
ಹೈದರಾಬಾದ್: ಬಿಐಟಿಎಸ್ ಪಿಲಾನಿ-ಹೈದರಾಬಾದ್ ಕ್ಯಾಪಸ್ನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮುಖಕ್ಕೆ ಪ್ಲಾಸ್ಟಿಕ್ ಬ್ಯಾಗ್ ಸುತ್ತಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬ್ಲೂವೇಲ್ ಭೂತಕ್ಕೆ ವಿದ್ಯಾರ್ಥಿ ಬಲಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗಂಡಿಪೇಟ್ನ ಸನ್ ಸಿಟಿಯ ಮ್ಯಾಪಲ್ ಟೌನ್ ನಿವಾಸಿಯಾದ ವಿಜಯ್ ಭಾಸ್ಕರ್ ಅವರ ಪುತ್ರ ಟಿ. ವರುಣ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೃತ ವಿದ್ಯಾರ್ಥಿ ಬಿಐಟಿಎಸ್ ಪಿಲಾನಿ-ಹೈದರಾಬಾದ್ ಕ್ಯಾಪಸ್ನ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಶುಕ್ರವಾರ ವರುಣ್ ಪೋಷಕರ ಜೊತೆ ಸಹಜವಾಗಿಯೇ ಮಾತನಾಡಿದ್ದ. ಆದರೆ, ಶನಿವಾರ ಬೆಳಗ್ಗೆ ಮುಖಕ್ಕೆ ಪಾಲಿಥಿನ್ ಬ್ಯಾಗ್ ಸುತ್ತಿಕೊಂಡು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ರಾಜೇಂದ್ರನಗರ ಸಬ್ ಇನ್ಸ್ಪೆಕ್ಟರ್ ಕೆ. ವೆಂಕಟ ರೆಡ್ಡಿ ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾಗಿರುವ ವರುಣ್ ಲ್ಯಾಪ್ಟಾಪ್ ಹಾಗೂ ಮೊಬೈಲ್ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪೊಲೀಸರು ಲ್ಯಾಪ್ಟಾಪ್ ಹಾಗೂ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
Comments are closed.