ಉಡುಪಿ: ಉಡುಪಿಯ ಪ್ರಮುಖ ಪ್ರವಾಸಿ ತಾಣಗಳಾದ ಮಲ್ಪೆ ಬೀಚ್, ಪಡುಕೆರೆ ಬೀಚ್ ಮತ್ತು ಸೈಂಟ್ ಮೇರಿಸ್ ಐಲ್ಯಾಂಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಗೊಳ್ಳುವಂತೆ ಅಭಿವೃದ್ದಿಗೊಳಿಸಲಾಗುವುದು ಎಂದು ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಅವರು ಶುಕ್ರವಾರ , ಮಲ್ಪೆ ಬೀಚ್ ನಲ್ಲಿ , ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಬೆಂಗಳೂರು, ನಿರ್ಮಿತಿ ಕೇಂದ್ರ ಉಡುಪಿ, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಮತ್ತು ಕರಾವಳಿ ಪ್ರವಾಸೋದ್ಯಮಗಳ ಸಂಘಟನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಡುಪಿ ಪರ್ಬ ಹಾಗೂ ಅಡ್ವೆಂಚರ್ ಫೆಸ್ಟಿವಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಲ್ಪೆ ಬೀಚ್, ಪಡುಕೆರೆ ಬೀಚ್ ಮತ್ತು ಸೈಂಟ್ ಮೇರಿಸ್ ಐಲ್ಯಾಂಡ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಸಮುದ್ರ ತಡೆಗೋಡೆ ನಿರ್ಮಾಣ , ರಸ್ತೆಗಳ ಅಭಿವೃದ್ದಿ ಸೇರಿದಂತೆ ಈಗಾಗಲೇ 22 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಭಾರತ್ ದರ್ಶನ್ ಯೋಜನೆಯಡಿ 12 ಕೋಟಿ ರೂ ಮಂಜೂರಾಗಿದ್ದು, ಒಟ್ಟು ೩೨ ಕೋಟಿ ರೂ ಗಳ ಸಾರ್ವಕಾಲಿಕ ದಾಖಲೆ ಅನುದಾನವನ್ನು ಈ ಪ್ರವಾಸಿ ತಾಣಗಳ ಅಭಿವೃದ್ದಿಗೆ ವಿನಿಯೋಗಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಸಾಹಸ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಪ್ರತಿ ತಿಂಗಳು ಒಂದು ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುವುದು,ಈಗಾಗಲೇ ದಾಂಡೇಲಿಯಲ್ಲಿ ರಿವರ್ ರ್ಯಾಪ್ಟಿಂಗ್ ಕ್ರೀಡೆ ಆಯೋಜಿಸಲಾಗಿದೆ ಎಂದು ಹೇಳಿದರು.
ಉಡುಪಿಯಲ್ಲಿ 3 ದಿನಗಳ ಕಾಲ ನಡೆಯುವ ಉಡುಪಿ ಪರ್ಬ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ದೇಗಳನ್ನು ಆಯೋಜಿಸುತ್ತಿದ್ದು, ರಾಷ್ಟ್ರಮಟ್ಟದ ಈಜು ಸ್ಪರ್ದೇಯನ್ನು ಡಿಸೆಂಬರ್ 30 ರಂದು ಆಯೋಜಿಸದ್ದು, ಈ ಸ್ಪರ್ದೇಯಲ್ಲಿ ವಿಜೇತರಾದವರು ನೇರವಾಗಿ ವಿಶ್ವ ಈಜು ಸ್ಪರ್ದೇಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ಹೇಳಿದ ಸಚಿವರು, ಪ್ರಸ್ತುತ ನಡೆಯುತ್ತಿರುವ ಉಡುಪಿ ಪರ್ಬ ಕಾರ್ಯಕ್ರಮವು ಪ್ರತಿ ವರ್ಷ ನಡೆಯುವಂತಾಗಲಿ ಎಂದರು.
ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ಆರ್ಶೀವಚನ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ್ ಸಿಇಓ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ , ಕೋಸ್ಟಲ್ ಟೂರಿಸಂ ನ ಮನೋಹರ್ ಶೆಟ್ಟಿ , ಪ್ರಸಿದ್ದ ಡ್ರಮ್ ವಾದಕ ಶಿವಮಣಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಸ್ವಾಗತಿಸಿದರು, ಪೌರಾಯುಕ್ತ ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು.
ಉಡುಪಿ ಪರ್ಬದ ಅಂಗವಾಗಿ ಇಂದು , ಮರಳು ಶಿಲ್ಪ ರಚನೆ ಹಾಗೂ ಗಾಳಿ ಪಟ ಸ್ಪರ್ಧೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ನಂತರ, ಪ್ರಸಿದ್ದ ಸಂಗೀತಗಾರರಾದ ಶಿವಮಣಿ ಮತ್ತು ತಂಡದವರಿಂದ ವಾದ್ಯ ಸಂಗೀತ ಕಾರ್ಯಕ್ರಮ ನಡೆಯಿತು.
Comments are closed.