
ನವದೆಹಲಿ: ಕೀನ್ಯಾದಲ್ಲಿ ಮಾನವ ಕಳ್ಳ ಸಾಗಣೆಯಾಗಿದ್ದ ಭಾರತದ ಮೂವರು ಹಾಗೂ ನೇಪಾಳದ ಏಳು ಮಂದಿ ಯುವತಿಯರನ್ನು ಭಾರತ ಸರ್ಕಾರ ರಕ್ಷಣೆ ಮಾಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಸುಷ್ಮಾ ಸ್ವರಾಜ್ ಅವರು, ಕೀನ್ಯಾದಲ್ಲಿ ಮಾನವ ಕಳ್ಳಸಾಗಣೆ ರೂಪದಲ್ಲಿ ಬಂಧಿಗಳಾಗಿದ್ದ ಮೂವರು ಭಾರತೀಯ ಯುವತಿಯರು ಹಾಗೂ ನೇಪಾಳದ 7 ಮಂದಿ ಯುವತಿಯರನ್ನು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಕೀನ್ಯಾದಲ್ಲಿ ಮಾನವ ಕಳ್ಳಸಾಗಣೆ ವ್ಯವಸ್ಥಿತ ಅಪರಾಧವಾಗಿದ್ದು, ಭಾರತೀಯ ಅಧಿಕಾರಿಗಳು ತೀವ್ರ ಶ್ರಮಪಟ್ಟು ಆ ಮಾನವ ಕಳ್ಳಸಾಗಣೆಯನ್ನು ಭೇದಿಸಿದ್ದಾರೆ. ಅಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ಅಂತೆಯೇ ಮಾನವ ಕಳ್ಳಸಾಗಣೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಸುಷ್ಮಾ ಸ್ವರಾಜ್ ಅವರು, ತುಂಬಾ ವ್ಯವಸ್ಥಿತವಾಗಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ. ಭಾರತ ಮತ್ತು ನೇಪಾಳಿ ಯುವತಿಯರ ಪಾಸ್ ಪೋರ್ಟ್ ಮತ್ತು ವೀಸಾಗಳನ್ನು ಕಿತ್ತುಕೊಂಡು ಅವರನ್ನು ಕೀನ್ಯಾದ ಮೊಂಬಸದಲ್ಲಿ ಬಂಧಿಗಳನ್ನಾಗಿ ಮಾಡಲಾಗಿತ್ತು. ಪಂಜಾಪ್ ಸರ್ಕಾರ ನೀಡಿದ್ದ ಮಾಹಿತಿ ಮೇರೆಗೆ ವಿದೇಶಾಂಗ ಇಲಾಖೆ ಕಾರ್ಯಾಚರಣೆ ನಡೆಸಿ ಕೀನ್ಯಾದಲ್ಲಿ ಏಜೆಂಟ್ ಗಳ ವಿರುದ್ಧ ದೂರು ದಾಖಲು ಮಾಡಿತ್ತು. ಇದೀಗ ಕೀನ್ಯಾ ಪೊಲೀಸರ ಸಹಕಾರದೊಂದಿಗೆ ಭಾರತದ ಮೂವರು ಯುವತಿಯರು ಹಾಗೂ ನೇಪಾಳದ 7 ಮಂದಿ ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಯುವತಿಯರ ರಕ್ಷಣೆ ಸಂಬಂಧ ಭಾರತದ ರಾಯಭಾರ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿರುವ ಸುಷ್ಮಾ ಸ್ವರಾಜ್ ಅವರು, ಕೀನ್ಯಾದಲ್ಲಿರುವ ಭಾರತದ ರಾಯಭಾರಿ ಸುಚಿತ್ರಾ ದುರೈ, ಮೊದಲ ಕಾರ್ಯದರ್ಶಿ ಕರಣ್ ಯಾದವ್ ಅವರು ಯುವತಿಯರನ್ನು ರಕ್ಷಿಸುವ ಸಂಬಂಧ ಶ್ರಮ ಪಟ್ಟಿದ್ದಾರೆ. ಅವರ ಕರ್ತವ್ಯ ನಿರ್ವಹಣೆ ಶ್ಲಾಘನೆಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ತಮಗೆ ನೆರವು ನೀಡಿದ ಕೀನ್ಯಾ ಪೊಲೀಸರಿಗೂ ಧನ್ಯವಾದ ಹೇಳುವುದಾಗಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
Comments are closed.