
ಹೊಸದಿಲ್ಲಿ: ಭ್ರಷ್ಟಾಚಾರ ವಿರೋಧಿ ಕಾನೂನು ಲೋಕಪಾಲ ವಿಧೇಯಕ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ನಾಲ್ಕು ವರ್ಷಗಳೇ ಕಳೆದರೂ ಇನ್ನೂ ಅನುಷ್ಠಾನಗೊಳಿಸಿಲ್ಲ ಏಕೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ 2013, ಪ್ರಕಾರ ಲೋಕಪಾಲ ಮುಖ್ಯಸ್ಥರು ಮತ್ತು ಸದಸ್ಯರನ್ನು ಆಯ್ಕೆ ಮಾಡಲು ಸಮ್ಮತಿ ನೀಡಿದ್ದರೂ ಇದುವರೆಗೆ ನೇಮಕಾತಿ ನಡೆದಿಲ್ಲ.
ಈ ಬಗ್ಗೆ ಟ್ವಿಟರ್ನಲ್ಲಿ ತಾಜಾ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ‘ಲೋಕಪಾಲ ವಿಧೇಯಕ ಅಂಗೀಕಾರಗೊಂಡು 4 ವರ್ಷವಾಯಿತು. ಆದರೆ ಇದುವರೆಗೆ ಲೋಕಪಾಲ ಅಸ್ತಿತ್ವದಲ್ಲಿ ಇಲ್ಲ. ಇದೇ ತಪ್ಪನ್ನು ಎಷ್ಟು ದಿನಗಳ ಕಾಲ ಮುಂದುವರಿಸುತ್ತೀರಿ ಎಂಬುದನ್ನು ಜನತೆ ತಿಳಿಯಲು ಬಯಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಲೋಕಪಾಲ ಮುಖ್ಯಸ್ಥ ಮತ್ತು ಸದಸ್ಯರ ಆಯ್ಕೆ ಸಮಿತಿಯ ಸದಸ್ಯರ ಪೈಕಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಗತ್ಯ. ಆದರೆ ಪ್ರಸ್ತುತ ಕೆಳಮನೆಯಲ್ಲಿ ವಿರೋಧ ಪಕ್ಷದಿಂದ ಯಾವೊಬ್ಬ ನಾಯಕನು ಇಲ್ಲ. ಕಾನೂನು ಪ್ರಕಾರ ಅತಿದೊಡ್ಡ ವಿರೋಧ ಪಕ್ಷದ ನಾಯಕ ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಳಗೊಂಡಿರಬೇಕು.
ಈ ದ್ವಂದ್ವಕ್ಕೆ 2017 ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ಅಂತ್ಯ ಹೇಳಿತ್ತು. ಲೋಕಪಾಲರ ಆಯ್ಕೆಯನ್ನು ವಿರೋಧ ಪಕ್ಷದ ನಾಯಕರ ಅನುಪಸ್ಥಿತಿಯಲ್ಲೂ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಕಳೆದ ತಿಂಗಳು ಭ್ರಷ್ಟಾಚಾರ ವಿರುದ್ಧ ಹೋರಾಟದ ಮುಂಚೂಣಿ ನಾಯಕ ಅಣ್ಣಾ ಹಜಾರೆ ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಲೋಕಪಾಲರ ಆಯ್ಕೆ ವಿಚಾರದಲ್ಲಿ ಕೇಂದ್ರ ಸರಕಾರದ ಧೋರಣೆಯನ್ನು ಪ್ರಶ್ನಿಸಿದ್ದರು. ಮಾರ್ಚ್ ತಿಂಗಳಿನಿಂದ ಮತ್ತೊಂದು ಸುತ್ತಿನ ಹೋರಾಟ ನಡೆಸಲು ತಯಾರಿ ನಡೆಸುತ್ತಿದ್ದಾರೆ.
Comments are closed.