌ನ ಸೌಂದರ‍್ಯ ಸಂಭ್ರಮ ತರುತ್ತದೆ. ಪಂಚಿಂಗ್‌ ಡೈಲಾಗ್‌ಗಳಿಗೆ ನಕ್ಕು, ಭಾವುಕ ಸನ್ನಿವೇಶಗಳಲ್ಲಿ ಅಯ್ಯೋ ಎನಿಸುವ ಅನುಭವ ದಕ್ಕುತ್ತದೆ.

ಈ ಸಿನಿಮಾ ಇಷ್ಟವಾಗಲು ಹಲವು ಕಾರಣಗಳಿವೆ. ಗಟ್ಟಿ ಕಥೆ, ಮೇಕಿಂಗ್‌ ಮತ್ತು ಪಾತ್ರಗಳ ಆಯ್ಕೆ. ಯಾವ ಪಾತ್ರಗಳು ಕೂಡ ಅಮುಖ್ಯ ಅನಿಸುವುದಿಲ್ಲ. ಪುಟ್ಟ ಪಾತ್ರ ಕೂಡ ತನ್ನ ನ್ಯಾಯವನ್ನು ಸಲ್ಲಿಸುವಂತೆ ಚಿತ್ರಕಥೆ ಬರೆದುಕೊಂಡಿದ್ದಾರೆ ನಿರ್ದೇಶಕರು. ಕಲಾವಿದರು ತಮ್ಮ ದೃಶ್ಯ ಮುಗಿದ ನಂತರವೂ ಮನಸ್ಸಿನಲ್ಲಿ ಉಳಿಯುತ್ತಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್‌ ಅರ್ಧ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಗುರುನಂದನ್‌ ಮೂರು ಶೇಡ್‌ನಲ್ಲೂ ಮಿಂಚಿದ್ದಾರೆ. ಮಲೆನಾಡಿನ ದೃಶ್ಯದಲ್ಲಿ ಆಶಿಕಾ ರಂಗನಾಥ್‌ ಮುದ್ದು ಮುದ್ದಾಗಿ ಕಾಣಿಸಿದ್ದಾರೆ. ಆವಂತಿಕಾ ಶೆಟ್ಟಿ ಸಖತ್‌ ಸ್ಕೋರ್‌ ಮಾಡಿದ್ದಾರೆ. ಏಂಜಲಿನಾ, ಸಾಧು ಕೋಕಿಲಾ, ಚಿಕ್ಕಣ್ಣ, ಸುಂದರ್‌, ವೀಣಾ ಸುಂದರ್‌, ಕುರಿ ಪ್ರತಾಪ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಶೇಖರ್‌ ಚಂದ್ರ ಸಿನಿಮಾಟೋಗ್ರಫಿ, ಆಯಾ ಕಾಲಮಾನ ಮತ್ತು ವಾತಾವರಣಕ್ಕೆ ಹೊಂದುವಂತಹ ಹಿನ್ನೆಲೆ ಸಂಗೀತದ ಮೂಲಕ ಕಿರಣ್‌ ರವೀಂದ್ರನಾಥ್‌ ಸಿನಿಮಾಗೆ ಜೀವ ತುಂಬಿದ್ದಾರೆ. ನರೇಶ್‌ ಕುಮಾರ್‌ ಮೇಕಿಂಗ್‌ ಮತ್ತು ಡೈಲಾಗ್‌ನಿಂದಾಗಿ ಮತ್ತೆ ಪ್ರೇಕ್ಷಕರ ಮನಸು ಗೆದ್ದಿದ್ದಾರೆ.

Comments are closed.